ದಿಲ್ಲಿ ವಿವಿ ಪಠ್ಯದಿಂದ 'ಸಾರೇ ಜಹಾನ್ ಸೆ ಅಚ್ಛಾ' ಹಾಡು ರಚಿಸಿದ ಕವಿ ಇಕ್ಬಾಲ್ ಅವರ ವಿಚಾರ ಕೈಬಿಡಲು ನಿರ್ಧಾರ
ಹೊಸದಿಲ್ಲಿ: “ಸಾರೇ ಜಹಾನ್ ಸೆ ಅಚ್ಛಾ” ಎಂಬ ಖ್ಯಾತ ಹಾಡನ್ನು ರಚಿಸಿದ ಕವಿ, ಪಾಕಿಸ್ತಾನದ ರಾಷ್ಟ್ರೀಯ ಕವಿ ಮುಹಮ್ಮದ್ ಇಕ್ಬಾಲ್ ಅವರ ಕುರಿತ ಪಠ್ಯವನ್ನು ತನ್ನ ರಾಜ್ಯಶಾಸ್ತ್ರ ಪಠ್ಯಕ್ರಮದಿಂದ ಕೈಬಿಡುವ ಕುರಿತಂತೆ ದಿಲ್ಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಶುಕ್ರವಾರ ನಿರ್ಣಯ ಅಂಗೀಕರಿಸಿದೆ ಎಂದು ತಿಳಿದು ಬಂದಿದೆ.
ಅಲ್ಲಮ ಇಕ್ಬಾಲ್ ಎಂದೂ ಕರೆಯಲ್ಪಡುವ ಮುಹಮ್ಮದ್ ಇಕ್ಬಾಲ್ ಅವರು ಅವಿಭಜಿತ ಭಾರತದ ಸಿಯಾಲ್ಕೋಟ್ನಲ್ಲಿ 1877 ರಲ್ಲಿ ಜನಿಸಿದ್ದರು.
ದಿಲ್ಲಿ ವಿಶ್ವವಿದ್ಯಾಲಯದ ಬಿಎ ಆರನೇ ಸೆಮಿಸ್ಟರ್ನ “ಮಾಡರ್ನ್ ಇಂಡಿಯನ್ ಪೊಲಿಟಿಕಲ್ ಥಾಟ್” ಅಧ್ಯಾಯದಲ್ಲಿರುವ ಮೊಹಮ್ಮದ್ ಇಕ್ಬಾಲ್ ಅವರ ಉಲ್ಲೇಖದ ಭಾಗವನ್ನು ತೆಗೆದುಹಾಕುವ ನಿರ್ಣಯದ ಅಂತಿಮ ನಿರ್ಧಾರವನ್ನು ವಿವಿಯ ಕಾರ್ಯಕಾರಿ ಮಂಡಳಿ ತೆಗೆದುಕೊಳ್ಳಲಿದೆ.
ಪಠ್ಯಕ್ರಮದಲ್ಲಿ “ಇಕ್ಬಾಲ್: ಕಮ್ಯುನಿಟಿ” ಎಂಬ ಭಾಗವಿದೆ.
ಈ ಬೆಳವಣಿಗೆಯನ್ನು ABVP ಸ್ವಾಗತಿಸಿದೆ ಹಾಗೂ “ಧರ್ಮಾಂಧ ವಿದ್ವಾಂಸ ಇಕ್ಬಾಲ್ ದೇಶ ವಿಭಜನೆಗೆ ಕಾರಣ” ಎಂದು ಹೇಳಿಕೊಂಡಿದೆ.