×
Ad

ಬಿಹಾರದ ಮಾಜಿ ಸಂಸದ ಆನಂದ್ ಮೋಹನ್ ಬಿಡುಗಡೆ ವಿರುದ್ಧ ಪಾಟ್ನಾ ಹೈಕೋರ್ಟ್ ಮೊರೆ ಹೋದ ದಲಿತ ಸಂಘಟನೆ

Update: 2023-04-27 12:39 IST

ಪಾಟ್ನಾ: ಜೈಲು ನಡಾವಳಿಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿ ಭೀಮ್ ಆರ್ಮಿಯ ಭಾರತ್ ಏಕ್ತಾ ಮಿಷನ್ ನ ಉಸ್ತುವಾರಿ ಅಮರ್ ಜ್ಯೋತಿ ಎಂಬವರು ಮಾಜಿ ಸಂಸದ ಹಾಗೂ ಜೀವಾವಧಿ ಶಿಕ್ಷೆಗೊಳಗಾಗಿದ್ದ ಆನಂದ್ ಮೋಹನ್ ಹಾಗೂ ಇನ್ನಿತರ 26 ಮಂದಿಯನ್ನು ಬಿಡುಗಡೆಗೊಳಿಸುವ ಬಿಹಾರ ಸರ್ಕಾರದ ಆದೇಶದ ವಿರುದ್ಧ ಬುಧವಾರ ಪಾಟ್ನಾ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿರುವ ಅಮರ್ ಜ್ಯೋತಿ, ನಿತೀಶ್ ಕುಮಾರ್ ಸರ್ಕಾರವು ಅಪರಾಧಿಗಳಿಗೆ ನೆರವು ನೀಡಲು ರಾಜ್ಯ ಜೈಲು ನಡಾವಳಿಗಳನ್ನು ತಿದ್ದುಪಡಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಬಿಹಾರ ಸರ್ಕಾರದ ಈ ಆದೇಶವು ದಲಿತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.

1994ರಲ್ಲಿ ಐಎಎಸ್ ಅಧಿಕಾರಿಯೊಬ್ಬರ ಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಆನಂದ್ ಮೋಹನ್ 15 ವರ್ಷ ಜೈಲು ವಾಸ ಅನುಭವಿಸಿದ್ದಾರೆ.

ಆನಂದ್ ಮೋಹನ್ ಅನ್ನು ಬಿಡುಗಡೆ ಮಾಡುವ ಆದೇಶವನ್ನು ಹಿಂಪಡೆಯಬೇಕು ಎಂದು ಬಿಹಾರ ಸರ್ಕಾರವನ್ನು ಒತ್ತಾಯಿಸಿರುವ ಮೃತ ಐಎಎಸ್ ಅಧಿಕಾರಿಯ ಪತ್ನಿ ಉಮಾ ಕೃಷ್ಣಯ್ಯ, ಈ ಆದೇಶವು ಕೆಟ್ಟ ಪೂರ್ವ ನಿದರ್ಶನವಾಗಲಿದ್ದು, ಸಮಾಜದ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ ಎಂದು ಪ್ರತಿಪಾದಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಮಾ ಕೃಷ್ಣಯ್ಯ, "ನಮಗೆ ಸಂತಸವಾಗಿಲ್ಲ ಮತ್ತು ಇದು ತಪ್ಪು ನಿರ್ಧಾರವಾಗಿದೆ. ಬಿಹಾರದಲ್ಲಿ ಇಂತಹ ನಿರ್ಧಾರಗಳ ಮೇಲೆ ಜಾತಿ ರಾಜಕಾರಣ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಇದು ತೋರಿಸುತ್ತಿದೆ. ಆತ ರಜಪೂತ್ ಸಮುದಾಯದವನಾಗಿದ್ದು, ರಜಪೂತರ ಮತ ಸೆಳೆಯಲು ನೆರವು ನೀಡಬಲ್ಲ. ಇಲ್ಲವಾದರೆ ಸರ್ಕಾರವೇಕೆ ಅಪರಾಧಿಯನ್ನು ಬಿಡುಗಡೆ ಮಾಡುತ್ತದೆ? ರಜಪೂತರ ಮತಗಳನ್ನು ಸೆಳೆಯಲು ಆತನಿಗೆ ಚುನಾವಣಾ ಟಿಕೆಟ್ ನೀಡಲಾಗುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನಂದ್ ಮೋಹನ್ ಅನ್ನು ಬಿಡುಗಡೆಗೊಳಿಸುವ ಬಿಹಾರ ಸರ್ಕಾರದ ನಡೆಯ ವಿರುದ್ಧ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಕೂಡಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಹಾರದ ನಿತೀಶ್ ಕುಮಾರ್ ಸರಕಾರ ಜೈಲು ನಿಯಮಗಳನ್ನು ಪರಿಷ್ಕರಿಸಿದ ನಂತರ ಮಾಜಿ ಸಂಸದ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಹಿಂದಿನ ನಿಯಮದ ಪ್ರಕಾರ, ಕರ್ತವ್ಯದಲ್ಲಿದ್ದ ಸಾರ್ವಜನಿಕ ನೌಕರನ ಹತ್ಯೆಗೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದ ಯಾರಾದರೂ ಶಿಕ್ಷೆಯ ವಿನಾಯಿತಿಗೆ ಅರ್ಹರಾಗಿರಲಿಲ್ಲ. ಇದನ್ನು ಬಿಹಾರ ಸರಕಾರ ಬದಲಾಯಿಸಿದ್ದು, 14 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ ಸಿಂಗ್ ಸೇರಿದಂತೆ 27 ಅಪರಾಧಿಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿತು.

ಈ ನಡೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ನಿತೀಶ್ ಕುಮಾರ್ ಸರಕಾರ  ವಿರುದ್ಧ ಪ್ರತಿಪಕ್ಷ ಬಿಜೆಪಿ ಕಿಡಿಕಾರಿದೆ. ಮಿತ್ರಪಕ್ಷ ಆರ್‌ಜೆಡಿ ಬೆಂಬಲದೊಂದಿಗೆ ಅಧಿಕಾರದಲ್ಲಿ ಉಳಿಯಲು ನಿತೀಶ್  ಕುಮಾರ್ ಕಾನೂನನ್ನು ತ್ಯಾಗ ಮಾಡಿದ್ದಾರೆ ಎಂದು ಬಿಜೆಪಿಯ ಸಂಸದ, ಮಾಜಿ ಉಪಮುಖ್ಯಮಂತ್ರಿ  ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಆರ್‌ಜೆಡಿಯನ್ನು ಪ್ರತಿನಿಧಿಸಿದ್ದ ಸಿಂಗ್ ಅವರನ್ನು ಪ್ರಮುಖ ರಜಪೂತ ನಾಯಕನೆಂದು ಪರಿಗಣಿಸಲಾಗಿದೆ. ಅವರ ಬಿಡುಗಡೆಯು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ಮೇಲ್ವರ್ಗದ ಮತಗಳನ್ನು ಸೆಳೆಯುವ ಕ್ರಮವೆಂದು ಪರಿಗಣಿಸಲಾಗಿದೆ.

Similar News