ತೆಲುಗು ಬಾವುಟ ಹಾರುತ್ತಿದೆ ಎಂದ ಜಗನ್‌ ರೆಡ್ಡಿಯನ್ನು ಟೀಕಿಸಿದ ಅದ್ನಾನ್‌ ಸಮಿಗೆ ನೆಟ್ಟಿಗರಿಂದ ಮತ್ತೆ ವಿವಿಧತೆಯ ಪಾಠ

ಆರ್‌ಆರ್‌ಆರ್‌ ಚಿತ್ರದ ಗೀತೆಗೆ ಆಸ್ಕರ್

Update: 2023-03-14 15:54 GMT

ಹೊಸದಿಲ್ಲಿ: ಅತ್ಯುತ್ತಮ ಮೂಲಗೀತೆಗಾಗಿ ಆಸ್ಕರ್‌ ಪ್ರಶಸ್ತಿಯನ್ನು ಪಡೆದಿರುವ RRR ಚಿತ್ರವನ್ನು ಅಭಿನಂದಿಸಲು ಆಂಧ್ರ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ (Andhra Pradesh CM YS Jagan Mohan Reddy) ಮಾಡಿರುವ ಟ್ವೀಟ್‌ ಅನ್ನು ಖಂಡಿಸುವ ಮೂಲಕ ಗಾಯಕ ಅದ್ನಾನ್‌ ಸಮಿ (Adnan Sami) ವಿವಾದ ಸೃಷ್ಟಿಸಿದ್ದಾರೆ. 

ಆಸ್ಕರ್‌ ಗೆಲ್ಲುತ್ತಿದ್ದಂತೆ, ಅಭಿನಂದಿಸಿ ಟ್ವೀಟ್‌ ಮಾಡಿದ್ದ ಜಗನ್‌ ರೆಡ್ಡಿ, “#ತೆಲುಗು ಬಾವುಟ ಎತ್ತರಕ್ಕೆ ಹಾರುತ್ತಿದೆ! ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ತಕ್ಕ ಮನ್ನಣೆಯನ್ನು ನೀಡುತ್ತಿರುವ ನಮ್ಮ ಜಾನಪದ ಪರಂಪರೆಯನ್ನು ತುಂಬಾ ಸುಂದರವಾಗಿ ಆಚರಿಸುವ ತೆಲುಗು ಹಾಡಿನ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಚಿತ್ರತಂಡವನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಾಯಕ ಅದ್ನಾನ್‌ ಸಮಿ, “ಬಾವಿಯಲ್ಲಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆಗೆ ಸಮುದ್ರದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಪ್ರಾದೇಶಿಕ ವಿಭಜನೆಯನ್ನು ಸೃಷ್ಟಿಸುವುದಕ್ಕಾಗಿ ಮತ್ತು ರಾಷ್ಟ್ರೀಯ ಹೆಮ್ಮೆಯ ಮನೋಭಾವವನ್ನು ಅಳವಡಿಸಿಕೊಳ್ಳಲು ಅಥವಾ ಬೋಧಿಸಲು ಸಾಧ್ಯವಾಗದೆ ಇರುವುದಕ್ಕೆ ನಿಮಗೆ ನಾಚಿಕೆಯಾಗಬೇಕು” ಎಂದು ಸಮಿ ಟ್ವೀಟ್‌ ಮಾಡಿದ್ದಾರೆ.

ಸಮಿಯ ಟ್ವೀಟ್‌ಗೆ ತೆಲುಗರು ಸೇರಿದಂತೆ ಹಲವರು ಆಕ್ಷೇಪವೆತ್ತಿದ್ದಾರೆ. ಸಮಿಗೆ ಒಕ್ಕೂಟ ವ್ಯವಸ್ಥೆಯ ಪಾಠವನ್ನು  ನೆಟ್ಟಿಗರು ಮಾಡಿದ್ದಾರೆ. 

ಇನ್ನು ಕೆಲವರು ಇದುವರೆಗೂ ಇಲ್ಲದ ಭಾರತೀಯ ಚಿತ್ರರಂಗ ಎನ್ನುವ ಪರಿಕಲ್ಪನೆಯನ್ನು ಪ್ರಶ್ನಿಸಿದ್ದಾರೆ. ನಮ್ಮ ಅಸ್ತಿತ್ವವನ್ನು ಇದುವರೆಗೂ ಒಪ್ಪದಿದ್ದ, ಭಾರತೀಯ ಚಿತ್ರರಂಗದ ಅರಸರು ಎಂದು ಭಾವಿಸಿದ್ದ ಬಾಲಿವುಡ್‌ ಮಂದಿಗೆ ನಮ್ಮ ಚಿತ್ರಗಳ ಮೂಲಕ ಉತ್ತರ ನೀಡಿದ್ದೇವೆ. ಈಗ ಆಸ್ಕರ್ ಪ್ರಶಸ್ತಿಯೊಂದಿಗೆ ನಾವು ಅದನ್ನು ನಮ್ಮ ತಂತ್ರಜ್ಞರೊಂದಿಗೆ ನಮ್ಮ ನಿರ್ಮಾಪಕ ನಮ್ಮ ನಿರ್ದೇಶಕರೊಂದಿಗೆ ಸಾಬೀತು ಮಾಡಿದ್ದೇವೆ. ಆದ್ದರಿಂದ ಇದು ತೆಲುಗು ಚಲನಚಿತ್ರದ ಯಶಸ್ಸು ಎಂಬುದು ಸ್ಪಷ್ಟ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.  

ಮತ್ತೊಬ್ಬರು ಪ್ರತಿಕ್ರಿಯಿಸಿ, “ಸರ್, ರಾಷ್ಟ್ರೀಯತೆ ಒಳ್ಳೆಯದು. ಆದರೆ ನೀವು ಭಾಷೆಗೆ ಮನ್ನಣೆ ನೀಡದೆ ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತರುವಾಗ ಅದು ಪ್ರಾದೇಶಿಕ ಭಾಷೆಗಳಿಗೆ ಕೆಟ್ಟದು. ಭಾರತವು ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ವೈವಿಧ್ಯತೆ ಅಲ್ಲ. ಮೊದಲು ಭಾಷೆ (ವೈವಿಧ್ಯತೆ)ಗೆ ಗೌರವ ನೀಡಿ ನಂತರ ಭಾರತಕ್ಕೆ (ಏಕತೆಗೆ) ಮನ್ನಣೆಗಳನ್ನು ನೀಡಿ.” ಎಂದು ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆಯೂ ಇದೇ ಚಿತ್ರದ ಗೀತೆಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಬಂದಾಗ ಜಗನ್‌ ರೆಡ್ಡಿ ಹಾಕಿದ್ದ ಟ್ವೀಟ್‌ಗೆ ಆಕ್ಷೇಪವೆತ್ತಿದ್ದ ಸಮಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: 'ತೆಲುಗು ಧ್ವಜ' ಪದ ಬಳಕೆಗೆ ಆಕ್ಷೇಪಿಸಿದ ಗಾಯಕ ಅದ್ನಾನ್‌ ಸಮಿಗೆ ವಿವಿಧತೆಯಲ್ಲಿ ಏಕತೆಯ ಪಾಠ ಮಾಡಿದ ನಟಿ ರಮ್ಯಾ

Similar News