ಉತ್ತರ ಪ್ರದೇಶ: ಮಲದ ಗುಂಡಿಗೆ ಬಿದ್ದು ನಾಲ್ವರು ಮೃತ್ಯು

Update: 2023-05-29 13:40 GMT

ಖುಷಿನಗರ: ರವಿವಾರ ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯಲ್ಲಿ ಮಲದ ಗುಂಡಿಗೆ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈಟಿವಿ ಭಾರತ್ ಸುದ್ದಿ ಸಂಸ್ಥೆಯ ಪ್ರಕಾರ, ರಾಮನಗರ ಗ್ರಾಮದ 45 ವರ್ಷ ವಯಸ್ಸಿನ ನಂದಕುಮಾರ್ ಎಂಬ ವ್ಯಕ್ತಿಯು ಮಲದ ಗುಂಡಿಯನ್ನು ಸ್ವಚ್ಛಗೊಳಿಸಲು ನೇಮಕಗೊಂಡಿದ್ದ. ಮಲದ ಗುಂಡಿಯನ್ನು ಸ್ವಚ್ಛಗೊಳಿಸುವಾಗ ನಂದಕುಮಾರ್ ಕೆಳಗೆ ಬಿದ್ದು, ಅದರಲ್ಲಿ ಸಿಕ್ಕಿ ಹಾಕಿಕೊಂಡ. ಇದನ್ನು ಕಂಡು ಮಲದ ಗುಂಡಿಯತ್ತ ಧಾವಿಸಿದ ಆತನ 25 ವರ್ಷದ ಪುತ್ರ ನಿತೇಶ್ ಕೂಡಾ ಮಲದ ಗುಂಡಿಯಲ್ಲಿ ಸಿಲುಕಿಕೊಂಡ ಎನ್ನಲಾಗಿದೆ.

ಇದನ್ನು ಕಂಡು ಅವರ ಕುಟುಂಬದ ಸದಸ್ಯರು ಸಹಾಯಕ್ಕಾಗಿ ಇತರರಿಗೆ ಕರೆ ಮಾಡಿದ್ದು, ಮತ್ತೆ ಮೂವರು ಅವರನ್ನು ಹೊರಗೆಳೆಯಲು ಸ್ಥಳಕ್ಕೆ ಬಂದಿದ್ದಾರೆ. ನಂತರ ಅವರೂ ಕೂಡಾ ಮಲದ ಗುಂಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸುವ ಮುನ್ನ ಐವರನ್ನೂ ಮಲದ ಗುಂಡಿಯಿಂದ ಹೊರಗೆಳೆಯಲಾಗಿತ್ತು ಎಂದು ವರದಿಯಾಗಿದೆ.

ಈ ಪೈಕಿ ನಂದಕುಮಾರ್, ನಿತೇಶ್, ದಿನೇಶ್ (40) ಹಾಗೂ ಆನಂದ್ (22) ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಈಟಿವಿ ಭಾರತ್ ವರದಿ ಮಾಡಿದೆ.

ಮನುಷ್ಯರನ್ನು ಮಲ ಸ್ವಚ್ಛಗೊಳಿಸಲು ನಿಯೋಜಿಸಿಕೊಳ್ಳುವ ಹಾಗೂ ಅವರ ಪುನರ್ವಸತಿ ಕಾಯ್ದೆ, 2013ರ ಪ್ರಕಾರ, ಯಾವುದೇ ವ್ಯಕ್ತಿಯನ್ನು ಮಲಗುಂಡಿ ಸ್ವಚ್ಛಗೊಳಿಸಲು ವೈಯಕ್ತಿಕವಾಗಿ ನಿಯೋಜಿಸಿಕೊಳ್ಳುವಂತಿಲ್ಲ ಹಾಗೂ ಮಲದ ಗುಂಡಿಯನ್ನು ಸ್ವಚ್ಛಗೊಳಿಸುವಾಗ ಕೆಲವು ನಿರ್ದಿಷ್ಟ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾದುದು ಕಡ್ಡಾಯ. ಆದರೆ, ಈ ಕಾಯ್ದೆ ಜಾರಿಗೆ ಬಂದು ಹತ್ತು ವರ್ಷವೇ ಕಳೆದು ಹೋಗಿದ್ದರೂ, ಮಲದ ಗುಂಡಿ ಸ್ವಚ್ಛಗೊಳಿಸುವಾಗ ಮಾನವ ಸಾವುಗಳು ಭಾರತದಲ್ಲಿ ಸಾಮಾನ್ಯ ಸಂಗತಿಯಾಗಿ ಪರಿಣಮಿಸಿದೆ.

ಮಲದ ಗುಂಡಿ ಸ್ವಚ್ಛಗೊಳಿಸುವ ಗುತ್ತಿಗೆಗಾರರು ಅಥವಾ ಮಾಲೀಕರು ಇಂಥ ಸಾವುಗಳಿಗೆ ಹೊಣೆ ಹೊರಬೇಕಾಗಿದೆ. ಆದರೆ, ಮಲದ ಗುಂಡಿ ಸ್ವಚ್ಛಗೊಳಿಸುವವರು ತಳ ಸಮುದಾಯಕ್ಕೆ ಸೇರಿರುವುದರಿಂದ ಇಂತಹ ಸಾವುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಹಾಗೂ ಕಾಯ್ದೆಯನ್ನು ಕಠಿಣವಾಗಿ ಜಾರಿಗೊಳಿಸುತ್ತಿಲ್ಲ ಎಂದು ದಿ ಸಫಲ್ ಕರ್ಮಚಾರಿ ಆಂದೋಲನ್ ಆರೋಪಿಸಿದೆ.

Similar News