ಮಮತಾ ಬ್ಯಾನರ್ಜಿ ವಿರುದ್ಧದ ಹೇಳಿಕೆಗಾಗಿ ಬಂಗಾಳ ಕಾಂಗ್ರೆಸ್ ವಕ್ತಾರನ ಬಂಧನ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಕಾಂಗ್ರೆಸ್ ವಕ್ತಾರ ಕೌಸ್ತವ್ ಬಾಗ್ಚಿ ಅವರನ್ನು ಶನಿವಾರ ಬೆಳಗ್ಗೆ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ಬುರ್ಟೊಲ್ಲಾ ಪೊಲೀಸ್ ಠಾಣೆಯ ದೊಡ್ಡ ತಂಡವು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬ್ಯಾರಕ್ಪೋರ್ನಲ್ಲಿರುವ ಬಾಗ್ಚಿ ಅವರ ನಿವಾಸದ ಮೇಲೆ ಮುಂಜಾನೆ 3.30 ರ ಸುಮಾರಿಗೆ ದಾಳಿ ನಡೆಸಿ ಅವರನ್ನು ಬಂಧಿಸಿದೆ ಎಂದು ಪೊಲೀಸರು ಹೇಳಿದರು.
ಮುಖ್ಯಮಂತ್ರಿ ವಿರುದ್ಧದ ಹೇಳಿಕೆಗಾಗಿ ಶುಕ್ರವಾರ ಬಾಗ್ಚಿ ವಿರುದ್ಧ ಬುರ್ಟೊಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸಾಗರ್ದಿಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರ ಮೇಲೆ "ವೈಯಕ್ತಿಕ ದಾಳಿ" ನಡೆಸಿದ್ದಕ್ಕಾಗಿ ಸಿಎಂ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ವಕೀಲರಾಗಿರುವ ಬಾಗ್ಚಿ ತೀಕ್ಷ್ಣವಾಗಿ ಟೀಕಿಸಿದ್ದಾರೆ.