ತಮಿಳುನಾಡಿನಲ್ಲಿ ಅಮುಲ್ ಹಾಲು ಸಂಗ್ರಹಣೆ ಮಾಡದಂತೆ ನಿರ್ದೇಶನ ನೀಡಬೇಕು: ಅಮಿತ್ ಶಾಗೆ ಸ್ಟಾಲಿನ್ ಒತ್ತಾಯ

Update: 2023-05-25 10:17 GMT

ಚೆನ್ನೈ: ಗುಜರಾತ್ ಮೂಲದ ಡೈರಿ ಅಮುಲ್‌ಗೆ ದಕ್ಷಿಣ ರಾಜ್ಯದಲ್ಲಿ ಹಾಲು ಸಂಗ್ರಹಣೆ ಮಾಡದಂತೆ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ದೇಶನ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರುವಾರ ಒತ್ತಾಯಿಸಿದ್ದಾರೆ.

ಶಾ  ಅವರಿಗೆ ಪತ್ರ ಬರೆದಿರುವ ಸ್ಟಾಲಿನ್, ತಮಿಳುನಾಡು ಹಾಲಿನ ಶೆಡ್ ಪ್ರದೇಶದಲ್ಲಿ ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಅಮುಲ್) ಹಾಲು ಸಂಗ್ರಹಣೆಯಿಂದ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನ ಸೆಳೆದರು.

ಇತ್ತೀಚಿಗೆ ಅಮುಲ್ ತನ್ನ ಬಹು-ರಾಜ್ಯ ಸಹಕಾರಿ ಪರವಾನಗಿಯನ್ನು ಕೃಷ್ಣಗಿರಿ ಜಿಲ್ಲೆಯಲ್ಲಿ ಶೀತಲೀಕರಣ ಕೇಂದ್ರಗಳು ಹಾಗೂ  ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಬಳಸಿಕೊಂಡಿರುವುದು ರಾಜ್ಯ ಸರಕಾರದ ಗಮನಕ್ಕೆ ಬಂದಿದೆ ಎಂದು  ಸ್ಟಾಲಿನ್ ಹೇಳಿದರು.

ಅಲ್ಲದೆ, ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ, ವೆಲ್ಲೂರು, ರಾಣಿಪೇಟ್, ತಿರುಪತ್ತೂರ್, ಕಾಂಚೀಪುರಂ ಹಾಗೂ  ತಿರುವಳ್ಳೂರು ಜಿಲ್ಲೆಗಳಲ್ಲಿ ಎಫ್‌ಪಿಒಗಳು ಹಾಗೂ  ಸ್ವಸಹಾಯ ಸಂಘಗಳ ಮೂಲಕ ಹಾಲನ್ನು ಸಂಗ್ರಹಿಸಲು ಅಮುಲ್ ಯೋಜಿಸಿದೆ.

"ಭಾರತದಲ್ಲಿ ಸಹಕಾರಿ ಸಂಸ್ಥೆಗಳು ಪರಸ್ಪರರ ಹಾಲಿನ ಶೆಡ್ ಪ್ರದೇಶವನ್ನು ಉಲ್ಲಂಘಿಸದೆ ಅಭಿವೃದ್ಧಿ ಹೊಂದಲು ಅವಕಾಶ ನೀಡುವುದು ರೂಢಿಯಾಗಿದೆ. ಈ ರೀತಿ ಹಾಲು ಸಂಗ್ರಹಣೆಯು 'ಆಪರೇಷನ್ ವೈಟ್ ಫ್ಲಡ್'ನ ಮನೋಭಾವಕ್ಕೆ ವಿರುದ್ಧವಾಗಿದೆ ಹಾಗೂ  ಚಾಲ್ತಿಯಲ್ಲಿರುವ ಹಾಲಿನ ಕೊರತೆಯ ಸನ್ನಿವೇಶದಲ್ಲಿ ಗ್ರಾಹಕರಿಗೆ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಅಮುಲ್‌ನ ಈ ಕಾರ್ಯವು ಆವಿನ್‌ನ (ಟಿಎನ್ ಕೋ-ಆಪರೇಟಿವ್ ಹಾಲು ಉತ್ಪಾದಕರ ಫೆಡರೇಶನ್) ಹಾಲಿನ ಶೆಡ್ ಪ್ರದೇಶವನ್ನು ಉಲ್ಲಂಘಿಸುತ್ತದೆ.  ಇದು ದಶಕಗಳಿಂದ ನಿಜವಾದ ಸಹಕಾರ ಮನೋಭಾವದಿಂದ ಪೋಷಿಸಲ್ಪಟ್ಟಿದೆ. ಅಮುಲ್‌ನ ಈ ಕ್ರಮವು ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಗ್ರಹಣೆ ಮತ್ತು ಮಾರಾಟದಲ್ಲಿ ತೊಡಗಿರುವ ಸಹಕಾರಿಗಳ ನಡುವೆ ಅನಾರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸುತ್ತದೆ’’ ಎಂದು ಸ್ಟಾಲಿನ್ ಪತ್ರದಲ್ಲಿ ಬರೆದಿದ್ದಾರೆ.

Similar News