ಪತ್ನಿ, ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ

Update: 2023-05-16 16:29 GMT

ಹೊಸದಿಲ್ಲಿ, ಮೇ 16: ಹೊಸದಿಲ್ಲಿಯಲ್ಲಿ ಮಂಗಳವಾರ ನಡೆದ ಭೀಕರ ಘಟನೆಯೊಂದರಲ್ಲಿ, ದಿಲ್ಲಿ ಮೆಟ್ರೊ ಉದ್ಯೋಗಿಯೊಬ್ಬರು ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಚೂರಿಯಿಂದ ಇರಿದು, ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

45 ವರ್ಷದ ಸುಶೀಲ್ ಕುಮಾರ್, ಅವರ ಪತ್ನಿ 40 ವರ್ಷದ ಅನುರಾಧಾ ಮತ್ತು ಅವರ ಆರು ವರ್ಷದ ಮಗಳು ಅದಿತಿ ಮೃತಪಟ್ಟಿದ್ದಾರೆ ಹಾಗೂ ಅವರ 13 ವರ್ಷದ ಮಗ ಯುವರಾಜ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಶಾನ್ಯ ದಿಲ್ಲಿಯ ಶಾಹದಾರ ಜಿಲ್ಲೆಯ ಜ್ಯೋತಿ ಕಾಲನಿಯಲ್ಲಿ ಈ ಘಟನೆ ನಡೆದಿದೆ.

ಸುಶೀಲ್, ಪೂರ್ವ ವಿನೋದ್ ನಗರದಲ್ಲಿರುವ ಡೆಲ್ಲಿ ಮೆಟ್ರೊ ಡಿಪೋದಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ತನ್ನ ಹೆಂಡತಿ ಮಕ್ಕಳಿಗೆ ಚೂರಿಯಿಂದ ಇರಿದ ಬಳಿಕ ಮತ್ತು ನೇಣಿಗೆ ಶರಣಾಗುವ ಮೊದಲು, ‘‘ಕುತ್ತಿಗೆಗೆ ನೇಣು ಬಿಗಿಯುವುದು ಹೇಗೆ’’ ಎಂಬ ಬಗ್ಗೆ ಸುಶೀಲ್ ತನ್ನ ಕಂಪ್ಯೂಟರ್‌ನಲ್ಲಿ ಶೋಧ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಧ್ಯಾಹ್ನ ಸುಮಾರು 12 ಗಂಟೆ ಸಮಯಕ್ಕೆ ದಿಲ್ಲಿ ಪೊಲೀಸರಿಗೆ ಪಿಸಿಆರ್ ಕರೆಯೊಂದು ಬಂತು. ದಿಲ್ಲಿ ಮೆಟ್ರೊ ಉದ್ಯೋಗಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿವರಿಸಿದರು. ಇಂದು ಕೆಲಸಕ್ಕೆ ಯಾಕೆ ಬಂದಿಲ್ಲ ಎಂದು ಕೇಳಲು ಸುಶೀಲ್ ಕುಮಾರ್‌ಗೆ ಫೋನ್ ಮಾಡಿದಾಗ, ಅವರು ಅಳುತ್ತಾ, ತಾನು ಎಲ್ಲರನ್ನು ಕೊಂದಿದ್ದೇನೆ ಎಂದು ಹೇಳಿದರು ಎಂದು ಆ ಉದ್ಯೋಗಿ ತಿಳಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪೊಲೀಸರು ಸ್ಥಳಕ್ಕೆ ಹೋದಾಗ ಮೂವರು ಮೃತಪಟ್ಟಿದ್ದರು.

Similar News