ವಲಸಿಗ ಕಾರ್ಮಿಕರ ಮೇಲಿನ ದಾಳಿಯ ನಕಲಿ ವೀಡಿಯೋ ಪೋಸ್ಟ್ ಮಾಡಿದ್ದ ಯುಟ್ಯೂಬರ್ ಮೇಲೆ NSA ಹೇರಿದ ತಮಿಳುನಾಡು ಪೊಲೀಸರು
ಚೆನ್ನೈ: ತಮಿಳುನಾಡಿನಲ್ಲಿ ವಲಸಿಗ ಕಾರ್ಮಿಕರ ಮೇಲಿನ ದಾಳಿಗಳದ್ದೆಂದು ಹೇಳಿಕೊಂಡು ನಕಲಿ ವೀಡಿಯೋಗಳನ್ನು ಪೋಸ್ಟ್ ಮಾಡಿದ ಆರೋಪ ಎದುರಿಸಿ ಬಂಧನಕ್ಕೊಳಗಾಗಿರುವ ಬಿಹಾರ ಮೂಲದ ಯುಟ್ಯೂಬರ್ ಮನೀಶ್ ಕಶ್ಯಪ್ನನ್ನು (Manish Kashyap) ತಮಿಳುನಾಡಿನಲ್ಲಿ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ (NSA) ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮದುರೈ ಎಸ್ಪಿ ಶಿವಪ್ರಸಾದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬುಧವಾರ ಮಧುರೈ ಜಿಲ್ಲಾ ನ್ಯಾಯಾಲಯಕ್ಕೆ ಕಶ್ಯಪ್ನನ್ನು ಹಾಜರುಪಡಿಸಲಾಗಿದ್ದು ಆತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆತನನ್ನು ನಂತರ ಮದುರೈ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ. ಆತನ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಎಪ್ರಿಲ್ 19 ರ ತನಕ ವಿಸ್ತರಿಸಿದೆ.
ಮದುರೈ ಕ್ರೈಂ ಬ್ರ್ಯಾಂಚ್ ಪೊಲೀಸರು ಕಶ್ಯಪ್ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ಬಿಹಾರದಿಂದ ವಿಶೇಷ ಪೊಲೀಸ್ ತಂಡ ಬಂಧಿಸಿತ್ತು,
ಇದಕ್ಕೂ ಮುನ್ನ ಮಾರ್ಚ್ 18 ರಂದು ಕಷ್ಯಪ್ ಬಿಹಾರದ ಜಗದೀಶಪುರ ಠಾಣೆಗೆ ಶರಣಾದ ನಂತರ ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕ ಆತನನ್ನು ಬಂಧಿಸಿತ್ತು. ಟ್ರಾನ್ಸಿಟ್ ರಿಮಾಂಡ್ ಪಡೆದು ಆತನನ್ನು ಈಗ ತಮಿಳುನಾಡಿಗೆ ಕರೆತರಲಾಗಿದೆ.
ತಮಿಳುನಾಡಿನಲ್ಲಿ ವಲಸಿಗ ಕಾರ್ಮಿಕರ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಹೇಳಿಕೊಂಡು ಕಳೆದ ತಿಂಗಳು ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವಲಸಿಗ ಕಾರ್ಮಿಕರು ಭೀತಿಯಿಂದ ತಮ್ಮೂರುಗಳಿಗೆ ಮರಳಿದ ವಿದ್ಯಮಾನ ನಡೆದಿತ್ತು. ಈ ವೀಡಿಯೋಗಳು ನಕಲಿ ಎಂದು ತಮಿಳುನಾಡು ಸರ್ಕಾರ ಹೇಳಿತ್ತಲ್ಲದೆ ವಲಸಿಗ ಕಾರ್ಮಿಕರಿಗೆ ರಾಜ್ಯದಲ್ಲಿ ಎಲ್ಲಾ ರಕ್ಷಣೆಯೂ ಇದೆ ಎಂದು ತಿಳಿಸಿತ್ತು.