×
Ad

ದಲಿತ ಯುವತಿಯನ್ನು ಮದುವೆಯಾದ ಕೋಪಕ್ಕೆ ಪುತ್ರ, ತನ್ನ ತಾಯಿಯನ್ನೂ ಕೊಲೆಗೈದ ವ್ಯಕ್ತಿ !

Update: 2023-04-16 13:06 IST

ಕೃಷ್ಣಗಿರಿ: ತನ್ನ ಪುತ್ರ ದಲಿತ ಯುವತಿಯನ್ನು ವಿವಾಹವಾಗಿದ್ದಕ್ಕೆ ಕ್ರುದ್ಧನಾದ ವ್ಯಕ್ತಿಯೊಬ್ಬ ತನ್ನ ಪುತ್ರ ಹಾಗೂ ತಾಯಿಯನ್ನು ಕತ್ತರಿಸಿ ಹತ್ಯೆಗೈದಿರುವ ಭೀಕರ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಆತನ ಸೊಸೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು thenewsminute.com ವರದಿ ಮಾಡಿದೆ.

ಹತ್ಯೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿರುವ ಆರೋಪಿಯನ್ನು ದಂಡಪಾಣಿ ಎಂದು ಗುರುತಿಸಲಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಹತ್ಯೆಗಾಗಿ ಪ್ರಯತ್ನ) ಹಾಗೂ ಸೆಕ್ಷನ್ 302 (ಹತ್ಯೆಗಾಗಿ ಶಿಕ್ಷೆ) ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(2)v ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಂಡಪಾಣಿ ಶನಾರ್ (ನಾಡಾರ್) ಎಂದು ಕರೆಯಲಾಗುವ ಜಾತಿಗೆ ಸೇರಿದ್ದು, ಈ ಜಾತಿಯನ್ನು ತಮಿಳುನಾಡಿನಲ್ಲಿ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.

ದಂಡಪಾಣಿಯ ಪುತ್ರ ಸುಭಾಶ್ (22) ಅರಿಯಲೂರು ಜಿಲ್ಲೆಯ ಜಯನ್‌ಕೊಂಡಂ ಗ್ರಾಮದ ಅನುಶ್ಯಾ (25) ಎಂಬ ಯುವತಿಯನ್ನು ವಿವಾಹವಾಗಿ ಸುಮಾರು 15 ದಿನಗಳಷ್ಟೇ ಕಳೆದಿತ್ತು. ತಿರುಪುರದಲ್ಲಿ ತಾನು ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಅನುಶ್ಯಾಳ ಸಂಪರ್ಕಕ್ಕೆ ಬಂದಿದ್ದ ಸುಭಾಶ್, ತಾನು ಅನುಶ್ಯಾಳನ್ನು ಪ್ರೀತಿಸುತ್ತಿದ್ದೇನೆ ಎಂಬ ಸಂಗತಿಯನ್ನು ತನ್ನ ತಂದೆಗೆ ಮುಂಚಿತವಾಗಿಯೇ ತಿಳಿಸಿದ್ದ ಎನ್ನಲಾಗಿದೆ. ಆದರೆ, ಅನುಶ್ಯಾಳ ಜಾತಿ ಹಾಗೂ ವಾಸ ಸ್ಥಳದ ಕುರಿತು ತಿಳಿದು ಬಂದ ಮೇಲೆ ದಂಡಪಾಣಿ ಇಬ್ಬರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಈ ನಡುವೆ ಆ ಇಬ್ಬರು ತಮ್ಮ ಪೋಷಕರಿಗೆ ಯಾವುದೇ ಮಾಹಿತಿ ನೀಡದೆ ವಿವಾಹವಾಗಿದ್ದರು.

ತಮಿಳುನಾಡು ಹೊಸ ವರ್ಷದ ಅಂಗವಾಗಿ ಎಪ್ರಿಲ್ 14ರಂದು ಕೃಷ್ಣಗಿರಿಯ ಉತ್ತನಗರೈ ಬಳಿಯ ತನ್ನ ತವರು ಗ್ರಾಮವಾದ ಅರುಣಾಪತಿಗೆ ತನ್ನ ಪತ್ನಿಯನ್ನು ತನ್ನ ತಂದೆಯ ತಾಯಿ ಕಣ್ಣಮ್ಮಗೆ ಪರಿಚಯಿಸಲು ಸುಭಾಶ್ ಕರೆದುಕೊಂಡು ಬಂದಿದ್ದ. ದಂಪತಿಗಳು ತನ್ನ ಗ್ರಾಮಕ್ಕೆ ಬಂದಿದ್ದಾರೆ ಎಂಬ ಸುದ್ದಿ ತಿಳಿದ ದಂಡಪಾಣಿ, ತನ್ನ ತಾಯಿಯ ಮನೆಗೆ ನುಗ್ಗಿ ಸುಭಾಶ್, ಕಣ್ಣಮ್ಮ ಹಾಗೂ ಅನುಶ್ಯಾ ಮೇಲೆ ಕುಡುಗೋಲಿನಿಂದ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಸುಭಾಶ್ ಹಾಗೂ ಕಣ್ಣಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅನುಶ್ಯಾಳನ್ನು ರಕ್ಷಿಸಿರುವ ನೆರೆಹೊರೆಯವರು, ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿ, ಆ್ಯಂಬುಲೆನ್ಸ್ ಸೇವೆಗೂ ಕರೆ ಮಾಡಿದ್ದಾರೆ.

ಆಕೆಯನ್ನು ಮೊದಲಿಗೆ ಉತ್ತನಗರೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆಕೆ ದಾಳಿಯ ಕುರಿತು ಕೃಷ್ಣಗಿರಿ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರೆದುರು ಹೇಳಿಕೆ ನೀಡಿದ್ದಾರೆ. ನಂತರ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೃಷ್ಣಗಿರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

ಈ ವರ್ಷ ಕೃಷ್ಣಗಿರಿ ಜಿಲ್ಲೆಯಲ್ಲಿ ಪ್ರೇಮ ವಿವಾಹದ ಕಾರಣಕ್ಕೆ ನಡೆದಿರುವ ಎರಡನೆ ಹತ್ಯಾ ಪ್ರಕರಣ ಇದಾಗಿದೆ. ಕಳೆದ ತಿಂಗಳಷ್ಟೇ ದಂಪತಿಗಳಿಬ್ಬರೂ ವಣ್ಣಿಯಾರ್ ಸಮುದಾಯಕ್ಕೆ ಸೇರಿದ್ದರೂ ತನ್ನ ಪುತ್ರಿ ಸರಣ್ಯ(21)ಳನ್ನು ಪ್ರೇಮ ವಿವಾಹವಾದ ಕಾರಣಕ್ಕೆ ಕ್ರೋಧಗೊಂಡ ಆಕೆಯ ತಂದೆ, 26 ವರ್ಷದ ಸಿ. ಜಗನ್ ಎಂಬ ಯುವಕನನ್ನು ಹಾಡಹಗಲೇ ಬರ್ಬರವಾಗಿ ಕೊಂದು ಹಾಕಿದ್ದ.

ಈ ಕುರಿತು ಪ್ರತಿಕ್ರಿಯಿಸಿರುವ ದಲಿತರು ಮತ್ತು ಬುಡಕಟ್ಟು ಸಮುದಾಯಗಳ ಹಕ್ಕಿಗಾಗಿ ಹೋರಾಡುತ್ತಿರುವ ಮದುರೈ ಮೂಲದ ಎವಿಡೆನ್ಸ್ ಎಂಬ ಸಂಘಟನೆಯ ಸಂಸ್ಥಾಪಕ ನಿರ್ದೇಶಕ ಕಾತಿರ್, ಈ ಹತ್ಯೆಗಳು ರಾಜ್ಯ ಸರ್ಕಾರದ ವೈಫಲ್ಯಕ್ಕೆ ದ್ಯೋತಕ ಎಂದು ಆರೋಪಿಸಿದ್ದಾರೆ.

Similar News