ಪ್ರಧಾನಿ ಮೋದಿ ವಿರುದ್ಧ ನಿರ್ಣಯ ಅಂಗೀಕರಿಸಿದ ದಿಲ್ಲಿ ವಿಧಾನಸಭೆ
ಹೊಸದಿಲ್ಲಿ: ದಿಲ್ಲಿ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಸಮನ್ಸ್ ಕಳುಹಿಸಿದ್ದ ಸಿಬಿಐ ಅವರನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ಪ್ರಶ್ನಿಸಿದ ಬೆಳವಣಿಗೆಯ ನಂತರ ಸೋಮವಾರ ನಡೆದ ದಿಲ್ಲಿ ವಿಧಾನಸಭೆಯ (Delhi Assembly) ವಿಶೇಷ ಅಧಿವೇಶನವು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ.
"ಅರವಿಂದ್ ಕೇಜ್ರಿವಾಲ್ ಅವರ ಬೆಳೆಯುತ್ತಿರುವ ಜನಪ್ರಿಯತೆಯನ್ನು ತಡೆಯಲು ವಿಫಲವಾದ ನಂತರ ತನಿಖಾ ಏಜನ್ಸಿಗಳನ್ನು ಅವರ ವಿರುದ್ಧ ಛೂ ಬಿಟ್ಟಿದ್ದಕ್ಕಾಗಿ" ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಈ ನಿರ್ಣಯ ಅಂಗೀಕರಿಸಲಾಗಿದೆ.
ಮುಖ್ಯಮಂತ್ರಿ ಕೇಜ್ರಿವಾಲ್ ಮಾತನಾಡಿ, "ಇಂದು ನಾನು ಸದನಕ್ಕೆ ಅನ್ಪಢ್ ರಾಜಾ (ಅನಕ್ಷರಸ್ಥ ರಾಜ) ಒಬ್ಬನ ಕಥೆ ಹೇಳುತ್ತೇನೆ, ರಾಜ ಒಬ್ಬ ಚೌಥೀ (ನಾಲ್ಕನೇ ಕ್ಲಾಸ್) ಪಾಸ್ ಆಗಿದ್ದ, ತುಂಬಾ ಅಹಂಕಾರಿಯಾಗಿದ್ದ ಮತ್ತು ಹಣಕ್ಕಾಗಿ ಅದೆಷ್ಟು ದುರಾಸೆಯಿತ್ತೆಂದರೆ ಆತ ಅತೀವ ಭ್ರಷ್ಟನಾಗಿದ್ದ," ಎಂದು ಹೇಳಿದರು.
"ಅಧಿಕಾರಿಗಳು ಬಂದು ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದರು ಆದರೆ ರಾಜನಿಗೆ ಒಂದೂ ಅರ್ಥವಾಗುತ್ತಿರಲಿಲ್ಲ. ಈ ಚೌಥೀ ಪಾಸ್ ರಾಜ ಏನೆಲ್ಲಾ ಸಹಿ ಹಾಕಿದ ಎಂದು ಗೊತ್ತಿಲ್ಲ, ಕೊನೆಗೆ ಚೌಥೀ ಪಾಸ್ ಎಂದು ಹೇಳುತ್ತಾರೆಂದು ನಕಲಿ ಡಿಗ್ರಿ ಪಡೆದು ತಾನು ಎಂಎ ಮಾಡಿದ್ದೇನೆಂದು ಹೇಳಿಕೊಂಡ. ಜನರು ಆರ್ಟಿಐ ಹಾಕಲು ಆರಂಭಿಸಿದಾಗ ಅವರಿಗೆ ರೂ. 25,000 ದಂಡ ವಿಧಿಸಲಾಯಿತು," ಎಂದರು.
ವಿಪಕ್ಷ ಸದಸ್ಯರ ಸ್ಥಾನಗಳತ್ತ ನೋಡಿದ ಕೇಜ್ರಿವಾಲ್ ನಿಮ್ಮ ನಾಯಕನ ಬಗ್ಗೆ ಮಾತನಾಡುತ್ತಿಲ್ಲ, ನೀವೂ ನಗಬಹುದು ಎಂದರು.
"ಒಂದು ದಿನ ಕೆಲ ಜನರು ರಾಜನ ಬಳಿ ಬಂದು ಅಮಾನ್ಯೀಕರಣ ಘೋಷಿಸಲು ಹೇಳಿದರು., ಆತನಿಗೆ ಏನೂ ಅರ್ಥವಾಗಲಿಲ್ಲ, ಆತ ಅದನ್ನು ಟಿವಿಯಲ್ಲಿ ಘೋಷಿಸಿಬಿಟ್ಟ ಮತ್ತು ಇಡೀ ದೇಶ ಕಷ್ಟಪಟ್ಟಿತು. ನಂತರ ಆತನಿಗೆ ಹಣ ಮಾಡಬೇಕಿತ್ತು, ಸ್ನೇಹಿತನಿಗೆ ಕರೆ ಮಾಡಿ ನಿನಗೆ ಎಲ್ಲಾ ಸರ್ಕಾರಿ ಗುತ್ತಿಗೆ ಕೊಡಿಸುತ್ತೇನೆ, ಹಣ ನನ್ನದು, ಮುಖ ನಿನ್ನದು ಎಂದು ಹೇಳಿದ," ಎಂದು ಹೇಳಿದ ಕೇಜ್ರಿವಾಲ್ ತಮ್ಮ ಕಥೆ ಮುಕ್ತಾಯಗೊಳಿಸುತ್ತಾ, "ಒಂದು ದಿನ ಜನರು ರಾಜಾನನ್ನು ಪಟ್ಟದಿಂದ ಕೆಳಕ್ಕಿಳಿಸಿ ಆತನ ಸ್ಥಾನಕ್ಕೆ ಪ್ರಾಮಾಣಿಕ, ದೇಶಭಕ್ತ ವ್ಯಕ್ತಿಯೊಬ್ಬನನ್ನು ತಂದರು, ದೇಶ ನಂತರ ಪ್ರಗತಿ ಕಂಡಿತು," ಎಂದರು.
ವಿಧಾನಸಭೆ ʼಅಸಂವಿಧಾನಿಕವಾಗಿ ಕಾರ್ಯಾಚರಿಸುತ್ತಿದೆʼ ಎಂದು ಆರೋಪಿಸಿ ಮೂವರು ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರೆಂದು ವರದಿಯಾಗಿದೆ.