×
Ad

ಪಂಜಾಬ್‌: ಗ್ರೀಸ್‌ ಟ್ಯಾಂಕ್‌ ಸ್ವಚ್ಛಗೊಳಿಸುವ ವೇಳೆ ವಿಷಗಾಳಿ ಸೇವಿಸಿ ನಾಲ್ವರು ಕಾರ್ಮಿಕರು ಮೃತ್ಯು

Update: 2023-04-22 11:03 IST

ಡೇರಾ ಬಸ್ಸಿ(ಪಂಜಾಬ್) : ಪಂಜಾಬ್‌ ರಾಜ್ಯದ ಡೇರಾ ಬಸ್ಸಿ ಎಂಬಲ್ಲಿರುವ ಫೆಡರಲ್‌ ಮೀಟ್  ಪ್ಲಾಂಟ್‌ನಲ್ಲಿನ ಗ್ರೀಸ್‌ ಟ್ಯಾಂಕ್‌ ಅನ್ನು ಸ್ವಚ್ಛಗೊಳಿಸುವ ವೇಳೆ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಈ ದುರಂತ ಶುಕ್ರವಾರ ಅಪರಾಹ್ನ ಸಂಭವಿಸಿದೆ.

ಕಾರ್ಮಿಕರು ಒಬ್ಬರ ಹಿಂದೆ ಒಬ್ಬರು ಟ್ಯಾಂಕ್‌ ಪ್ರವೇಶಿಸಿದ್ದು ವಿಷಗಾಳಿ ಸೇವನೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಒಬ್ಬ ಕಾರ್ಮಿಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.

"ಮೊದಲು ಒಳಕ್ಕೆ ಹೋದ ಕಾರ್ಮಿಕ ವಾಪಸಾಗದೇ ಇದ್ದಾಗ ಇನ್ನೊಬ್ಬ ಹೋಗಿದ್ದ. ಆತನೂ ವಾಪಸಾಗದೇ ಇದ್ದಾಗ ಉಳಿದಿಬ್ಬರು ಹೋಗಿದ್ದರು. ಅವರು ಕೂಡ ವಾಪಸಾಗದೇ ಇದ್ದುದನ್ನು ಗಮನಿಸಿ ನಾನು ಕೂಡ ಹೋಗಿ ಅಲ್ಲಿ ತಲೆತಿರುಗಿ ಬಿದ್ದುಬಿಟ್ಟೆ, ನಂತರ ನನ್ನನ್ನು ರಕ್ಷಿಸಲಾಯಿತು" ಎಂದು ಈ ದುರಂತದಲ್ಲಿ ಬದುಕುಳಿದ ಕಾರ್ಮಿಕ ಹೇಳಿದ್ದಾನೆ.

ಮೃತರನ್ನು ಮಾನಕ್‌, ಶ್ರೀಧರ್‌ ಪಾಂಡೆ, ಕುರ್ಬಾನ್‌ ಮತ್ತು ಜನಕ್‌ ಎಂದು ಗುರುತಿಸಲಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Similar News