ಸ್ವಘೋಷಿತ ದೇವಮಾನವ ಧೀರೇಂದ್ರ ಕೃಷ್ಣ ಕಾರ್ಯಕ್ರಮದಲ್ಲಿ 36 ಮಂದಿಯ ಚಿನ್ನಾಭರಣ ಕಳವು

Update: 2023-03-20 06:32 GMT

ಮುಂಬೈ: ಸ್ವಯಂಘೋಷಿತ ದೇವಮಾನವ ಧೀರೇಂದ್ರ ಕೃಷ್ಣ ಅವರು ಮೀರಾ ರಸ್ತೆಯಲ್ಲಿನ ಸಲಸರ್ ಕೇಂದ್ರ ಉದ್ಯಾನವನದಲ್ಲಿ ಶನಿವಾರದಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಕಾರ್ಯಕ್ರಮದಲ್ಲಿ ಅವರ 36 ಹಿಂಬಾಲಕರ ಚಿನ್ನಾಭರಣಗಳು ಕಳವಾಗಿರುವ ಘಟನೆ ನಡೆದಿದೆ ಎಂದು hindustantimes.com ವರದಿ ಮಾಡಿದೆ.

ಕಳವಾಗಿರುವ ಚಿನ್ನಾಭರಣಗಳ ಮೌಲ್ಯ ತೀರಾ ದುಬಾರಿಯಾಗಿದ್ದು, ಅವುಗಳ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಮೀರಾ ರಸ್ತೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ನೆರೆದಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲುಂಟಾಗಿ, ಓರ್ವ ಮಹಿಳೆ ಗಾಯಗೊಂಡಿದ್ದಾರೆ. ಇಷ್ಟು ದೊಡ್ಡ ಜನಸಂದಣಿಯನ್ನು ನಿಭಾಯಿಸುವಲ್ಲಿ ವಿಫಲವಾಗಿರುವುದರಿಂದ ಇಂತಹ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದರ ಬೆನ್ನಿಗೇ ರವಿವಾರದ ಕಾರ್ಯಕ್ರಮಕ್ಕೆ ಪೊಲೀಸರು ಪ್ರವೇಶ ದ್ವಾರಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದರು. ಕಾರ್ಯಕ್ರಮದ ಸ್ಥಳದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉದ್ಭವವಾಗಿತ್ತು. ಹೀಗಿದ್ದೂ, ಅಲ್ಲಿ ನೆರೆದಿದ್ದ ಜನರಿಗೆ ಯಾವುದೇ ಗಂಭೀರ ಗಾಯಗಳಾಗದಂತೆ ಅವರ ಗಮನವನ್ನು ಬೇರೆಡೆಗೆ ತಿರುಗಿಸುವಲ್ಲಿ ಯಶಸ್ವಿಯಾದೆವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನಾಭರಣ ಕಳವು ಕುರಿತು ದೂರು ದಾಖಲಿಸಿರುವವರ ಪೈಕಿ ಒಬ್ಬರಾದ ಮೀರಾ ರಸ್ತೆಯ ನಿವಾಸಿ ಸುನೀತಾ ಗೌಳಿ, "ನನ್ನ ಎರಡು ವರ್ಷದ ಮಗು ಹಲವಾರು ದಿನಗಳಿಂದ ಅಸ್ವಸ್ಥಗೊಂಡಿತ್ತು. ನಾನು ಶಾಸ್ತ್ರಿಯವರ ಕಾಯಿಲೆಗಳನ್ನು ತಪಾಸಣೆ ಮಾಡಿ ಗುಣಪಡಿಸುವ ಹಲವಾರು ವಿಡಿಯೊಗಳನ್ನು ನನ್ನ ಮೊಬೈಲ್‌ನಲ್ಲಿ ನೋಡಿದ್ದೆ. ಹೀಗಾಗಿ ನನ್ನ ಮಗಳ ಹೆಸರನ್ನು ಚೀಟಿಯಲ್ಲಿ ಬರೆಯಲು ನಿರ್ಧರಿಸಿದೆ. ನಾನು ನನ್ನ ಮಗಳ ಹೆಸರನ್ನು ಬಾಬಾ ಆಯ್ಕೆ ಮಾಡಿ, ಆಕೆಯ ಕಾಯಿಲೆಯನ್ನು ಗುಣಪಡಿಸುತ್ತಾರೆ ಎಂಬ ವಿಶ್ವಾಸ ಹೊಂದಿದ್ದೆ. ಅದರ ಬದಲು ನನ್ನ ಬಳಿಯಿದ್ದ ಒಂದೇ ಒಂದು ಚಿನ್ನಾಭರಣವಾದ ತಾಳಿಯ ಕಳವಾಗಿದೆ" ಎಂದು ಹೇಳಿದ್ದಾರೆ.

ಘಟನೆಯ ಕುರಿತು ಸಂಘಟಕರು ಈವರೆಗೆ ಯಾವುದೇ ವಿವರಣೆ ನೀಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಮೀರಾ ರಸ್ತೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು, "ನಾವು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ನಾವು ಕಳವು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ" ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಶಾಂತಾಬೆನ್ ಮೀಠಾಲಾಲ್ ಜೈನ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಕೆಲವು ಮೂಢನಂಬಿಕೆ ವಿರೋಧಿ ಸಂಘಟನೆಗಳು ವಿರೋಧಿಸಿದ್ದವು. ಈ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಈ ಸಂಘಟನೆಗಳ ಗುಂಪು ಶುಕ್ರವಾರ ಪೊಲೀಸರಿಗೆ ಮನವಿ ಪತ್ರ ಸಲ್ಲಿಸಿದ್ದವು.

Similar News