ಸರಕಾರಿ ಕಚೇರಿಗಳಿಗೆ ಬಾಡಿಗೆ ನೀಡುವುದನ್ನು ನಿಯಂತ್ರಿಸಿ

Update: 2023-06-08 18:34 GMT

ಮಾನ್ಯರೇ,

ರಾಜ್ಯದ ಹಲವು ಇಲಾಖೆಗಳಲ್ಲಿನ ಅನೇಕ ಕಚೇರಿಗಳು ಬಾಡಿಗೆಗೆ ಕಟ್ಟಡಗಳಲ್ಲಿ ಕಚೇರಿಯನ್ನು ನಡೆಸುತ್ತಿವೆೆ. ಕಂದಾಯ ಇಲಾಖೆ ಒಂದರಲ್ಲಿಯೇ ಹಲವಾರು ಕೋಟಿ ರೂ.ಗಳ ಬಾಡಿಗೆಯನ್ನು ಪ್ರತೀವರ್ಷ ಪಾವತಿಸಲಾಗುತ್ತಿದೆ. ಇದೇ ರೀತಿಯಲ್ಲಿ ಹಿಂದುಳಿದ ವರ್ಗದ ಮತ್ತು ದಲಿತರ ಮಕ್ಕಳಿಗೆ ಮೀಸಲಿರುವ ವಸತಿ ನಿಲಯಗಳನ್ನು ಸಹ ಬಾಡಿಗೆಗೆ ಪಡೆದು ಅಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ ಇತರ ಅನೇಕ ಇಲಾಖೆಗಳಲ್ಲಿ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಚೇರಿ ಕೆಲಸ ನಿಭಾಯಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಕಟ್ಟಡಗಳ ಬಾಡಿಗೆಗೆ 500ರಿಂದ 600 ಕೋಟಿ ರೂ.ಗಳ ತನಕ ವ್ಯಯ ಮಾಡಲಾಗುತ್ತಿದೆ.
ಈಗ ರಾಜ್ಯದಲ್ಲಿ ಆಡಳಿತ ನಡೆಸುವ ಹೊಸ ಸರಕಾರ ಕೂಡಲೇ ಬಾಡಿಗೆ ಕೊಟ್ಟು ಕಚೇರಿಗಳನ್ನು ನಿರ್ವಹಿಸುತ್ತಿರುವ ಕಟ್ಟಡಗಳ ಮಾಹಿತಿ ಮತ್ತು ಬಾಡಿಗೆ ಮೊತ್ತದ ವಿವರವನ್ನು ಪಡೆದುಕೊಳ್ಳಬೇಕು. ಸರಕಾರದ ಅಧೀನದಲ್ಲಿ ಸಾವಿರಾರು ಎಕರೆ ಜಮೀನು, ಸಾವಿರಾರು ಸ್ಥಿರಾಸ್ತಿಗಳು ತಾಲೂಕು, ಜಿಲ್ಲೆ ಮತ್ತು ನಗರ ಮಟ್ಟದಲ್ಲಿ ಇರುತ್ತದೆ. ಇಂತಹ ಸ್ಥಳಗಳಲ್ಲಿ ಸರಕಾರ ಸ್ವಂತ ಕಟ್ಟಡವನ್ನು ಮಾಡಿಕೊಂಡು ಬಾಡಿಗೆ ನೀಡುವುದನ್ನು ತಪ್ಪಿಸಬೇಕು.
ಕೆಎಸ್‌ಆರ್‌ಟಿಸಿ ಮತ್ತು ಬಿಟಿಎಸ್ ನಿಗಮಗಳಲ್ಲಿ ಬೆಂಗಳೂರು ನಗರವೂ ಸೇರಿದಂತೆ ಅನೇಕ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇವುಗಳಿಗಾಗಿ ನೂರಾರು ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ. ಹಲವಾರು ವರ್ಷಗಳಾದರೂ ಅನೇಕ ಕಟ್ಟಡಗಳು ಬಾಡಿಗೆಗೆ ಉಪಯೋಗವಾಗದೆ ಧೂಳು ಮುಚ್ಚಿಕೊಂಡಿವೆ. ಇವುಗಳ ನಿರ್ವಹಣೆಗೂ ಸಂಸ್ಥೆಯಿಂದಲೇ ಹಣವನ್ನು ಪಾವತಿಸಬೇಕಾಗಿದೆ. ಹಲವಾರು ಬಾರಿ ವಾಣಿಜ್ಯ ಕಟ್ಟಡಗಳಲ್ಲಿರುವ ಅಂಗಡಿಗಳಿಗೆ ಟೆಂಡರ್ ಕರೆದರೂ ನಿಗಮದ ದರವನ್ನು ಒಪ್ಪದ ಗ್ರಾಹಕರು ಯಾರೂ ಬಾಡಿಗೆಗೆ ಸ್ಥಳವನ್ನು ಪಡೆಯಲು ಬಂದಿಲ್ಲ. ಮಾನ್ಯ ಸಾರಿಗೆ ಸಚಿವರು ಈ ನಿಟ್ಟಿನಲ್ಲಿ ವಿಶೇಷ ಗಮನವನ್ನು ಹರಿಸಿ ಖಾಲಿ ಇರುವ ಕೆಎಸ್‌ಆರ್‌ಟಿಸಿ ಮತ್ತು ಇದರ ಸಮೂಹ ಸಂಸ್ಥೆಗಳ ವಾಣಿಜ್ಯ ಕಟ್ಟಡಗಳನ್ನು ಗ್ರಾಹಕರಿಗೆ ಹೊರೆಯಾಗದ, ಸಂಸ್ಥೆಗೂ ನಷ್ಟವಾಗದ ರೀತಿಯಲ್ಲಿ ಎಚ್ಚರಿಕೆ ವಹಿಸಿ ಬಾಡಿಗೆಗೆ ನೀಡಿದರೆ ಇದರಿಂದ ಸಾಕಷ್ಟು ಆದಾಯ ಸಂಸ್ಥೆಗೆ ಬರುತ್ತದೆ. ರಾಜ್ಯ ಸರಕಾರದ ಉಚಿತ ಯೋಜನೆಗಳಿಗೆ ಈ ಮೊತ್ತವನ್ನೂ ಬಳಸಿ ಒಂದಷ್ಟು ಹೊರೆಯನ್ನು ತಗ್ಗಿಸಬಹುದು.
ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಕಾರು ಮತ್ತು ಇತರ ವಾಹನಗಳನ್ನು ಸಹ ಬಾಡಿಗೆಗೆ ಪಡೆದು ಅಧಿಕಾರಿಗಳ ಉಪಯೋಗಕ್ಕೆ ನೀಡುತ್ತಾರೆ. ಈ ವಾಹನಗಳಿಗೆ ಒಂದು ವರ್ಷದಲ್ಲಿ ನೀಡುವ ಬಾಡಿಗೆಯನ್ನು ಒಟ್ಟುಗೂಡಿಸಿದರೆ ಸರಕಾರವೇ ಸ್ವಂತ ವಾಹನವನ್ನು ಖರೀದಿಸಬಹುದು. ಈ ನಿಟ್ಟಿನಲ್ಲಿಯೂ ಸರಕಾರ ಗಂಭೀರವಾಗಿ ಚಿಂತಿಸಲಿ. ಮುಂದಿನ ಐದು ವರ್ಷದ ಅವಧಿಯಲ್ಲಿ ರಾಜ್ಯ ಸರಕಾರ ಕನಿಷ್ಠ ಪಕ್ಷ ಕಂದಾಯ ಇಲಾಖೆ ಮತ್ತು ಸಮಾಜ ಇಲಾಖೆಯ ವಸತಿ ನಿಲಯಗಳನ್ನು ಬಾಡಿಗೆ ರಹಿತವಾದ ಸರಕಾರಿ ಕಟ್ಟಡಗಳಲ್ಲಿಯೇ ಕಾರ್ಯನಿರ್ವಹಿಸುವಂತಹ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಮುಂದಿನ ಸರಕಾರಗಳಿಗೆ ಮಾದರಿಯಾಗಲಿ.
 

Similar News