ರೈಲು ದುರಂತದಲ್ಲಿ ಗಾಯಗೊಂಡವರಿಗೆ ರಕ್ತದಾನ ಮಾಡಲು ಆಸ್ಪತ್ರೆ ಮುಂದೆ ಸರದಿಸಾಲಲ್ಲಿ ನಿಂತ ಜನರು

Update: 2023-06-03 08:45 GMT

ಬಾಲಾಸೋರ್: ಒಡಿಶಾದ ಬಾಲಾಸೋರ್‌ನಲ್ಲಿ ಶುಕ್ರವಾರ ಸಂಜೆ ನಡೆದ ಭೀಕರ ರೈಲು ದುರಂತದಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟು 900ಕ್ಕೂ ಹೆಚ್ಚು ಮಂದಿ ಗಾಯಗೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಮಂದಿ ಬಾಲಾಸೋರ್‌ ಮತ್ತು ಬದ್ರಕ್‌ನಲ್ಲಿರುವ ಆಸ್ಪತ್ರೆಗಳಿಗೆ ಧಾವಿಸಿ ರಕ್ತದಾನ ಮಾಡಲು ಮುಂದಾಗಿದ್ದಾರೆ.

“ನಮ್ಮ ರಕ್ತ ಇನ್ನೊಬ್ಬರ ಜೀವವುಳಿಸಲು ಸಹಕಾರಿಯಾಗುವುದಾದರೆ ಅದಕ್ಕಿಂತ ಸಮಾಧಾನದ ಸಂಗತಿ ಬೇರೊಂದಿಲ್ಲ,” ಎಂದು ರಕ್ತದಾನ ಮಾಡಲು ಸರತಿ ನಿಂತಿದ್ದ ಯುವಕರ ತಂಡವೊಂದು ಹೇಳಿದೆ.

ಬಾಲಾಸೋರ್‌ನಲ್ಲಿ ಶುಕ್ರವಾರ ರಾತ್ರಿ 500 ಯುನಿಟ್‌ ರಕ್ತ ಸಂಗ್ರಹಿಸಲಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ 900 ಯುನಿಟ್‌ ರಕ್ತ ಇದೆ. ರೈಲು ದುರಂತದ ಗಾಯಾಳುಗಳ ಚಿಕಿತ್ಸೆಗೆ ಇದು ಸಹಕಾರಿಯಾಗಲಿದೆ. ಈ ಕಷ್ಟಕರ ಸಂದರ್ಭದಲ್ಲಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಲು ಆಗಮಿಸಿದ ಎಲ್ಲಾ ಯುವಜನತೆಗೆ ನಾವು ಆಭಾರಿ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಜೇನಾ ಹೇಳಿದ್ದಾರೆ.

Similar News