ಕೇರಳ: ಚಲಿಸುತ್ತಿದ್ದ ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ; ಮೂವರು ಮೃತ್ಯು, 8 ಜನರಿಗೆ ಗಾಯ
ಕೋಝಿಕ್ಕೋಡ್: ಕೇರಳದ ಕಣ್ಣೂರಿಗೆ ಹೊರಟಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿಅಪರಿಚಿತ ವ್ಯಕ್ತಿಯೊಬ್ಬ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿ ಎಂಟು ಮಂದಿಗೆ ಗಾಯಗೊಳಿಸಿದ ಕೆಲವೇ ಗಂಟೆಗಳ ನಂತರ ಇಲ್ಲಿನ ಎಲತ್ತೂರ್ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಒಂದು ವರ್ಷದ ಮಗು ಹಾಗೂ ಮಹಿಳೆ ಸೇರಿದಂತೆ ಮೂವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ತಡರಾತ್ರಿ ರೈಲು ಹಳಿಯಲ್ಲಿ ಮಹಿಳೆ, ಮಗು ಹಾಗೂ ಪುರುಷನ ಮೃತದೇಹಗಳು ಪತ್ತೆಯಾಗಿವೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ರವಿವಾರ ಬೆಂಕಿ ಅವಘಡದ ನಂತರ ಮೂವರು ರೈಲಿನಿಂದ ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದರು.
ರಾತ್ರಿ 9.45 ರ ಸುಮಾರಿಗೆ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲು ಕೋಝಿಕ್ಕೋಡ್ ನಗರವನ್ನು ದಾಟಿ ಇಲ್ಲಿನ ಕೊರಾಪುಳ ರೈಲ್ವೆ ಸೇತುವೆಯನ್ನು ತಲುಪಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಸಹ ಪ್ರಯಾಣಿಕನ ಮೇಲೆ ದಹನಕಾರಿ ದ್ರವವನ್ನು ಸುರಿದು ಬೆಂಕಿ ಹಚ್ಚಿದ ಪರಿಣಾಮವಾಗಿ ಕನಿಷ್ಠ ಎಂಟು ಜನರಿಗೆ ಸುಟ್ಟ ಗಾಯಗಳಾಗಿವೆ ಪೊಲೀಸರು ಹೇಳಿದರು.
ಘಟನೆ ನಡೆದ ಕೂಡಲೇ ವ್ಯಕ್ತಿ ಪರಾರಿಯಾಗಿದ್ದು, ಪ್ರಯಾಣಿಕರು ತುರ್ತು ಸರಪಳಿ ಎಳೆದು ರೈಲನ್ನು ನಿಲ್ಲಿಸಿದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ರೈಲು ಕಣ್ಣೂರು ತಲುಪಿದಾಗ ಘಟನೆಯ ನಂತರ ಮಹಿಳೆ ಹಾಗೂ ಮಗು ಕಾಣೆಯಾಗಿದ್ದಾರೆ ಎಂದು ಕೆಲವು ಪ್ರಯಾಣಿಕರು ದೂರಿದರು.
ನಾಪತ್ತೆಯಾದವರ ಸುದ್ದಿ ಹೊರಬಿದ್ದ ಕೂಡಲೇ ನಗರ ಪೊಲೀಸರು, ಹಳಿಗಳನ್ನು ಪರಿಶೀಲಿಸಿದಾಗ ಮಹಿಳೆ , ಮಗು ಮತ್ತು ಮಧ್ಯವಯಸ್ಕ ಪುರುಷ ಸೇರಿದಂತೆ ಮೂರು ಮೃತದೇಹಗಳು ಪತ್ತೆಯಾಗಿವೆ.
ಬೆಂಕಿಯನ್ನು ನೋಡಿದ ನಂತರ ಅವರು ರೈಲಿನಿಂದ ಬಿದ್ದಿದ್ದಾರೆ ಅಥವಾ ಇಳಿಯಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.