ಜಾಗತಿಕ ತಾಪಮಾನ ನಿಯಂತ್ರಣಕ್ಕೆ ತುರ್ತು ಕ್ರಮದ ಅಗತ್ಯವಿದೆ: ವಿಶ್ವಸಂಸ್ಥೆ ವರದಿ

Update: 2023-03-21 17:08 GMT

ಜಿನೆವಾ, ಮಾ.21: ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಶಿಯಸ್ಗೆ ಸೀಮಿತಗೊಳಿಸುವ ಪ್ರಮುಖ ಹವಾಮಾನ ಗುರಿಯನ್ನು ಜಗತ್ತು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಈ ದಶಕದಲ್ಲಿ ಕಠಿಣ ಮತ್ತು ತುರ್ತು ಕ್ರಮವು ತಾಪಮಾನ ಏರಿಕೆಯನ್ನು ತಡೆಯಬಹುದು ಎಂದು ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಸಮಿತಿ ಸೋಮವಾರ ಬಿಡುಗಡೆಗೊಳಿಸಿದ ವರದಿ ಹೇಳಿದೆ.

ಹವಾಮಾನ ಬದಲಾವಣೆಯ ಸಂಶ್ಲೇಷಣೆಯ ಅಂತರ್ಸರಕಾರ ಸಮಿತಿ(ಐಪಿಸಿಸಿ)ಯ ವರದಿಯು 2015ರಿಂದ ಸಮಿತಿ ಸಿದ್ಧಪಡಿಸಿದ್ದ ಮಾನವಜನ್ಯ ಹೊರಸೂಸುವಿಕೆಯಿಂದಾಗಿ ಜಾಗತಿಕ ತಾಪಮಾನ ಏರಿಕೆಯ ಕಾರಣಗಳು ಮತ್ತು ಪರಿಣಾಮಗಳ ಕುರಿತ ವರದಿಯ ಸಾರಾಂಶವಾಗಿದೆ. ಪೂರ್ವ ಕೈಗಾರಿಕೆಯ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಶಿಯಸ್ ಮಟ್ಟಕ್ಕೆ ತಾಪಮಾನವನ್ನು ಉಳಿಸಿಕೊಳ್ಳಬೇಕಿದ್ದರೆ ಎಲ್ಲಾ ವಲಯಗಳಲ್ಲಿ ಆಳವಾದ, ನಿರಂತರ, ಕ್ಷಿಪ್ರ ಮತ್ತು ಸುಸ್ಥಿರ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಅಗತ್ಯವಿದೆ ಎಂದು ವರದಿ ಉಲ್ಲೇಖಿಸಿದೆ. 

ಚೇತರಿಸಿಕೊಳ್ಳುವ, ವಾಸಯೋಗ್ಯ ಭವಿಷ್ಯವನ್ನು ಈಗಲೂ ನಾವು ಹೊಂದಲು ಅವಕಾಶವಿದೆ. ಆದರೆ ಆಳವಾದ, ಕ್ಷಿಪ್ರ ಮತ್ತು ನಿರಂತರ ಹೊರಸೂಸುವಿಕೆ (ಎಮಿಷನ್)ಯ ಕಡಿತಕ್ಕೆ ಈ ದಶಕದಲ್ಲಿ ಕೈಗೊಂಡ ಕ್ರಮಗಳು ಸಾಲುವುದಿಲ್ಲ. ನಾವು ಉಪಕ್ರಮಗಳನ್ನು ವಿಳಂಬಿಸಿದಷ್ಟೂ ನಷ್ಟ ಮತ್ತು ಹಾನಿಯ ಪ್ರಮಾಣ ಏರಲಿದೆ ಮತ್ತು ಇನ್ನಷ್ಟು ಮಾನವ ಮತ್ತು ನೈಸರ್ಗಿಕ ವ್ಯವಸ್ಥೆಗಳು ಹೊಂದಾಣಿಕೆಯ ಮಿತಿಯನ್ನು ತಲುಪುತ್ತದೆ. ಮನುಕುಲವು ತೆಳುವಾದ ಮಂಜುಗಡ್ಡೆಯ ಮೇಲಿದೆ ಮತ್ತು ಆ ಮಂಜುಗಡ್ಡೆ ವೇಗವಾಗಿ ಕರಗುತ್ತಿದೆ. ಹವಾಮಾನ ಟೈಂಬಾಂಬ್ ಕ್ಷಣಗಣನೆ ಮಾಡುತ್ತಿದೆ. 1.5 ಡಿಗ್ರಿ ಸೆಲ್ಶಿಯಸ್ ಮಿತಿಯನ್ನು ಸಾಧಿಸಬಹುದಾಗಿದೆ. ಇದು ಮನುಕುಲಕ್ಕೆ ಬದುಕುಳಿಯುವ ಮಾರ್ಗದರ್ಶಿಯಾಗಿದೆ. ಆದರೆ ಈ ಗುರಿಯನ್ನು ಸಾಧಿಸಬೇಕಿದ್ದರೆ ದಾಪುಗಾಲಿನ ಧಾವಂತದ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಈ ವರದಿಯು ಪ್ರತಿಯೊಂದು ದೇಶ, ಪ್ರತೀ ಕ್ಷೇತ್ರವೂ ಹವಾಮಾನಕ್ಕೆ ಸಂಬಂಧಿಸಿದ ಗುರಿಯನ್ನು ತಲುಪಲು ಭಾರೀ ಪ್ರಮಾಣದಲ್ಲಿ ಮತ್ತು ತಕ್ಷಣವೇ ಪ್ರಯತ್ನ ನಡೆಸಬೇಕೆಂದು ನೆನಪಿಸುವ ಸ್ಪಷ್ಟ, ಗಟ್ಟಿಧ್ವನಿಯಾಗಿದೆ. ಶ್ರೀಮಂತ ದೇಶಗಳು 2040ರ ಒಳಗೆ ಮತ್ತು ಅಭಿವೃದ್ಧಿಶೀಲ ದೇಶಗಳು 2050ರ ಒಳಗೆ ನಿವ್ವಳ ಶೂನ್ಯ ಗುರಿಯನ್ನು ತಲುಪಬೇಕು. 2030ರೊಳಗೆ ಕಲ್ಲಿದ್ದಲು ಬಳಕೆಯನ್ನು ಹಂತಹಂತವಾಗಿ ಅಂತ್ಯಗೊಳಿಸಬೇಕು  ಎಂದು ಗುಟೆರಸ್ ಆಗ್ರಹಿಸಿದ್ದಾರೆ.

ಪಳೆಯುಳಿಕೆ ಇಂಧನ ಬಳಕೆಯು ಜಾಗತಿಕ ತಾಪಮಾನ ಏರಿಕೆಗೆ ಪ್ರಧಾನ ಕಾರಣವಾಗಿದೆ. 2019ರಲ್ಲಿ ಜಾಗತಿಕ ಹಸಿರುಮನೆ ಹೊರಸೂಸುವಿಕೆಯ ಸುಮಾರು 79%ದಷ್ಟು ಇಂಧನ, ಕೈಗಾರಿಕೆ, ಸಾರಿಗೆ ಮತ್ತು ಕಟ್ಟಡ ಕ್ಷೇತ್ರಗಳಿಂದ, 22%ದಷ್ಟು ಕೃಷಿ, ಅರಣ್ಯ ಮತ್ತು ಇತರ ಭೂಬಳಕೆಯಿಂದ ಬರುತ್ತಿದೆ ಎಂದು ವರದಿಯಲ್ಲಿ ಒತ್ತಿಹೇಳಲಾಗಿದೆ. ನಾವು ಈಗಾಗಲೇ ಅನುಭವಿಸಿರುವ ಹಾನಿ ಮತ್ತು ನಷ್ಟವನ್ನು ತೀಕ್ಷ್ಣವಾಗಿ ಗಮನಕ್ಕೆ ತರುತ್ತದೆ ಎಂದು ಐಪಿಸಿಸಿ ಹೇಳಿದೆ.

Similar News