×
Ad

ಶ್ರೀನಗರದಲ್ಲಿ ನೀಡಿದ ಹೇಳಿಕೆಗೆ ರಾಹುಲ್ ಗಾಂಧಿಗೆ ದಿಲ್ಲಿ ಪೊಲೀಸ್ ನೋಟಿಸ್

ಮೋದಿ-ಅದಾನಿ ಸಂಬಂಧದ ಕುರಿತು ಕೇಳಿದ್ದಕ್ಕೆ ಕೇಂದ್ರವು ಪೊಲೀಸರ ಹಿಂದೆ ಅಡಗಿಕೊಂಡಿದೆ: ಕಾಂಗ್ರೆಸ್

Update: 2023-03-17 10:34 IST

ಹೊಸದಿಲ್ಲಿ: ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ 'ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದಿಲ್ಲಿ ಪೊಲೀಸರು ನೋಟಿಸ್ ಜಾರಿ ಮಾಡಿದೆ..

ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಪ್ರಶ್ನಾವಳಿಯನ್ನು ಕಳುಹಿಸಿದ್ದಾರೆ ಮತ್ತು "ಲೈಂಗಿಕ ಕಿರುಕುಳದ ಕುರಿತು ತನ್ನನ್ನು ಸಂಪರ್ಕಿಸಿರುವ ಮಹಿಳೆಯರ ಬಗ್ಗೆ ವಿವರಗಳನ್ನು ನೀಡುವಂತೆ" ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆ.

ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ  ಮಾತನಾಡಿದ ರಾಹುಲ್ ಗಾಂಧಿ ಅವರು "ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ವಿಚಾರವನ್ನು ನಾನು ಕೇಳಿದ್ದೇನೆ" ಎಂದು ಹೇಳಿದ್ದರು.

 ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ‘ಕಾನೂನು ಪ್ರಕಾರ ನೋಟಿಸ್‌ಗೆ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಹೇಳಿದೆ.

"ಪಿಎಂ ಮೋದಿ ಹಾಗೂ  ಅದಾನಿ ಸಂಬಂಧದ ಕುರಿತು ರಾಹುಲ್ ಗಾಂಧಿಯವರ ಪ್ರಶ್ನೆಗಳಿಂದ ತತ್ತರಿಸಿರುವ ಸರಕಾರವು ತನ್ನ ಪೊಲೀಸರ ಹಿಂದೆ ಅಡಗಿಕೊಂಡಿದೆ. ಭಾರತ್ ಜೋಡೋ ಯಾತ್ರೆ ಮುಗಿದ 45 ದಿನಗಳ ನಂತರ ದಿಲ್ಲಿ ಪೊಲೀಸರು ನೋಟಿಸ್ ಮೂಲಕ ರಾಹುಲ್ ರನ್ನು ಭೇಟಿಯಾದ ಮತ್ತು ಕಿರುಕುಳದ ಬಗ್ಗೆ ಮಾತನಾಡಿದ ಮಹಿಳೆಯರ ವಿವರಗಳನ್ನು ಕೇಳಿದ್ದಾರೆ'' ಎಂದು ಕಾಂಗ್ರೆಸ್ ಟ್ವೀಟಿಸಿದೆ.

"ನಾವು ಕಾನೂನಿಗೆ ಅನುಸಾರವಾಗಿ ಸರಿಯಾದ ಸಮಯದಲ್ಲಿ ನೋಟಿಸ್‌ಗೆ ಉತ್ತರಿಸುತ್ತೇವೆ. ಈ ನೋಟಿಸ್  ಸರಕಾರವು ಭೀತಿಯಲ್ಲಿರುವುದಕ್ಕೆ  ಮತ್ತೊಂದು ಸಾಕ್ಷಿಯಾಗಿದೆ.  ಇದು  ಪ್ರಜಾಪ್ರಭುತ್ವ, ಮಹಿಳಾ ಸಬಲೀಕರಣ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ  ಪ್ರತಿಪಕ್ಷದ ಪಾತ್ರವನ್ನು ದುರ್ಬಲಗೊಳಿಸಲು ಅವರ ಇತ್ತೀಚಿನ ಪ್ರಯತ್ನವಾಗಿದೆ" ಎಂದು ಕಾಂಗ್ರೆಸ್  ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದೆ.

Similar News