ವಿಶ್ವ ಥಲಸ್ಸೆಮಿಯಾ ದಿನಾಚರಣೆಯ ಅಂಗವಾಗಿ ಮಣಿಪಾಲ ಕೆಎಂಸಿಯಲ್ಲಿ ಎಚ್‌ಎಲ್‌ಎ ಪರೀಕ್ಷಾ ಶಿಬಿರ

Update: 2023-05-22 15:27 GMT

ಮಣಿಪಾಲ, ಮೇ 22: ಜಾಗತಿಕ ಥಲಸ್ಸೆಮಿಯಾ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಮತ್ತು ಥಲಸ್ಸೆಮಿಯಾ ಪೀಡಿತ ಮಕ್ಕಳಿಗೆ ತಮ್ಮ ಆರೈಕೆದಾರರಿಗೆ  ಬೆಂಬಲ ವ್ಯಕ್ತಪಡಿಸಲು ಪ್ರತಿ ವರ್ಷ ವಿಶ್ವ ಥಲಸ್ಸೆಮಿಯಾ ದಿನವನ್ನು  ಆಚರಿಸಲಾಗುತ್ತದೆ. 

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗವು  ಸರ್ಕಾರೇತರ ಸಂಸ್ಥೆ ಡಿಕೆಎಂಎಸ್ ಸಹಕಾರದೊಂದಿಗೆ ಎಚ್‌ಎಲ್‌ಎ ಪರೀಕ್ಷಾ ಶಿಬಿರವನ್ನು ನಡೆಸಿತು. ಶಿಬಿರದಲ್ಲಿ ರೋಗಿಗಳು ಮತ್ತು ಸಂಭಾವ್ಯ ದಾನಿಗಳ 50 ಎಚ್‌ಎಲ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ಎಂ.ವಿ., ಎಚ್‌ಎಲ್‌ಎ ಟೈಪಿಂಗ್ ಮೂಳೆ ಮಜ್ಜೆಯ ಕಸಿ ಮಾಡಲು ಸಂಭಾವ್ಯ ದಾನಿಗಳನ್ನು ಗುರುತಿಸುವುದು ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು. ವಿಭಾಗದ ಸ್ಥಾನಿಕ ವೈದ್ಯೆ  ಡಾ.ಸ್ವಾತಿ ಪಿ.ಎಂ ಅವರು ಥಲಸ್ಸೇಮಿಯಾ ಮತ್ತು ಕಬ್ಬಿಣದ ಚೆಲೇಷನ್‌ನ ಅಗತ್ಯತೆಯ ಬಗ್ಗೆ ವಿವರಗಳನ್ನು ನೀಡಿದರು. 

ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಸ್ಟೆಮ್ ಸೆಲ್ ಟ್ರಾನ್ಸ್‌ಫ್ಲಾಂಟ್ ಚಿಕಿತ್ಸೆ,  ಥಲಸ್ಸೆಮಿಯಾ ಗುಣ ಪಡಿಸಲು ಅತ್ಯಂತ ಸೂಕ್ತ  ಆಯ್ಕೆಯಾಗಿದೆ. ಈ ಸೌಲಭ್ಯವು ಕೆಎಂಸಿ ಆಸ್ಪತ್ರೆಯಲ್ಲಿ ಲಭ್ಯವಿರುವುದರಿಂದ ರೋಗಿಗಳು ಬೇರೆಡೆ ದೂರ ಪ್ರಯಾಣಿಸ ಬೇಕಾಗಿಲ್ಲ  ಎಂದರು.

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಪದ್ಮರಾಜ್ ಹೆಗ್ಡೆ ಇಡೀ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.

Similar News