ಅದಾನಿ-ಹಿಂಡೆನ್‌ಬರ್ಗ್ ವರದಿ ಮಾಡದಂತೆ ಮಾಧ್ಯಮಕ್ಕೆ ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Update: 2023-02-24 05:48 GMT

ಹೊಸದಿಲ್ಲಿ: ಅದಾನಿ-ಹಿಂಡೆನ್‌ಬರ್ಗ್ ವಿಚಾರವಾಗಿ ನ್ಯಾಯಾಲಯವು ಆದೇಶವನ್ನು ಪ್ರಕಟಿಸುವವರೆಗೆ ಮಾಧ್ಯಮಗಳು ಆ ವಿಷಯದ ಕುರಿತು ವರದಿ ಮಾಡದಂತೆ ನಿರ್ಬಂಧಿಸಬೇಕೆಂಬ ವಕೀಲ  ಎಂ.ಎಲ್. ಶರ್ಮಾ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

"ನಾವು ಎಂದಿಗೂ ಮಾಧ್ಯಮದ ವಿರುದ್ಧ ಯಾವುದೇ ತಡೆಯಾಜ್ಞೆ ನೀಡಲು ಹೋಗುವುದಿಲ್ಲ" ಎಂದು ಸಿಜೆಐ ಡಿ.ವೈ. ಚಂದ್ರಚೂಡ್  ಅವರು ಅದಾನಿ-ಹಿಂಡನ್ ಬರ್ಗ್  ವಿಷಯದ ಕುರಿತು ಮಾಧ್ಯಮಗಳು ವರದಿ ಮಾಡದಂತೆ ನಿರ್ಬಂಧಿಸುವಂತೆ ಶರ್ಮಾ ಮನವಿ ಮಾಡಿದಾಗ ಹೇಳಿದ್ದಾರೆ.

ಹಿಂಡೆನ್‌ಬರ್ಗ್ ರಿಸರ್ಚ್ ವಿರುದ್ಧ ತನಿಖೆಯನ್ನು ಕೋರಿ ಪಿಐಎಲ್ ಸಲ್ಲಿಸಿರುವ ಶರ್ಮಾ, ಮಾಧ್ಯಮವು ಸಂಚಲನವನ್ನು ಸೃಷ್ಟಿಸುತ್ತಿದೆ ಎಂದು ಹೇಳುವ ಮೂಲಕ ತಮ್ಮ ವಿನಂತಿಯನ್ನು ಪುನರಾವರ್ತಿಸಿದಾಗ "ಸಮಂಜಸವಾದ ವಾದವನ್ನು ಮಾಡಿ, ಮಾಧ್ಯಮಕ್ಕೆ ತಡೆಯಾಜ್ಞೆ ನೀಡುವುದಿಲ್ಲ" ಎಂದು  ಸಿಜೆಐ ಚಂದ್ರಚೂಡ್ ಪುನರುಚ್ಚರಿಸಿದರು.

ಪೀಠವು ಶೀಘ್ರದಲ್ಲೇ ಆದೇಶಗಳನ್ನು ನೀಡಲಿದೆ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ಕಳೆದ ವಾರ ಸಿಜೆಐ ನೇತೃತ್ವದ ಪೀಠವು ಅದಾನಿ-ಹಿಂಡೆನ್‌ಬರ್ಗ್ ಗುದ್ದಾಟದಿಂದ ಭಾರತೀಯ ಹೂಡಿಕೆದಾರರನ್ನು ರಕ್ಷಿಸಲು ನಿಯಂತ್ರಕ ಕಾರ್ಯವಿಧಾನವನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವ ಆದೇಶವನ್ನು ಕಾಯ್ದಿರಿಸಿತ್ತು ಎಂಬುದನ್ನು ಸ್ಮರಿಸಬಹುದು.

ಪ್ರಸ್ತಾವಿತ ಸಮಿತಿಯಲ್ಲಿ ಸೇರ್ಪಡೆಗಾಗಿ ಮುಚ್ಚಿದ ಕವರ್‌ನಲ್ಲಿ ಕೇಂದ್ರ ಸರಕಾರ ಸೂಚಿಸಿದ ಹೆಸರುಗಳನ್ನು ಸ್ವೀಕರಿಸಲು ಪೀಠವು ನಿರಾಕರಿಸಿದೆ. ಪೀಠವು ಹಲವು ಪಿಐಎಲ್‌ಗಳನ್ನು ವಿಚಾರಣೆ ನಡೆಸುತ್ತಿದೆ. ಹಿಂಡೆನ್‌ಬರ್ಗ್ ವಿರುದ್ಧ ತನಿಖೆಯನ್ನು ಕೋರಿ ಎರಡು ಅರ್ಜಿಗಳು ಹಾಗೂ  ಅದಾನಿ ಗುಂಪಿನ ವಿರುದ್ಧ ತನಿಖೆಯನ್ನು ಕೋರಿ ಇನ್ನೆರಡು ಪಿಐಎಲ್ ಸಲ್ಲಿಸಲಾಗಿದೆ.

Similar News