ಪ್ರತಿ ಗ್ರಾಮದಲ್ಲೂ ಕೋಮು ಸಾಮರಸ್ಯದ ಸಮಿತಿ ರಚನೆ: ಮಂಜುನಾಥ ಭಂಡಾರಿ

Update: 2023-03-18 15:32 GMT

ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಕೋಮುಗಲಭೆ ನಡೆಸುವ ಹುನ್ನಾರಗಳು ನಡೆಯುತ್ತಿವೆ. ಇದಕ್ಕೆ ಪ್ರತಿಯಾಗಿ ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾಮ ಪಂಚಾಯತ್‌ನ ವಾರ್ಡ್ ಮಟ್ಟದಲ್ಲಿ ಸ್ವಾಮಿ ವಿವೇಕಾನಂದ ಕೋಮು ಮತ್ತು ಸಾಮಾಜಿಕ ಸಾಮರಸ್ಯದ ಸಮಿತಿಯನ್ನು ರಚಿಸಲಾಗುವುದು. ಅಲ್ಲದೆ ಆ ಸಮಿತಿಗೆ ಅನುದಾನವನ್ನು ನೀಡಿ ಕೋಮು, ಜಾತಿ ಘರ್ಷಣೆ ಹೋಗಲಾಡಿಸುವ ಕಾರ್ಯ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಉಡುಪಿ ಸಂತೆಕಟ್ಟೆಯಲ್ಲಿ ನಡೆದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮೀ ಯೋಜನೆಯ ಮೂಲಕ ಪ್ರತಿಮನೆಗೆ ವಾರ್ಷಿಕ 55200ರೂ. ನೀಡಲಾಗುವುದು. ನಮ್ಮ ಸರಕಾರ ಐದು ವರ್ಷ ಅಧಿಕಾರದಲ್ಲಿ ಪ್ರತಿಮನೆಗೆ ಈ ಯೋಜನೆ ಮೂಲಕ ಒಟ್ಟು 2.76ಲಕ್ಷ ರೂ. ಸಹಾಯಧನ ದೊರೆಯಲಿದೆ. ಈ ಯೋಜನೆಗಳಿಗೆ ಈಗಿನ ಬಿಜೆಪಿ ಸರಕಾರದ ಶೇ.40 ಕಮಿಷನ್ ಹಣದ ಸೋರಿಕೆಯನ್ನು ತಡೆದು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮೇಲ್ದರ್ಜೆಗೇರಿಸಿ 2500ಕೋಟಿ ರೂ. ಅನುದಾನ ಒದಗಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಇದರಿಂದ ಕರಾವಳಿ ಜಿಲ್ಲೆಯಲ್ಲಿ ಹೂಡಿಕೆ ಹೆಚ್ಚಾಗಿ ಉದ್ಯೋಗ ಸೃಷ್ಠಿಯಾಗುತ್ತದೆ. ಅಲ್ಲದೆ ಐಟಿ ಪಾರ್ಕ್ ಮತ್ತು ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸಿ 30000 ಮಂದಿಗೆ ಉದ್ಯೋಗ ನೀಡಲಾಗುವುದು. ಅತೀಸೂಕ್ಷ್ಮ ಹಿಂದುಳಿದವರ್ಗಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ಎಲ್ಲ ಸಮುದಾಯಕ್ಕೂ ನ್ಯಾಯ ಒದಗಿಸಲಾಗುವುದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ಎಲ್.ಶಂಕರ್ ಮಾತನಾಡಿ, ಈ ಬಾರಿಯ ಚುನಾವಣೆಯನ್ನು ಎದುರಾಳಿಗಳನ್ನು ಟೀಕಿಸದೆ, ವೈಯಕ್ತಿಕ ನಿಂದನೆ ಮಾಡದೆ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಸುವ ಮೂಲಕ ಎದುರಿಸಬೇಕು. ಈ ಮೂಲಕ ಈ ಚುನಾವಣೆ ನೆಗೆಟಿವ್ ರಾಜ ಕಾರಣವಾಗಿದೆ ಪಾಸಿಟಿವ್ ರಾಜಕಾರಣ ವಾಗಿರಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಮುಖಂಡರಾದ ಸರಳ ಕಾಂಚನ್, ರಾಜು ಪೂಜಾರಿ, ದಿನಕರ ಹೇರೂರು, ಪ್ರಸಾದ್‌ ರಾಜ್ ಕಾಂಚನ್, ವರೋನಿಕಾ ಕರ್ನೆಲಿಯೋ, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ದಿವಾಕರ್ ಕುಂದರ್, ವಿಶ್ವಾಸ್ ಅಮೀನ್, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ಮೀನಾಕ್ಷಿ ಮಾಧವ ಬನ್ನಂಜೆ, ಅಣ್ಣಯ್ಯ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.

Similar News