ಕಾರ್ಕಳ: ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ಅಪಹರಣ

Update: 2023-03-12 16:10 GMT

ಕಾರ್ಕಳ, ಮಾ.12: ಮಹಿಳೆಯ ಕತ್ತಿನಲ್ಲಿದ್ದ ಸರ ಸರ ಅಪಹರಣ ಮಾಡಿರುವ ಘಟನೆ ಮಾ.10ರಂದು ತಡರಾತ್ರಿ ಕುಕ್ಕುಂದೂರು ಎಂಬಲ್ಲಿ ನಡೆದಿದೆ.

ಕುಕ್ಕುಂದೂರಿನ ಗೋಕುಲ್‌ದಾಸ್ ಕಾಮತ್ ಎಂಬವರ ಪತ್ನಿ ಕೆ.ಗಾಯತ್ರಿ ಕಾಮತ್(64) ಎಂಬವರು ಕಾರ್ಕಳ ಮಾರಿಗುಡಿಯಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ ಮುಗಿಸಿ ರಾತ್ರಿ ಮನೆಗೆ ವಾಪಾಸ್ಸು ಬಂದಿ ದ್ದರು. ಪತಿ ಮನೆಯ ಬೀಗ ತೆಗೆಯುತ್ತಿರುವಾಗ, ಪತ್ನಿ ಗಾಯತ್ರಿ ಮನೆಯ ಗೇಟು ಹಾಕುತ್ತಿದ್ದರು.

ಈ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಬ್ಬರು ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದು ಗಾಯತ್ರಿ ಅವರ ಕುತ್ತಿಗೆಯಲ್ಲಿದ್ದ ನಾಲ್ಕೂವರೆ ಪವನ್ ತೂಕದ ಚಿನ್ನದ ಗುಂಡು, 2 ಹವಳ ಮತ್ತು 2 ಲಕ್ಷ್ಮಿ ತಾಳಿ ಇರುವ ಚಿನ್ನದ  ಕರಿಮಣಿ ಸರ ಮತ್ತು ಐದೂವರೆ ಪವನ್ ತೂಕದ ಚಿನ್ನದ ತಾಳಿ ಇರುವ ಹವಳದ ಚಿನ್ನದ ಮಾಂಗಲ್ಯ ಸರಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಇವುಗಳ ಒಟ್ಟು ಮೌಲ್ಯ 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News