ಕುಂದಾಪುರ: ರಸ್ತೆ ಕಾಮಗಾರಿಯ 80 ಚೀಲ ಸಿಮೆಂಟ್ ಕಳವು
Update: 2023-05-22 15:10 GMT
ಶಂಕರನಾರಾಯಣ, ಮೇ 22: ರಸ್ತೆ ಕಾಮಗಾರಿಗೆ ಶೇಖರಿಸಿಟ್ಟಿದ್ದ ಸಾವಿರಾರು ರೂ. ಮೌಲ್ಯದ ಸಿಮೆಂಟ್ ಚೀಲಗಳನ್ನು ಕಳವು ಮಾಡಿರುವ ಘಟನೆ ಮೇ 20ರಂದು ರಾತ್ರಿ ವೇಳೆ ನಡೆದಿದೆ.
ಕುಂದಾಪುರ ತಾಲೂಕು ಕೊಡ್ಲಾಡಿ ಗ್ರಾಮದ ಅಜ್ರಿ ನೇರಳಕಟ್ಟೆ ಮುಖ್ಯ ರಸ್ತೆಯಿಂದ ಚಿತ್ತೇರಿ ಗಣಪತಿ ದೇವಸ್ಥಾನ ನಾರುಮಕ್ಕಿ ಕೂಡು ರಸ್ತೆಯ ಕಾಮಗಾರಿಯನ್ನು ಗುತ್ತಿಗೆದಾರ ಪ್ರವೀಣ್ ಕುಮಾರ್ ಶೆಟ್ಟಿ ನಡೆಸುತ್ತಿದ್ದು, ಈ ಸಂಬಂಧ ಅಗತ್ಯವಿರುವ ಕಚ್ಚಾ ಸಾಮಗ್ರಿಗಳನ್ನು ಶೇಳ್ಕೋಡುನ ರಸ್ತೆ ಬದಿಯಲ್ಲಿ ಶೇಖರಿಸಿ ಇಟ್ಟಿದ್ದರು. ವಾಹನದಲ್ಲಿ ಬಂದ ಕಳ್ಳರು, ಸುಮಾರು 80 ಸಿಮೆಂಟ್ ಚೀಲಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 27,200ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.