×
Ad

ಪ್ರಿಯಾಂಕಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಜೀವ ಬೆದರಿಕೆ ಆರೋಪ ಹೊರಿಸಿದ ಬಿಗ್ ಬಾಸ್-16ರ ಸ್ಪರ್ಧಿ ಅರ್ಚನಾ

Update: 2023-03-08 10:49 IST

ಮೀರತ್: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತ ಸಹಾಯಕ (ಪಿಎ) ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಿಗ್ ಬಾಸ್-16 ಟಾಪ್-5 ಫೈನಲಿಸ್ಟ್ ಅರ್ಚನಾ ಗೌತಮ್ ಆರೋಪಿಸಿದ್ದಾರೆ.

ಅರ್ಚನಾ ಗೌತಮ್ ಅವರ ತಂದೆ ತಮ್ಮ ಮಗಳಿಗೆ "ಜೀವ ಬೆದರಿಕೆ"  ಇದೆ ಎಂದು ದೂರು ನೀಡಿದ ನಂತರ ಸಂದೀಪ್ ಸಿಂಗ್ ವಿರುದ್ಧ ಆರೋಪ ಹೊರಿಸಲಾಗಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರ್ಚನಾ ಗೌತಮ್ ಅವರು ಇತ್ತೀಚೆಗೆ ಛತ್ತೀಸ್‌ಗಢದ ರಾಯ್ಪುರದಲ್ಲಿ ಮುಕ್ತಾಯವಾದ ಮಹಾಧಿವೇಶನದಲ್ಲಿ ಪಾಲ್ಗೊಂಡಿದ್ದಾಗ ಪ್ರಿಯಾಂಕಾ ಗಾಂಧಿ ವಾದ್ರಾರ ಆಪ್ತ ಸಹಾಯಕ ಸಂದೀಪ್ ಸಿಂಗ್ ಅವರಿಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಜಾತಿನಿಂದನೆಯನ್ನೂ ಆಕೆಯ ವಿರುದ್ಧ ಬಳಸಿದ್ದಾರೆ ಎಂದು ದೂರಲಾಗಿದೆ.

ಅರ್ಚನಾ  ಗೌತಮ್ ಅವರು ಫೇಸ್‌ಬುಕ್ ಲೈವ್‌ನಲ್ಲಿ ಘಟನೆಯ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

"ಪಕ್ಷಕ್ಕೆ ಹೊರೆಯಾಗಿರುವ ಅಂಥವರನ್ನು ಅವರೇಕೆ ಇಟ್ಟುಕೊಂಡಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಸಂದೀಪ್ ಸಿಂಗ್ ಕಾರಣಕ್ಕೆ ನಮ್ಮಂಥ ಅನೇಕ ಕಾರ್ಯಕರ್ತರ ಸಂದೇಶಗಳು ಪ್ರಿಯಾಂಕಾ ಗಾಂಧಿಯವರನ್ನು ತಲುಪುತ್ತಿಲ್ಲ" ಎಂದು ಕಿಡಿ ಕಾರಿದ್ದರು. ಇದಲ್ಲದೆ ಸಂದೀಪ್ ಸಿಂಗ್ ನನ್ನನ್ನು ಪೊಲೀಸ್ ಲಾಕಪ್‌ಗೆ ಹಾಕಿಸುವುದಾಗಿ ಬೆದರಿಸಿದರು ಎಂದೂ ದೂರಿದ್ದರು.

ಜಾತಿ ನಿಂದನೆಯನ್ನು ಮಾಡಿದ್ದಾರೆ  ಎಂದು ಉತ್ತರ ಪ್ರದೇಶದ ಮೀರತ್‌ನ ಪರ್ತಾಪುರ್ ಪೊಲೀಸ್ ಠಾಣೆಯಲ್ಲಿ ಅರ್ಚನಾ ತಂದೆ ದೂರು ದಾಖಲಿಸಿದ್ದಾರೆ.

ಮೀರತ್ ಪೊಲೀಸರು ಕ್ರಿಮಿನಲ್ ಬೆದರಿಕೆ ಹಾಗೂ  ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

"ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಹ್ವಾನದ ಮೇರೆಗೆ ರಾಯ್ಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಮಹಾಧಿವೇಶನದಲ್ಲಿ ನನ್ನ ಪುತ್ರಿ ಅರ್ಚನಾ ಗೌತಮ್ ಪಾಲ್ಗೊಂಡಿದ್ದಳು. ಆಕೆ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಭೇಟಿಯಾಗಲು ಸಂದೀಪ್ ಸಿಂಗ್ ಬಳಿ ಸಮಯಾವಕಾಶ ಕೇಳಿದ್ದಾಳೆ. ಆದರೆ, ಆತ ನನ್ನ ಪುತ್ರಿಯನ್ನು ಪ್ರಿಯಾಂಕಾ ಗಾಂಧಿ ವಾದ್ರಾಗೆ ಪರಿಚಯಿಸಲು ನಿರಾಕರಿಸಿದ್ದಾನೆ. ಅಲ್ಲದೆ ಜಾತಿನಿಂದನೆ ಹಾಗೂ ಅವಾಚ್ಯ ಶಬ್ದಗಳೊಂದಿಗೆ ಅರ್ಚನಾಳೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ. ಇದರೊಂದಿಗೆ, ಆಕೆಯನ್ನು ಕೊಲ್ಲುವ ಬೆದರಿಕೆಯನ್ನೂ ಒಡ್ಡಿದ್ದಾನೆ" ಎಂದು ಅರ್ಚನಾ ಗೌತಮ್ ಅವರ ತಂದೆ ಗೌತಮ್ ಬುಧ್ ಆರೋಪಿಸಿದ್ದಾರೆ.

"ಅರ್ಚನಾ ಗೌತಮ್ ಅವರ ತಂದೆಯ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಗ್ ಬಾಸ್ ಸ್ಪರ್ಧಿ ಹಾಗೂ ಕಾಂಗ್ರೆಸ್ ನಾಯಕಿ ಅರ್ಚನಾ ಗೌತಮ್ ಅವರಿಗೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾರ ಆಪ್ತ ಸಹಾಯಕನ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ" ಎಂದು ಮೀರತ್ ನಗರ ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ಸಿಂಗ್ ತಿಳಿಸಿದ್ದಾರೆ.

Full View

Similar News