ಕಳೆದ ನಾಲ್ಕು ವರ್ಷಗಳಲ್ಲಿ ಈಡಿ ದಾಖಲಿಸಿಕೊಂಡಿರುವ ಪ್ರಕರಣಗಳ ಸಂಖ್ಯೆ ಶೇ. 500ರಷ್ಟು ಏರಿಕೆ

Update: 2023-04-02 12:58 GMT

ಹೊಸದಿಲ್ಲಿ: ಕಳೆದ ಕೆಲವು ವರ್ಷಗಳಲ್ಲಿ ಜಾರಿ ನಿರ್ದೇಶನಾಲಯವು (ED) ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ರಾಜಕೀಯ ನಾಯಕರು ಸೇರಿದಂತೆ ಹಲವಾರು ಮಂದಿ ವಿರುದ್ಧ ನಡೆಸಿರುವ ದಾಳಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಈ ಸಂಸ್ಥೆಯು ದಾಖಲಿಸಿಕೊಂಡಿರುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 500ರಷ್ಟು ಭಾರಿ ಏರಿಕೆಯಾಗಿದೆ ಎಂದು thenewsminute.com ವರದಿ ಮಾಡಿದೆ.

ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, 2018-19ರಲ್ಲಿ ದಾಖಲಾಗಿದ್ದ 195 ಪ್ರಕರಣಗಳಿಗೆ ಹೋಲಿಸಿದರೆ 2018-19ರಿಂದ 2021-22ರವರೆಗೆ 1,180 ಜಾರಿ ನಿರ್ದೇಶನಾಲಯ ಪ್ರಕರಣಗಳು ದಾಖಲಾಗಿದ್ದು, ಗರಿಷ್ಠ ಶೇ. 505ರಷ್ಟು ಏರಿಕೆಯಾಗಿವೆ ಎಂದು ತಿಳಿಸಿವೆ.

ಹಾಗೆಯೇ 2004-14ಕ್ಕೆ ಹೋಲಿಸಿದರೆ 2014-22ರಲ್ಲಿ ಜಾರಿ ನಿರ್ದೇಶನಾಲಯದ ಶೋಧ ಕಾರ್ಯಗಳೂ ಶೇ. 2,555ರಷ್ಟು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹಣಕಾಸು ಸಚಿವಾಲಯದ ಸ್ವಯಂ ದತ್ತಾಂಶಗಳ ಪ್ರಕಾರ, 2004-14ರ ನಡುವೆ ಜಾರಿ ನಿರ್ದೇಶನಾಲಯದಿಂದ 112 ಶೋಧ ಕಾರ್ಯಗಳು ಜರುಗಿ, ಅಪರಾಧದ ಸಂಬಂಧ ರೂ. 5,346 ಕೋಟಿ ಮೌಲ್ಯದ ಸ್ವತ್ತುಗಳ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗಿತ್ತು.

ಆದರೆ, 2014-22ರ ಅವಧಿಯಲ್ಲಿ ಶೋಧ ಕಾರ್ಯಗಳು 2,974ಕ್ಕೆ ಏರಿಕೆಯಾಗಿದ್ದು, ಇದು ಶೇ. 2,555ರಷ್ಟು ಏರಿಕೆಯಾಗಿದೆ. ಈ ಶೋಧ ಕಾರ್ಯಗಳಲ್ಲಿ ಅಪರಾಧದ ಸಂಬಂಧ ರೂ. 95,432.08 ಕೋಟಿ ಮೌಲ್ಯದ ಸ್ವತ್ತಿನ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗಿದೆ.

ಜಾರಿ ನಿರ್ದೇಶನಾಲಯದ ವತಿಯಿಂದ ಪ್ರಕರಣಗಳ ದಾಖಲೆ ಹಾಗೂ ಶೋಧ ಕಾರ್ಯಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಆಡಳಿತಾರೂಢ ಬಿಜೆಪಿ ಸರ್ಕಾರವು ತಮ್ಮ ವಿರುದ್ಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ ಎಂದು ವಿರೋಧ ಪಕ್ಷಗಳು ಪದೇ ಪದೇ ಆರೋಪಿಸಿದ್ದವು. ಆದರೆ, ಈ ಆರೋಪವನ್ನು ಅಲ್ಲಗಳೆದಿದ್ದ ಕೇಂದ್ರ ಸರ್ಕಾರವು, ಶೋಧ ಕಾರ್ಯದಲ್ಲಿನ ಏರಿಕೆಯು ಅಕ್ರಮ ಹಣ ವರ್ಗಾವಣೆಯನ್ನು ತಡೆಯುವ ಹಾಗೂ ತಂತ್ರಜ್ಞಾನದ ಮೂಲಕ ಹಣಕಾಸು ವ್ಯವಹಾರಗಳ ಮಾಹಿತಿಯನ್ನು ಸುಧಾರಿತ ವ್ಯವಸ್ಥೆಗಳ ಮೂಲಕ ಸಂಗ್ರಹಿಸುವ ತನ್ನ ಬದ್ಧತೆಯನ್ನು ಸೂಚಿಸುತ್ತಿದೆ ಎಂದು ಸಮರ್ಥಿಸಿಕೊಂಡಿತ್ತು.

ಹಳೆಯ ಪ್ರಕರಣಗಳಲ್ಲಿ ಬಾಕಿಯಿರುವ ತನಿಖೆಯನ್ನು ಮುಗಿಸುವ ಸಂಘಟಿತ ಪ್ರಯತ್ನಗಳು ಹಾಗೂ ಹಲವಾರು ಮಂದಿ ಆರೋಪಿಗಳಿರುವ ಸಂಕೀರ್ಣ ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ತನಿಖೆ ಮಾಡಲು ಹಲವಾರು ಶೋಧ ಕಾರ್ಯ ಕೈಗೊಂಡಿರುವುದು ಇತ್ತೀಚಿನ ದಿನಗಳಲ್ಲಿ ಶೋಧ ಕಾರ್ಯಗಳ ಪ್ರಮಾಣದಲ್ಲಿ ಏರಿಕೆಯಾಗಲು ಪ್ರಮುಖ ಕಾರಣ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯವು ತನಿಖಾ ಸಂಸ್ಥೆಯಾಗಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, ಅಕ್ರಮ ಹಣ ವರ್ಗಾವಣೆ ಕಾಯ್ದೆ ಹಾಗೂ ದೇಶಭ್ರಷ್ಟ ಆರ್ಥಿಕ ಅಪರಾಧಿಗಳು ಕಾಯ್ದೆ, 2018ರ ಅಡಿಯ ಸೆಕ್ಷನ್‌ಗಳನ್ನು ಜಾರಿಗೊಳಿಸಬೇಕಾದ ಕಡ್ಡಾಯ ಹೊಣೆಗಾರಿಕೆ ಹೊಂದಿದೆ.

ಇದನ್ನೂ ಓದಿ: ಆರ್‌ಟಿಐ ಕಾರ್ಯಕರ್ತರಾಗಿ ಬದಲಾಗುತ್ತಿರುವ ಜೈಲಿನ ಕೈದಿಗಳು ಮಾಡುತ್ತಿರುವುದೇನು ಗೊತ್ತೇ?

Similar News