ಅನಿಲ್ ಆ್ಯಂಟನಿಯನ್ನು ಬಿಜೆಪಿ ಕರಿಬೇವಿನ ಸೊಪ್ಪಿನಂತೆ ಬಳಸಿ ಎಸೆಯುತ್ತಾರೆ: ಸಹೋದರ ಅಜಿತ್ ಆ್ಯಂಟನಿ
ತಿರುವನಂತಪುರಂ: ಕಾಂಗ್ರೆಸ್ (Congress) ಜೊತೆಗಿನ ಎಲ್ಲಾ ಸಂಬಂಧವನ್ನು ಮುರಿದುಕೊಂಡು ಬಿಜೆಪಿಗೆ (BJP) ಸೇರಿದ ಅನಿಲ್ ಆ್ಯಂಟನಿ ಬಗ್ಗೆ ಅವರ ಸಹೋದರ, ಎಕೆ ಆ್ಯಂಟನಿ ಅವರ ಕಿರಿಯ ಮಗ ಅಜಿತ್ ಆ್ಯಂಟನಿ ಪ್ರತಿಕ್ರಿಯಿಸಿದ್ದಾರೆ.
ತನ್ನ ಸಹೋದರನ ನಿರ್ಧಾರವು "ಉದ್ವೇಗದ" ನಿರ್ಧಾರವಾಗಿತ್ತು ಮತ್ತು ಕೇಸರಿ ಪಕ್ಷವು ಅವರನ್ನು "ಕರಿಬೇವು" ಸೊಪ್ಪಿನಂತೆ ಬಳಸಿ ಎಸೆಯುವಂತೆ ಎಸೆಯುತ್ತದೆ ಎಂದು ಹೇಳಿದ್ದಾರೆ.
“ಅನಿಲ್ ತಮ್ಮ ನಿರ್ಧಾರದ ಬಗ್ಗೆ ಕುಟುಂಬಕ್ಕೆ ಕಿಂಚಿತ್ತೂ ಸುಳಿವು ನೀಡಿರಲಿಲ್ಲ. ಗುರುವಾರ, ಅವನು ಬಿಜೆಪಿ ಸೇರ್ಪಡೆಯಾಗುವದರ ಬಗ್ಗೆ ಟಿವಿ ಚಾನೆಲ್ಗಳಲ್ಲಿ ಸುದ್ದಿ ನೋಡಿ ನಮಗೆಲ್ಲಾ ಆಘಾತವಾಗಿದೆ” ಎಂದು ಅಜಿತ್ ಹೇಳಿದ್ದಾರೆ.
ಅನಿಲ್ ಬಿಜೆಪಿ ಸದಸ್ಯತ್ವವನ್ನು ಸ್ವೀಕರಿಸಿದ್ದನ್ನು ನೋಡಿದ ನಂತರ ತಂದೆ ತುಂಬಾ ಖಿನ್ನರಾಗಿದ್ದಾರೆ ಎಂದು ಅವರು ಹೇಳಿದರು.
“ಪಪ್ಪ (ಎ ಕೆ ಆಂಟನಿ) ಮನೆಯ ಒಂದು ಮೂಲೆಯಲ್ಲಿ ಅತ್ಯಂತ ನೋವಿನಿಂದ ಕುಳಿತಿದ್ದರು. ನನ್ನ ಜೀವನದಲ್ಲಿ ನಾನು ಅವರನ್ನು ಎಂದೂ ಈ ರೀತಿ ದುರ್ಬಲನಾಗಿ ನೋಡಿಲ್ಲ. ಅವರು ಕಣ್ಣೀರು ಹಾಕಿಲ್ಲ, ಅಷ್ಟೇʼ’ ಎಂದು ಅಜಿತ್ ಹೇಳಿದ್ದಾರೆ.
“ಅನಿಲ್ ಕೋಪದಿಂದ (ಕಾಂಗ್ರೆಸ್) ಪಕ್ಷದಿಂದ ದೂರ ಉಳಿಯುತ್ತಾರೆ ಎಂದು ನಾನು ಭಾವಿಸಿದ್ದೆ, ಆದರೆ ಅವರು ಬಿಜೆಪಿಗೆ ಹೋಗುತ್ತಾರೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಅವನ ನಿರ್ಧಾರವು ಸಂಪೂರ್ಣವಾಗಿ ಅನಿರೀಕ್ಷಿತವಾಗಿದೆ, ”ಎಂದು ಅಜಿತ್ ಹೇಳಿದರು.