ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್‌ನಿಂದ ಕೊಲೆ ಬೆದರಿಕೆ: ಸಂಜಯ್ ರಾವತ್‌

Update: 2023-04-01 06:36 GMT

ಹೊಸದಿಲ್ಲಿ: ಶಿವಸೇನೆ (ಉದ್ಧವ್ ಠಾಕ್ರೆ ಬಣ)ಯ ಸಂಸದ ಸಂಜಯ್ ರಾವತ್‌ರ (Sanjay Raut) ಮೊಬೈಲ್ ಫೋನ್‌ಗೆ ಶನಿವಾರ ಕೊಲೆ ಬೆದರಿಕೆಯ ಸಂದೇಶ ಬಂದಿದೆ. ತಮಗಿರುವ ಜೀವ ಬೆದರಿಕೆ ಕುರಿತು ಶುಕ್ರವಾರ ರಾತ್ರಿಯೇ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪಂಜಾಬ್ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಪರವಾಗಿ ಸಂದೇಶ ಬಂದಿದೆ. ಈ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಬೆದರಿಕೆ ಸಂದೇಶದ ಕುರಿತು ಆತನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಸಂಜಯ್ ರಾವತ್‌ NDTV ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

"ನನಗೆ ಮೊಬೈಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ ಮತ್ತು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದೇನೆ. ಆದರೆ, ಈ ಸರ್ಕಾರ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ನನಗೆ ಈ ಹಿಂದೆಯೂ ಬೆದರಿಕೆ ಒಡ್ಡಲಾಗಿತ್ತು. ಆದರೆ, ಈ ವಿಷಯವನ್ನು ರಾಜ್ಯ ಗೃಹ ಸಚಿವರು ನಟನೆ ಎಂದು ಗೇಲಿ ಮಾಡಿದ್ದರು" ಎಂದು ಹೇಳಿರುವ ರಾವತ್, "ರಾಜ್ಯ ಸರ್ಕಾರವು ವಿರೋಧ ಪಕ್ಷದ ನಾಯಕರಿಗೆ ಭದ್ರತೆ ಒದಗಿಸುವ ಕುರಿತು ಗಂಭೀರವಾಗಿಲ್ಲ" ಎಂದು ಆರೋಪಿಸಿದ್ದಾರೆ.

ಈ ಬೆದರಿಕೆಯಿಂದ ನಾನು ವಿಚಲಿತನಾಗಿಲ್ಲ ಮತ್ತು ನನ್ನ ಭದ್ರತೆಯನ್ನು ಹಿಂಪಡೆದಾಗ ನಾನು ಆ ಕುರಿತು ಯಾವುದೇ ಪತ್ರ ಬರೆದಿರಲಿಲ್ಲ ಎಂದೂ ಅವರು ಹೇಳಿದ್ದಾರೆ.

ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಹಿಂದಿನ ಸೂತ್ರಧಾರಿ ಎಂದು ಹೇಳಲಾಗಿರುವ ಲಾರೆನ್ಸ್ ಬಿಷ್ಣೋಯ್ ಕುಖ್ಯಾತ ಅಪರಾಧಿಯಾಗಿದ್ದು, ಆತ ಗಾಯಕ ಸಿಧು ಮೂಸೆವಾಲಾರ ತಂದೆ ಬಾಲ್‌ಕೌರ್ ಸಿಂಗ್ ಹಾಗೂ ಖ್ಯಾತ ನಟ ಸಲ್ಮಾನ್ ಖಾನ್‌ಗೂ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿದ್ದಾನೆ.

Similar News