×
Ad

ಲೋಕಸಭಾ ಚುನಾವಣೆ: ಬಿಜೆಪಿಯನ್ನು ಸೋಲಿಸಲು ಸಮಾನಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ; ಖರ್ಗೆ

Update: 2023-02-25 22:05 IST

ರಾಯಪುರ (ಛತ್ತೀಸ್ಗಡ),ಫೆ.25: 2024ರ ಲೋಕಸಭಾ ಚುನಾವಣೆಗಳಲ್ಲಿ ಜನವಿರೋಧಿ ಬಿಜೆಪಿ ಸರಕಾರವನ್ನು ಸೋಲಿಸಲು ಸಮಾನಮನಸ್ಕ ಪಕ್ಷಗಳೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳುವ ಮೂಲಕ ಕಾರ್ಯಸಾಧ್ಯ ಪರ್ಯಾಯವೊಂದನ್ನು ರೂಪಿಸಲು ಕಾಂಗ್ರೆಸ್ ಎದುರುನೋಡುತ್ತಿದೆ ಎಂದು ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ.

ಶುಕ್ರವಾರ ಕಾಂಗ್ರೆಸ್ನ 85ನೇ ಪೂರ್ಣಾಧಿವೇಶನದಲ್ಲಿ ಮಾತನಾಡಿದ ಅವರು,ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ವೌಲ್ಯಗಳ ಮೇಲೆ ನಿರಂತರ ದಾಳಿ,ಚೀನಾ ಗಡಿಯಲ್ಲಿ ರಾಷ್ಟ್ರೀಯ ಭದ್ರತೆಯ ಸಮಸ್ಯೆಗಳು,ಸಾರ್ವಕಾಲಿಕ ಅಧಿಕ ಹಣದುಬ್ಬರ ಮತ್ತು ದಾಖಲೆಯ ನಿರುದ್ಯೋಗದಂತಹ ಹಲವಾರು ಸವಾಲುಗಳನ್ನು ದೇಶವು ಎದುರಿಸುತ್ತಿದೆ. ಪ್ರಚಲಿತ ಕಠಿಣ ಸ್ಥಿತಿಯಲ್ಲಿ ಕಾಂಗ್ರೆಸ್ ಸಮರ್ಥ ಮತ್ತು ನಿರ್ಣಾಯಕ ನಾಯಕತ್ವವನ್ನು ನೀಡಬಲ್ಲ ದೇಶದ ಏಕೈಕ ಪಕ್ಷವಾಗಿದೆ ಎಂದು ಹೇಳಿದರು.

2014ರಿಂದ 2014ರವರೆಗೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ದೇಶದ ಜನರಿಗೆ ಸೇವೆಯನ್ನು ಸಲ್ಲಿಸಿತ್ತು ಎಂದರು. ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ,ದಿಲ್ಲಿಯಲ್ಲಿ ಕುಳಿತಿರುವವರ ಡಿಎನ್ಎ ಬಡವರ ವಿರೋಧಿಯಾಗಿದೆ,ಅವರು ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು. ದೇಶದಲ್ಲಿಯ ಪ್ರಚಲಿತ ಸ್ಥಿತಿಯ ವಿರುದ್ಧ ಜನಾಂದೋಲನಕ್ಕೆ ಅವರು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ದಾಳಿ ನಡೆಸಿದ ಅವರು,ತನ್ನನ್ನು ‘ಪ್ರಧಾನ ಸೇವಕ’ ಎಂದು ಕರೆದುಕೊಳ್ಳುವ ವ್ಯಕ್ತಿ ತನ್ನ ‘ಸ್ನೇಹಿತರ ’ ಹಿತಾಸಕ್ತಿಗಳನ್ನು ಪೂರೈಸುತ್ತಿದ್ದಾರೆ ಎಂದು ಆರೋಪಿಸಿದರು. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಪಿತೂರಿ ನಡೆದಿದೆ ಎಂದೂ ಆರೋಪಿಸಿದ ಖರ್ಗೆ,ಆದರೆ ಕಾಂಗ್ರೆಸ್ ಪ್ರತಿಯೊಬ್ಬರನ್ನೂ ಒಗ್ಗೂಡಿಸಲು ಶ್ರಮಿಸುತ್ತಿದೆ ಎಂದರು.

Similar News