ಬಾಲಕನ ಬಟ್ಟೆ ಬಿಚ್ಚಿ 'ಜೈ ಶ್ರೀ ರಾಮ್‌' ಹೇಳುವಂತೆ ಬಲವಂತಪಡಿಸಿ ಹಲ್ಲೆ ನಡೆಸಿದ ಗುಂಪು

Update: 2023-04-14 09:52 GMT

ಇಂದೋರ್‌: ಮೂವರು ಅಪ್ರಾಪ್ತ ಬಾಲಕರು 11 ವರ್ಷದ ಬಾಲಕನೊಬ್ಬನಿಗೆ ಹಲ್ಲೆ ನಡೆಸಿ ಜೈ ಶ್ರೀ ರಾಮ್‌ ಹೇಳುವಂತೆ ಬಲವಂತಪಡಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ ನಗರದಲ್ಲಿ ನಡೆದಿದೆ.

ಸಂತ್ರಸ್ತ ಬಾಲಕನನ್ನು ಆರೋಪಿ ಬಾಲಕರು ನಗರದ ನಿಪಾನಿಯಾ ಪ್ರದೇಶದ ಸಮೀಪದ ಕೆರೆ ಬಳಿಗೆ ಆಟಿಕೆಗಳನ್ನು ಖರೀದಿಸುವ ನೆಪದಲ್ಲಿ ಕರೆದೊಯ್ದಿದ್ದರೆನ್ನಲಾಗಿದೆ. ಈ ಘಟನೆಯ ವೀಡಿಯೋ ವೈರಲ್‌ ಆಗಿದ್ದು ಅದರಲ್ಲಿ ನಗ್ನನಾಗಿದ್ದ ಬಾಲಕನಿಗೆ 'ಜೈ ಶ್ರೀ ರಾಮ್‌', 'ಹಿಂದುಸ್ತಾನ್‌ ಝಿಂದಾಬಾದ್‌' ಮತ್ತು 'ಪಾಕಿಸ್ತಾನ್‌ ಮುರ್ದಾಬಾದ್‌' ಘೋಷಣೆಗಳನ್ನು ಕೂಗುವಂತೆ ಬಲವಂತಪಡಿಸುತ್ತಿರುವುದು ಕಾಣಿಸುತ್ತದೆ.

ಅಪ್ರಾಪ್ತ ಅವರಿಂದ ತಪ್ಪಿಸಿಕೊಂಡು ಮನೆಗೆ ಬಂದು ಕುಟುಂಬ ಸದಸ್ಯರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ ನಂತರ ಪೊಲೀಸ್‌ ದೂರು ದಾಖಲಿಸಲಾಗಿದೆ. ಸಂತ್ರಸ್ತ ಮತ್ತು ಆರೋಪಿಗಳು ಒಂದೇ ಪ್ರದೇಶದ ನಿವಾಸಿಗಳಾಗಿದ್ದು ಅವರ ಹೆತ್ತವರು ಕಾರ್ಮಿಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಬಾಲಕನ ಹೆತ್ತವರು ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 323, 294 ಮತ್ತು 365 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಹೆತ್ತವರು ಶೂರಿಟಿ ನೀಡಿದ ನಂತರ ಆರೋಪಿ ಬಾಲಕರಿಗೆ ಜಾಮೀನು ನೀಡಲಾಗಿದೆ. ಮುಂದೆ ಅವರನ್ನು ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ತಿಳಿದು ಆರೋಪಿಗಳ ಹೆತ್ತವರು ಆಘಾತಗೊಂಡಿದ್ದು ಮಕ್ಕಳನ್ನು ಸರಿದಾರಿಗೆ ತರಲು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಅಪ್ರಾಪ್ತರಿಗೆ ಸಂಬಂಧಿಸಿರುವುದರಿಂದ ಆದರ ವೀಡಿಯೋ ಶೇರ್‌ ಮಾಡದಂತೆ ಪೊಲೀಸರು ವಿನಂತಿಸಿದ್ದಾರೆ.

Similar News