ಎ.14ರಂದು ‘ಶ್ರೀಮಂತ’ ಕನ್ನಡ ಚಲನಚಿತ್ರ ತೆರೆಗೆ

Update: 2023-04-01 13:06 GMT

ಉಡುಪಿ, ಎ.1: ರೈತರ ದೈನಂದಿನ ಬದುಕು ಬವಣೆಯ ಅನಾವರಣ ಹಾಗೂ ರೈತನೇ ಜಗತ್ತಿನ ಅತೀ ದೊಡ್ಡ ಶ್ರೀಮಂತ ಎಂದು ತೋರಿಸುವ ಹಾಸನ್ ರಮೇಶ್ ನಿರ್ದೇಶನದ ‘ಶ್ರೀಮಂತ’ ಕನ್ನಡ ಚಲನಚಿತ್ರವು ಎ.14ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ಸಹಾಯಕ ನಿರ್ದೇಶಕ ಶಿವರಾಜ್ ದಳವಾಯಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಭಾರತ ರಿಯಲ್ ಹೀರೋ ಎನಿಸಿಕೊಂಡಿರುವ ಚಿತ್ರ ನಟ ಸೋನು ಸೂದ್ ಪ್ರಥಮವಾಗಿ ಕನ್ನಡ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಮುಂಬೈಯ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್ ಜೊತೆಗೆ ಕಲ್ಯಾಣ ಕರ್ನಾಟಕದ ಕ್ರಾಂತಿ ಎಂಬ ಯುವ ಪ್ರತಿಭೆಯನ್ನು ಪರಿಚಯಿಸಲಾಗುತ್ತಿದೆ ಎಂದರು.

ಇದೊಂದು ಸಾಮುದಾಯಿಕ ಚಿತ್ರವಾಗಿದ್ದು, ಬಹುಪಾಲು ನೈಜ ಸ್ಥಳಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಡಾ.ಹಂಸಲೇಖ ಸಂಗೀತ ಸಾಹಿತ್ಯ ನೀಡಿದ್ದಾರೆ. ರವಿ ಕುಮಾರ್ ಸನ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ, ಮಧನ್ ಹರಿಣಿ ಹಾಗೂ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಲ್ಯಾಣ, ಮಹೇಶ್, ಸತೀಶ್ ಪಾಟೀಲ್, ಸಿದ್ದೇಶರ, ಅನ್ಸಾರ್ ಅಹ್ಮದ್ ಉಪಸ್ಥಿತರಿದ್ದರು. 

Similar News