ಆನೆ ದಾಳಿ: ಸಕಾಲದಲ್ಲಿ ಪರಿಹಾರ ಪಡೆಯದ ಶೇ.62.4 ರೈತರು

ಮೌಲ್ಯಮಾಪನ ವರದಿ ಬಹಿರಂಗ

Update: 2023-05-25 03:20 GMT

ಬೆಂಗಳೂರು: ಆನೆ ದಾಳಿಗೆ ಒಳಗಾದ ರೈತರು, ಬೆಳೆಗಾರರ ಪೈಕಿ ಶೇ.62.4ರಷ್ಟು ರೈತರು ಸಕಾಲದಲ್ಲಿ ಎಕ್ಸ್‌ಗ್ರೇಷಿಯಾ ಪಡೆದಿಲ್ಲ. ಶೇ. 37.6ರಷ್ಟು ರೈತರು ಮಾತ್ರ ಸಕಾಲದಲ್ಲಿ ಅಂದರೆ ಮೂರು ತಿಂಗಳ ಒಳಗೆ ಎಕ್ಸ್ ಗ್ರೇಷಿಯಾ ಮೊತ್ತ ಪಡೆದಿದ್ದಾರೆ. ಇನ್ನುಳಿದ ರೈತರು, ಬೆಳೆಗಾರರು ಪರಿಹಾರ ಪಡೆಯಲು ವರ್ಷಗಟ್ಟಲೆ ಅಲೆದಿದ್ದಾರೆ. ಚಾಮರಾಜನಗರ ಮತ್ತು ವೀರಾಜಪೇಟೆ ಹೊರತುಪಡಿಸಿದರೆ ಉಳಿದೆಲ್ಲಾ ವಿಭಾಗಗಳಲ್ಲಿಯೂ ರೈತರಿಗೆ ಪರಿಹಾರ ವಿಳಂಬವಾಗಿ ತಲುಪಿದೆ ಎಂದು ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಮತ್ತು ಅರಣ್ಯ ಇಲಾಖೆಯು ನಡೆಸಿದ್ದ ಮೌಲ್ಯಮಾಪನ ವರದಿ ಬಹಿರಂಗಗೊಳಿಸಿದೆ.

ಮಾನವ ಆನೆ ಸಂಘರ್ಷ, ಉಪಶಮನ ಕ್ರಮಗಳು ಮತ್ತು ಸಂಘರ್ಷ ತಗ್ಗಿಸುವಲ್ಲಿ ಅದರ ಪರಿಣಾಮ ಕುರಿತು ಪ್ರಾಧಿಕಾರಕ್ಕೆ 2022ರ ನವೆಂಬರ್‌ನಲ್ಲಿ ಸಲ್ಲಿಸಿರುವ ವರದಿಯು ಮಾನವ ಆನೆ ಸಂಘರ್ಷದ ವಿವಿಧ ಆಯಾಮಗಳನ್ನು ತೆರೆದಿಟ್ಟಿದೆ. ಹಾಗೆಯೇ 2023ರಲ್ಲಿ ಕಾಂಗ್ರೆಸ್ ಸರಕಾರವೇ ಅಸ್ತಿತ್ವಕ್ಕೆ ಬಂದಿರುವ ಬೆನ್ನಲ್ಲೇ  ಈ ವರದಿಯು ಮುನ್ನೆಲೆಗೆ ಬಂದಿದೆ. ಇದರ  ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಅನುದಾನ ಲಭ್ಯತೆ ಇಲ್ಲದಿರುವುದೇ ಅಸಮರ್ಥನೀಯ ವಿಳಂಬಕ್ಕೆ ಸಾಮಾನ್ಯ ಕಾರಣ ಎಂದಿರುವ ಅಧ್ಯಯನ ತಂಡವು ಮೂರು ತಿಂಗಳಿಗಿಂತಲೂ  ಹೆಚ್ಚಿನ ಅವಧಿ ತೆಗೆದುಕೊಂಡರೆ ಅದನ್ನು ಇಲಾಖೆಯ ವಿಳಂಬ ಎಂದೇ ಪರಿಗಣಿಸಬೇಕಾಗುತ್ತದೆ. ಆರ್ಥಿಕ ನಷ್ಟ ಮತ್ತು ಭಾವನಾತ್ಮಕವಾಗಿಯೂ ಕ್ಷೋಭೆ ಅನುಭವಿಸುವುದರಿಂದ ರೈತ ಈಗಾಗಲೇ ಸಂಕಷ್ಟದಲ್ಲಿದ್ದಾನೆ ಎನ್ನುವುದನ್ನು ಮರೆಯಬಾರದು ಎಂದು ಸರಕಾರದ ಗಮನ ಸೆಳೆದಿದೆ. ಚಾಮರಾಜನಗರ ಮತ್ತು ವೀರಾಜಪೇಟೆ ಹೊರತುಪಡಿಸಿದರೆ ಉಳಿದೆಲ್ಲಾ ವಿಭಾಗಗಳಲ್ಲಿಯೂ ರೈತರಿಗೆ ಪರಿಹಾರವು ವಿಳಂಬವಾಗಿ ತಲುಪಿದೆ.  ಮೈಸೂರು, ಮಂಡ್ಯ, ಮಡಿಕೇರಿ ಮತ್ತು ಬಂಡೀಪುರ ಮತ್ತು ನಾಗರಹೊಳೆ ರೈತರು ಸಕಾಲದಲ್ಲಿ ಎಕ್ಸ್‌ಗ್ರೇಷಿಯಾ ಪಡೆದಿಲ್ಲ. ರೈತರು

ಎಕ್ಸ್‌ಗ್ರೇಷಿಯಾ ಪಡೆದುಕೊಳ್ಳುವಲ್ಲಿನ ವಿಳಂಬದ ಅವಧಿಯು ಕೆಲವು ತಿಂಗಳುಗಳಿಂದ ವರ್ಷಗಳವರೆಗೂ ಇದೆ. ಶೇ.62.4ರಷ್ಟು ರೈತರಿಗೆ ಘಟನೆ ನಡೆದ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯ ಬಳಿಕ ಪರಿಹಾರ ಮೊತ್ತ ಸಂದಾಯವಾಗಿದೆ. ಈ ಶ್ರೇಣಿಯಲ್ಲಿ ಶೆ.9.8ರಷ್ಟು ರೈತರು ಆರು ತಿಂಗಳ ಬಳಿಕ ಪರಿಹಾರ ಪಡೆದಿದ್ದಾರೆ.

ರಾಮನಗರ ಮತ್ತು ಮಡಿಕೇರಿ ವಿಭಾಗಗಳಲ್ಲಿಯೂ ವಿಳಂಬ ಪಾವತಿಯ ಅತೀ ಹೆಚ್ಚು ಪ್ರಕರಣಗಳಿವೆ. ಈ ವಿಭಾಗಗಳಲ್ಲಿ ವಿಳಂಬಕ್ಕೆ ಮತ್ತೊಂದು ಕಾರಣ ಎಂದರೆ ಆನೆ ದಾಳಿಗೆ ತುತ್ತಾದ ಪ್ರಕರಣಗಳು ಜಾಸ್ತಿ ಇದೆ ಎನ್ನುವುದು ಮತ್ತು ಪಾವತಿಸಬೇಕಾದ ಪರಿಹಾರ ಮೊತ್ತವೂ ಜಾಸ್ತಿ ಇರುವುದಾಗಿದೆ. ವಿಳಂಬಕ್ಕೆ ಸರಕಾರದಿಂದ ಅನುದಾನ ಬಿಡುಗಡೆಯಾಗದೇ ಇರುವುದು ಅಥವಾ ಸಂಬಂಧಿಸಿದ ಜಿಲ್ಲಾ ಅಥವಾ ವಿಭಾಗಕ್ಕೆ ಸಕಾಲದಲ್ಲಿ ಅನುದಾನ ಹಂಚಿಕೆಯಾಗದೇ ಇರುವುದು ಕಾರಣವಾಗಿರಬಹುದು ಎಂದು ಅಧ್ಯಯನ ತಂಡವು ವರದಿಯಲ್ಲಿ ಅಭಿಪ್ರಾಯಿಸಿದೆ.

ರಾಮನಗರ ಮತ್ತು ಚಾಮರಾಜನಗರದ ಕೆಲವು ಭಾಗ, ಮಂಡ್ಯ ಮತ್ತು ಹುಣಸೂರಿನ ಹೆಚ್ಚಿನ ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ರೈತರ ಪರಿಹಾರ ಅಸಮರ್ಪಕವಾಗಿದೆ.  ಮೈಸೂರು, ಮಡಿಕೇರಿ, ಬಂಡೀಪುರ ಮತ್ತು ನಾಗರಹೊಳೆ ಸುತ್ತಮುತ್ತಲಿನ ಸಂತ್ರಸ್ತ ರೈತರು ತಾವು ಅನುಭವಿಸಿದ ನಷ್ಟಕ್ಕೆ ನೀಡಿದ ಎಕ್ಸ್‌ಗ್ರೇಷಿಯಾ ಅಸರ್ಮಪಕವಾಗಿದೆ. ಬೆಳೆ ಪರಿಹಾರದ ಮೊತ್ತವನ್ನು ಪರಿಷ್ಕರಿಸಿದ್ದರೂ ಮೌಲ್ಯಮಾಪನವು ವಾಸ್ತವಿಕತೆಗೆ ಹತ್ತಿರವಾಗಿರದ ಕಾರಣ ಅದು ಅವಕಾಶದ ವೆಚ್ಚವನ್ನು ಒಳಗೊಂಡಿಲ್ಲ. ಬಹುತೇಕ ರೈತರು ಬೆಳೆದು ನಿಂತ ತೆಂಗು, ಮಾವು ಮತ್ತು ಇತರ ಮರಗಳಿಗೆ ಹಾನಿಯಾದಾಗ ನಷ್ಟ ಮೌಲ್ಯಮಾಪನ ಮಾಡುವಾಗ ಮರವನ್ನು ಬೆಳೆಸಲು ಆದ ವೆಚ್ಚವನ್ನು ಪರಿಗಣಿಸುವುದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಬೆಳೆಯುವ ಹಂತದಲ್ಲಿರುವ ತೆಂಗಿಗೆ 2,000 ರೂ. ಪರಿಹಾರ ನೀಡಲಾಗಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆದ್ದರಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಜತೆ ಚರ್ಚಿಸಿ ಪರಿಹಾರದ ಮೊತ್ತವನ್ನು ಪರಿಷ್ಕರಿಸುವುದು ಅಗತ್ಯವಾಗಿದೆ. ಎಲ್ಲಾ ನಷ್ಟಕ್ಕೂ ಪರಿಹಾರ ನೀಡುವುದು ಕಷ್ಟವಾದರೂ ಪರಿಹಾರ ಮೊತ್ತ ಸ್ವಲ್ಪವಾದರೂ ಸಮಂಜಸವಾಗಿರಬೇಕು ಎಂದು ಅಧ್ಯಯನ ತಂಡವು ಸಲಹೆ ನೀಡಿದೆ.

Similar News