×
Ad

ಕುಂದಾಪುರ: ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

Update: 2023-04-03 20:05 IST

ಕುಂದಾಪುರ: ಸೋಮವಾರ ಸಂಜೆ ನಡೆದ ಹಠಾತ್ ಬೆಳವಣಿಗೆಯೊಂದರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಬಾರಿ ಗೆದ್ದು ಅಜೇಯರಾಗುಳಿದಿರುವ ಬಿಜೆಪಿಯ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಸ್ವಇಚ್ಛೆಯಿಂದ ನಿರ್ಧರಿಸಿರುವುದಾಗಿ ಪತ್ರಿಕಾ ಹೇಳಿಕೆಯೊಂದರ ಮೂಲಕ ಘೋಷಿಸಿದ್ದಾರೆ.

ಹಾಲಾಡಿ ಅವರ ಈ ನಿರ್ಧಾರ ಅವರ ಅಪಾರ ಅಭಿಮಾನಿಗಳಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ನಿನ್ನೆ ಸಂಜೆಯವರೆಗೂ ಕುಂದಾಪುರದಲ್ಲಿ ಸತತ ಆರನೇ ಬಾರಿಗೆ ಸ್ಪರ್ಧಿಸಲು ಎಲ್ಲಾ ಸಿದ್ಧತೆ ನಡೆಸಿದ್ದ ಹಾಲಾಡಿ ಅವರು  ಇಂದು ನಡೆದ ರಾಜಕೀಯ ಬೆಳವಣಿಗೆಯಲ್ಲಿ ಈ ಬಾರಿ ಸ್ಪರ್ಧಿಸದಿರುವ ತಮ್ಮ ನಿರ್ಧಾರವನ್ನು ಸಂಜೆ 7ಗಂಟೆ ಸುಮಾರಿಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸುವ ಮೂಲಕ ಬಹಿರಂಗ ಪಡಿಸಿದರು.

72ರ ಹರೆಯದ ಸರಳ, ಸಜ್ಜನ ವ್ಯಕ್ತಿತ್ವದ ಹಾಲಾಡಿ ಅವರು ಕರಾವಳಿಯ ಮಟ್ಟಿಗೆ ಜನಪ್ರಿಯ ರಾಜಕಾರಣಿ. ಕುಂದಾಪುರದಿಂದ ಸತತ ಐದು ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಬಿಜೆಪಿ ಶಾಸಕರಾಗಿ ಹಾಗೂ ಒಮ್ಮೆ ಪಕ್ಷೇತರರಾಗಿ ನಿಂತು ಭಾರೀ ಅಂತರದ ಜಯ ದಾಖಲಿಸುತ್ತಾ ಬಂದಿದ್ದಾರೆ. ಈ ಬಾರಿ ಆರನೇ ಸಲ ಸ್ಪರ್ಧಿಸುವ ಉಮೇದಿನಲ್ಲಿದ್ದ ಅವರು ಇಂದು ಚುನಾವಣಾ ಕಣದಿಂದ ಹಿಂದೆ ಸರಿಯುವ ದಿಢೀರ್ ನಿರ್ಧಾರ ಪ್ರಕಟಿಸುವ ಮೂಲಕ ಅಭಿಮಾನಿಗಳನ್ನು ಗೊಂದಲದಲ್ಲಿ ಕೆಡವಿದ್ದಾರೆ.

ಹಾಲಾಡಿಯಲ್ಲಿರುವ ಶ್ರೀನಿವಾಸ ಶೆಟ್ಟಿ ಅವರ ಮನೆ ಇಂದು ಬೆಳಗಿನಿಂದಲೇ ಬಿರುಸಿನ ಚಟುವಟಿಕೆಗಳ ತಾಣವಾಗಿತ್ತು. ಸಾಕಷ್ಟು ಮಂದಿ  ಬೆಂಬಲಿಗರು ಹಾಗೂ ರಾಜಕೀಯ ಮಿತ್ರರೊಂದಿಗೆ ಅವರು ಸಮಾಲೋಚನೆ ನಡೆಸುತಿದ್ದ ವರದಿಗಳಿದ್ದವು. ಅಲ್ಲದೇ ಶಾಸಕರು ಪತ್ರಿಕಾಗೋಷ್ಠಿಯೊಂದನ್ನು ಕರೆಯುವ ಸೂಚನೆಗಳೂ ಲಭಿಸಿದ್ದರೂ, ಸಂಜೆಯ ವೇಳೆಗೆ ಅವರು  ತಮ್ಮ ಸಹಿಯೊಂದಿಗೆ ಅಧಿಕೃತ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿ ತಮ್ಮ ಹಠಾತ್ ನಿರ್ಧಾರವನ್ನು ಪ್ರಕಟಿಸಿದರು.  

ಶಾಸಕರ ಪತ್ರಿಕಾ ಹೇಳಿಕೆ ಪೂರ್ಣಪಾಠ
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಸತತವಾಗಿ ಒಟ್ಟು 5 ಅವಧಿಗೆ ನನ್ನನ್ನು ಬಹುನಿರೀಕ್ಷೆಯೊಂದಿಗೆ ಆಯ್ಕೆ ಮಾಡಿದ ನನ್ನ ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಮತದಾರ ಬಾಂಧವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವಇಚ್ಛೆಯಿಂದ ಸ್ಪರ್ಧಿಸದೇ ಇರಲು ನಿಶ್ಚಯಿಸಿದ್ದೇನೆ. ನಾನು ಶಾಸಕನಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ಅತ್ಯಂತ ನಿಷ್ಠೆಯಿಂದ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಕುಂದಾಪುರ ವಿಧಾನಸಭಾ ಕ್ಷೇತ್ರವು ಬಹಳಷ್ಟು ಗ್ರಾಮೀಣ ಭಾಗಗಳನ್ನು ಹೊಂದಿರುವ ಕ್ಷೇತ್ರವಾಗಿದ್ದು, ಈ ಕ್ಷೇತ್ರದ ಎಲ್ಲಾ ವರ್ಗದ ಮತದಾರರಿಗೂ ತಮ್ಮ ಬೇಡಿಕೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟು ಅದರ ನೋವು ಸಂಕಷ್ಟಗಳಿಗೆ ಸ್ಪಂದಿಸಿ ಜನರ ಆಶೋತ್ತರಗಳನ್ನು ಈಡೇರಿಸಿದ ಸಂತೃಪ್ತಿ ನನಗಿದೆ. ಎಲ್ಲಾ ಐದೂ ಚುನಾವಣೆಗಳಲ್ಲಿಯೂ ನನ್ನನ್ನು ದಾಖಲೆ ಮತಗಳ ಅಂತರಗಳಿಂದ ಚುನಾಯಿಸಿ ಕಳುಹಿಸಿದ ಕ್ಷೇತ್ರದ ಎಲ್ಲಾ ಮತದಾರರನ್ನೂ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿ ಕ್ಷೇತ್ರದ ಮತದಾರ ರಿಂದ ಪ್ರೀತಿ ವಿಶ್ವಾಸ ಗಳಿಸಿದ ಬಗ್ಗೆ ನನಗೆ ಹೆಮ್ಮೆ ಇದೆ.

ಐದು ಬಾರಿ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸುವ ಅವಧಿಯಲ್ಲಿ ನಡೆದ ಲೋಕಸಭಾ, ವಿಧಾನಸಭೆ, ವಿಧಾನಪರಿಷತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿಗೆ ದುಡಿದಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ಪ್ರಮುಖರಿಗೆ ಹಾಗೂ ಅಭಿಮಾನಿಗಳಿಗೆ ನಾನು ಯಾವತ್ತೂ ಚಿರ ಋಣಿಯಾಗಿರುತ್ತೇನೆ.

ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ನನಗೆ ಮಾರ್ಗದರ್ಶನ ನೀಡಿದ ಹಾಗೂ ಸಹಕಾರ ನೀಡಿದ ಪಕ್ಷದ ಪ್ರಮುಖರಿಗೆ, ಎಲ್ಲ ಹಿರಿ-ಕಿರಿಯ ಸ್ನೇಹಿತರಿಗೆ, ಅಧಿಕಾರಿ ವರ್ಗದವರಿಗೆ, ಮಾಧ್ಯಮದವರಿಗೆ ಹಾಗೂ ಕ್ಷೇತ್ರದ ಎಲ್ಲ ಮತದಾರರಿಗೂ ನನ್ನ ಮನ:ಪೂರ್ವಕ ಕೃತಜ್ಞತೆಗಳು.

ಮತದಾರರು ನನ್ನ ಮೇಲೆ ಇಟ್ಟ ಪ್ರೀತಿ ಮತ್ತು ನಂಬಿಕೆಯೇ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಕರ್ತವ್ಯ ನಿರ್ವಹಿಸಲು ಪ್ರೇರಣೆಯಾಗಿದ್ದು, ಅದಕ್ಕಾಗಿ ನಾನು ನನ್ನ ಸಮಸ್ತ ಮತಬಾಂಧವರಿಗೂ ಮತ್ತೊಮ್ಮೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ನಾನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಭಾರತೀಯ ಜನತಾ ಪಾರ್ಟಿಯಿಂದ ಆಯ್ಕೆಯಾಗಲು ಅವಕಾಶ ಕೊಟ್ಟ ಪಕ್ಷಕ್ಕೂ ಹಾಗೂ ನಾನು ಪಕ್ಷೇತರರಾಗಿ ನಿಂತು ಗೆಲ್ಲಲು ಸಹಕರಿಸಿದ ಎಲ್ಲರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸುವ ಅಭ್ಯರ್ಥಿಗೆ ಎಲ್ಲಾ ಮತಬಾಂಧವರೂ ಸಹಕಾರ ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹಾಲಾಡಿ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.

ಕುಂದಾಪುರ: ಬಿಜೆಪಿಗೂ ಹೊಸಮುಖದ ಸಾಧ್ಯತೆ
ಐದು ಬಾರಿ ಕುಂದಾಪುರದ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಇಂದಿನ ನಿರ್ಧಾರದಿಂದ ಬಿಜೆಪಿಯಿಂದಲೂ ಈ ಬಾರಿ ಹೊಸ ಮುಖವೊಂದು ಸ್ಪರ್ಧಿಸುವ ಸಾಧ್ಯತೆ ಢಾಳಾಗಿದೆ. ಈಗಾಗಲೇ ಕಾಂಗ್ರೆಸ್ ಹೊಸಮುಖ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರನ್ನು ಅಭ್ಯರ್ಥಿ ಯಾಗಿ ಹೆಸರಿಸಿದೆ.
ಒಂದು ವರ್ಷದ ಹಿಂದಿನವರೆಗೂ ಆರನೇ ಬಾರಿ ಸ್ಪರ್ಧಿಸುವ ಬಗ್ಗೆ ಮೀನಮೇಷ ನಡೆಸಿದ್ದ ಹಾಲಾಡಿ, ತನ್ನ ಬಲಗೈ ಬಂಟ, ತನ್ನ ರಾಜಕೀಯ ಗುರು ಎ.ಜಿ.ಕೊಡ್ಗಿ ಅವರ ಪುತ್ರ ಕಿರಣ್ ಕೊಡ್ಗಿ ಅವರನ್ನು ರಾಜಕೀಯ ವಾಗಿ ಮುಂಚೂಣಿಗೆ ತರುವ ಪ್ರಯತ್ನ ನಡೆಸಿದ್ದರು. ಆದರೆ ಬಳಿಕ ನಿರ್ಧಾರ ಬದಲಿಸಿದ್ದ ಅವರು ಸ್ಪರ್ಧಿಸಲು ಹೆಚ್ಚಿನ ಮುತುವರ್ಜಿ ವಹಿಸಿ ಬೇಕಾದ ಸಿದ್ಧತೆ ನಡೆಸಿದ್ದರು. ಬದಲಾದ ಸನ್ನಿವೇಶದಲ್ಲಿ ಅವರು ಕಿರಣ್ ಕೊಡ್ಗಿ ಅವರನ್ನು ತನ್ನ ಬದಲಿಯಾಗಿ ಬೆಂಬಲಿಸುವ ಸಾಧ್ಯತೆಯೇ ಹೆಚ್ಚಿದೆ.

ಆದರೆ ಈಗ ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ತಳೆಯಲಿದೆ ಎಂಬ ಬಗ್ಗೆ ಯಾವುದೇ ಸೂಚನೆ ಸಿಕ್ಕಿಲ್ಲ. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಹಾಲಾಡಿ ಅವರಿಗೆ 25,000 ಮತಗಳ ಅಂತರದಿಂದ ಸೋತ ಈಗ ಬಿಜೆಪಿಯಲ್ಲಿರುವ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಬಿಜೆಪಿ ಟಿಕೇಟ್ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಒಂದು ಚುನಾವಣೆ ಹೊರತು ಪಡಿಸಿ ಉಳಿದಂತೆ ಬಂಟ ಅಭ್ಯರ್ಥಿಯೇ ಇಲ್ಲಿ ಜಯಗಳಿಸಿದ ಇತಿಹಾಸವೂ ಹೆಗ್ಡೆ ಅವರಿಗೆ ಪೂರಕವಾಗಿ ಕೆಲಸ ಮಾಡಬಹುದು.

Similar News