ಮೋದಿ ಸರ್ಕಾರ ಹೇಳುತ್ತಿರುವ ಮೂರು ಮಾನಗೇಡಿ-ದೇಶದ್ರೋಹಿ ಸುಳ್ಳುಗಳು...

Update: 2024-04-10 10:40 GMT
Editor : Riyaz | Byline : ಶಿವಸುಂದರ್,

ಸಾರ್ವಜನಿಕ ನೆನಪಿನ ಆಯಸ್ಸು ಕಡಿಮೆ... ಈ ಮರೆವನ್ನೇ ಬಳಸಿಕೊಂಡು ಮೋದಿ ಸರ್ಕಾರ ಬೇಕಾಬಿಟ್ಟಿ ಸುಳ್ಳುಗಳನ್ನು ಹೇಳುತ್ತಾ ಮತ್ತೆ ಓಟು ಕೇಳುತ್ತಿದೆ.

ಅದರಲ್ಲೂ ನಿನ್ನೆ-ಮೊನ್ನೆಯಿಂದ ಅದು ಹೇಳುತ್ತಿರುವ ಕೆಳಗಿನ ಈ ಸುಳ್ಳುಗಳು ಅದರ ಕ್ರೌರ್ಯ, ಬೇಜವಾಬ್ದಾರಿ ಮತ್ತು ಜನದ್ರೋಹಕ್ಕೆ ಸಾಕ್ಷಿಯಾಗಿವೆ.

ಸುಳ್ಳು:1

ಗೃಹಮಂತ್ರಿಯವರ ಸಕಾಲಿಕ ಮಧ್ಯ ಪ್ರವೇಶದಿಂದ ಮಣಿಪುರ ಸುಧಾರಿಸಿದೆ-ಮೋದಿ!

ವಾಸ್ತವ-

ಆದರೆ ವಾಸ್ತವ ಇದಕೆ ತದ್ವಿರುದ್ಧವಾಗಿದೆ. 2023ರ ಮೇ 3 ರಿಂದಲೇ ಮಣಿಪುರ ಹತ್ತಿ ಉರಿಯುತ್ತಿದ್ದರೂ ಕರ್ನಾಟಕದ ಚುನಾವಣಾ ಪ್ರಚಾರಕ್ಕಾಗಿ ಮೋದಿ ಮತ್ತು ಷಾ ಬೆಂಗಳೂರಿನಲ್ಲಿ ಮೊಕ್ಕಾಮ್ ಹೂಡಿದ್ದರು. ಮೇ ಕೊನೆಗೆ ಗೃಹಮಂತ್ರಿ ಷಾ ಮಣಿಪುರಕ್ಕೆ ಮೂರು ದಿನಗಳ ಭೇಟಿ ಕೊಟ್ಟು ಪರೋಕ್ಷವಾಗಿ ಅಲ್ಲಿನ ಬಿಜೆಪಿ ಸರ್ಕಾರದ ಮೈತಿ ಪರ - ಕುಕಿ ವಿರೋಧಿ ನೀತಿಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ನಂತರ ನಂತರ ಮೈತಿ ಉಗ್ರಗಾಮಿಗಳು ಕುಕಿಗಳ ಮೇಲೆ ನಡೆಸುತ್ತಿರುವ ಅತ್ಯಾಚಾರ ಇನ್ನೂ ಹೆಚ್ಚಾಯಿತು.

ಇದರಿಂದಾಗಿ ಅಲ್ಲಿ ಈವರೆಗೆ 200ಕ್ಕೂ ಹೆಚ್ಚು ಹೆಣಗಳು ಉರುಳಿವೆ. ಈ ಬಗ್ಗೆ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ತರುವರೆಗೆ ಪ್ರಧಾನಿ ಮೋದಿ ಮಣಿಪುರದ ಬಗ್ಗೆ ಬಾಯಿ ಬಿಚ್ಚಿರಲಿಲ್ಲ.

ಬಂಗಾಳದಲ್ಲಿ ಸಂದೇಶ್ ಖಾಲಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದ ದೂರು ಇರುವುದನ್ನೇ ಬಳಸಿಕೊಂಡು ಸರ್ಕಾರದ ವಜಾ ಆಗಬೇಕೆಂದು ಆಗ್ರಹಿಸುವ ಈ ಬಿಜೆಪಿ ಪ್ರಧಾನಿ, ಮಣಿಪುರದ ಬಿಕ್ಕಟ್ಟಿಗೆ ನೇರ ಕಾರಣವಾಗಿರುವ ಬಿಜೆಪಿ ಮುಖ್ಯಮಂತ್ರಿ ಬಿರೇನ್ ಸಿಂಗರನ್ನು ರಕ್ಷಿಸಿಕೊಂಡೆ ಬಂದಿದೆ. ಅವರು ಮೈತಿ ಉಗ್ರಗಾಮಿಗಳನ್ನು ಪೋಷಿಸುತ್ತಿದ್ದಾರೆ.

ಈ ಕುಮ್ಮಕ್ಕಿನಿಂದ ಮೈತಿ ಉಗ್ರರು ಈಗ ಮಣಿಪುರದ ಶಾಸಕರಿಗೆ ಪ್ರತ್ಯೇಕ ಪ್ರಮಾಣ ವಚನ ಬೋಧಿಸುತ್ತಿದ್ದಾರೆ. ಸಂವಿಧಾನಕ್ಕಿಂತ ಮೈತಿ ಸಂಘಟನೆಯ ಧ್ಯೇಯಕ್ಕೆ ತಾವು ಬದ್ಧರಾಗಿರುತ್ತೇವೆಂದು ಅಲ್ಲಿನ ಬಿಜೆಪಿ ಶಾಸಕರು ಒಪ್ಪಿಕೊಂಡಿದ್ದಾರೆ. ಈಗ ಮೈತಿ ಉಗ್ರರು ಸೇನಾಧಿಕಾರಿಗಳನ್ನು, ಪೊಲೀಸ್ ಅಧಿಕಾರಿಗಳನ್ನು ಅಪಹರಿಸಿ ಆದೇಶ ಕೊಡುತ್ತಿದ್ದಾರೆ.

ಅಮಿತ್ ಷಾ ಭೇಟಿಯಾದ ಮೇಲೆ ಮಣಿಪುರ ಕಳೆದ ಎಂಟು ತಿಂಗಳಲ್ಲಿ ಇನ್ನಷ್ಟು ಅರಾಜಕಗೊಂಡಿದೆ. ನಿರಾಶ್ರಿತ ಶಿಬಿರಗಳಲ್ಲಿ ಕುಕಿ ಮತ್ತು ಮೈತಿ ನಿರಾಶ್ರಿತರು ಅನಾಥ ಸಂಕಟಗಳನ್ನು ಅನುಭವಿಸುತ್ತಿದ್ದಾರೆ. ಇವೆಲ್ಲಕ್ಕೂ ಮೋದಿ ಸರ್ಕಾರದ ನೇರ ಬೆಂಬಲವಿದೆ.

ಆದರೂ ಪ್ರಧಾನಿ ಮೋದಿಯವರು ಕಿಂಚಿತ್ತೂ ಲಜ್ಜೆಯಿಲ್ಲದೆ ಮಣಿಪುರದ ಪರಿಸ್ಥಿತಿ ಸುಧಾರಿಸಿದೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ.

ಇದು ಕನಿಷ್ಠ ಮನುಷ್ಯತ್ವ, ಕನಿಷ್ಠ ಜವಾಬ್ದಾರಿ ಇರುವ ಪಕ್ಷ ಮತ್ತು ನಾಯಕ ಕೊಡಬಹುದಾದ ಹೇಳಿಕೆಯೇ?

ಸುಳ್ಳು-2

ಮೋದಿಯವರು ಒಂದು ಚದುರ ಅಡಿ ಜಮೀನನ್ನು ಚೀನಾಗೆ ಬಿಟ್ಟುಕೊಟ್ಟಿಲ್ಲ - ಅಮಿತ್ ಶಾ

ವಾಸ್ತವ-

ನಿಜ,  ಭಾರತ ಚೀನಾಗೆ ಮೋದಿ ಅವಧಿಯಲ್ಲಿ ಬಿಟ್ಟುಕೊಟ್ಟಿರುವುದು ಒಂದು ಚದುರಡಿಯಷ್ಟು ಭೂ ಭಾಗವಲ್ಲ. ಬದಲಿಗೆ ಮೋದಿ ಸರ್ಕಾರ ಚೀನಾಗೆ ಬಿಟ್ಟುಕೊಟ್ಟಿರುವುದು 4000 ಚದುರ ಕಿಲೋ ಮೀಟರುಗಳಷ್ಟು ಭಾರತೀಯ ಭೂ ಪ್ರದೇಶವನ್ನು!

2020 ರ ಜೂನ್ ನಲ್ಲಿ ಲಡಾಕ್ ನ ಗಾಲ್ವಾನ್ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವೆ ಘರ್ಷಣೆಯಾಗಿ ಭಾರತದ 20 ಸೈನಿಕರು ಹತರಾದದ್ದು ನೆನಪಿರಬೇಕಿಲ್ಲವೇ?

ಆ ಘರ್ಷಣೆಯ ನಂತರ ಚೀನಾ ಭಾರತದ ಭೂಭಾಗವಾಗಿದ್ದ ಪ್ರದೇಶದಲ್ಲಿ ಬಂದು ಕೂತಿ ಭಾರತ ಇನ್ನಷ್ಟು ಒಳ ಸರಿದಿದೆ. ಇದರಿಂದ ಈಗ ಭಾರತದ 4000 ಚ. ಕಿಮೀ ಪ್ರದೇಶವನ್ನು ಆಕ್ರಮಿಸಿದಂತಾಗಿದೆ. ಈ ಬಗ್ಗೆ 2020 ರ ಸೆಪ್ಟೆಂಬರ್ ನಿಂದ ಈವರೆಗೆ 21 ಬಾರಿ ಸೇನಾಧಿಕಾರಿ ಮಟ್ಟದ ಮಾತುಕತೆಯಾಗಿದ್ದರೂ, ಮೋದಿ ಸರ್ಕಾರ ಭಾರತ ಆಕ್ರಮಿತ ಭೂ ಭಾಗವನ್ನು ವಾಪಸ್ ಕೇಳುವ ಬೇಡಿಕೆಯನ್ನೇ ಕೈಬಿಟ್ಟಿದೆ.

2018 ರಲ್ಲಿ ಭೂತಾನ್ ಗಡಿಯ ಡೋಕ್ಲಾಮ್ ಸಂಘರ್ಷದ ನಂತರ ಚೀನಾ ಆ ಸರಹದ್ದಿನಲ್ಲಿ ಎಲ್ಲಾ ಔಪಚಾರಿಕ ಸಂಪ್ರದಾಯಗಳನ್ನು ಉಲ್ಲಂಘಿಸಿ ಶಾಶ್ವತ ಮತ್ತು ಸುಸಜ್ಜಿತ ಸೇನಾಗ್ರಾಮಗಳನ್ನು ನಿರ್ಮಿಸಿಕೊಂಡಿದೆ.

ಮೋದಿ ನೇತೃತ್ವದಲ್ಲಿ ಭಾರತ ಅಮೇರಿಕಾದ ಚೀನಾ ವಿರೋಧಿ ವ್ಯೂಹಾತಂತ್ರಗಳಿಗೆ ಸಾತ್ ಕೊಡುತ್ತಿದ್ದಂತೆ ಚಿನಾ ಭಾರತದ ಗಡಿಗಳಲ್ಲಿ ತನ್ನ ವಿಸ್ತರಣೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಮೊನ್ನೆ ಅರುಣಾಚಲ ಪ್ರದೇಶದ 50 ಪ್ರದೇಶಗಳಿಗೆ ಚೀನೀ ಹೆಸರನ್ನು ಇಟ್ಟಿದೆ.

ಗಾಲ್ವಾನ್ ಸಂಘರ್ಷವಾದ ಮೇಲೆ ಚೀನಾದ ಜೊತೆ ವಹಿವಾಟು ನಿಲಿಸುತ್ತೇವೆ ಎಂದೆಲ್ಲಾ ಮೋದಿ ಸರ್ಕಾರ ವೀರಾವೇಶದ ಘೋಷಣೆ ಮಾಡಿದ್ದರೂ 2020-24 ರ ನಡುವೆ ಭಾರತವು ಚೀನಾದಿಂದ ಮಾಡಿಕೊಳ್ಳುತ್ತಿದ್ದ ಆಮದು ಮೂರುಪಟ್ಟು ಹೆಚ್ಚಾಗಿದೆ!

ಎಲ್ಲಕ್ಕಿಂತ ಹೆಚ್ಚಾಗಿ ದಿನಾ ಪಾಕಿಸ್ತಾನಾದ ಜಪ ಮಾಡುವ ಪ್ರಧಾನಿ ಮೋದಿ 2020 ರಿಂದ ಚೀನಾ ಹೆಸರನ್ನೂ ಕೂಡ ಎತ್ತುವುದನ್ನು ನಿಲ್ಲಿಸಿದ್ದಾರೆ.

ಹೀಗೆ ಮೋದಿ ಸರ್ಕಾರ ತನ್ನ ತಪ್ಪು ಆದ್ಯತೆ ಮತ್ತು ತಪ್ಪು ನೀತಿಗಳಿಂದ ಭಾರತದ ಮಾನವನ್ನು ಭೂ ಭಾಗವನ್ನೂ ಕಳೆಯುತ್ತಿದ್ದರೂ, ಅಮಿತಿ ಷಾ ಚೀನಾಗೆ ಒಂದಿಂಚು ಭೂಮಿಯನ್ನು ಕೊಟ್ಟಿಲ್ಲವೆಂದು ಹೇಳುತ್ತಿರುವುದಕ್ಕೆ ಕಾರಣ ಅವರು ಭಾರತೀಯರನ್ನು ಹೆಡ್ಡರು ಮತ್ತು ಮುಠಾಳರು ಎಂದು ಭಾವಿಸಿರುವುದು!

ಈ ಚುನಾವಣೆಯಲ್ಲಿ ಭಾರತೀಯರು ಉತ್ತರ ನೀಡಬೇಕಿದೆ.

ಸುಳ್ಳು-3

ಬಿಜೆಪಿ ಸರ್ಕಾರ ಭಾರತವನ್ನು ಕೋವಿಡ್ ಇಂದ ಬಚಾವು ಮಾಡಿತು- ಮೋದಿ

ವಾಸ್ತವ-

ಪ್ರಾಯಶಃ ಇಂಥಾ ಪಶ್ಚಾತ್ತಾಪ ರಹಿತ- ಅಮಾನವೀಯ ಹೇಳಿಕೆಯನ್ನು ಬಿಜೆಪಿಯಂಥ ಲಜ್ಜೆಗೇಡಿ ಪಕ್ಷ ಮಾತ್ರ ಕೊಡಲು ಸಾಧ್ಯ.

ಭಾರತದಲ್ಲಿ ಕೋವಿಡ್ ನ ಮೊದಲ ಮತ್ತು ಎರಡನೇ ಅಲೆಗಳಿಂದಾಗಿ ಭಾರತದಲ್ಲಿ 40 ಲಕ್ಷ ಭಾರತೀಯರು ಮೃತರಾಗಿ ದ್ದಾರೆ. ಎರಡನೇ ಸ್ಥಾನದಲ್ಲಿರುವ ಅಮೇರಿಕಾದಲ್ಲಿ ಸತ್ತದ್ದು 11 ಲಕ್ಷ. ಈ ದುರಂತಕ್ಕೆ ನೇರ ಕಾರಣ ಮೋದಿ ಸರ್ಕಾರ.

ಮೊದಲನೇ ಅಲೆಯಲ್ಲಿ ಜನರ ಆರೋಗ್ಯ ರಕ್ಷಣೆಗಿಂತ ಹೆಚ್ಚಾಗಿ ಲಾಕ್ ದೌನ್ ನಂತ ಕ್ರೌರ್ಯಗಳಿಗೆ ಮುಂದಾದ ಸರ್ಕಾರ ಕೋವಿಡ್ ಸಂದರ್ಭವನ್ನೂ ಕೊಡ ಮೌಢ್ಯ ಹಾಗೂ ಕೋಮುವಾದವನ್ನ ಹೆಚ್ಚಿಸಲು ಬಳಸಿಕೊಂಡಿತು.

ಎರಡನೇ ಅಲೆಯು ಅಪ್ಪಳಿಸುವ ಎಚ್ಚರವನ್ನು ವಿಜ್ಞಾನಿಗಳು ನಾಕಾರು ತಿಂಗಳ ಮುಂಚೆಯೇ ಕೊಟ್ಟಿದ್ದರೂ ಅದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಪ್ರಧಾನಿ ಮೋದಿ 2021ರ ಜನವರಿಯಲ್ಲಿ WEF ಸಭೆಯಲ್ಲಿ ಭಾರತ ಕೋವಿಡ್ ವಿರುದ್ಧ ಜಯ ಸಾಧಿಸಿದೆಯೆಂದು ಕೊಚ್ಚಿಕೊಂಡಿತು.

ಕೋವಿಡ್ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದರೂ ಚುನಾವಣೆಯ ದೃಷ್ಟಿಯಿಂದ ಪ್ರಚಾರ ಸಭೆಗಳಿಗೂ ಹಾಗೂ ಹರಿದ್ವಾರದಲ್ಲಿ ಲಕ್ಷಾಂತರ ಜನ ಸೇರುವ ಕುಂಭ ಮೇಳಕ್ಕೂ ಅವಕಾಶ ಮಾಡಿಕೊಟ್ಟು ಕೋವಿಡ್ ಇನ್ನಷ್ಟು ವೇಗವಾಗಿ ಹರಡಲು ಅವಕಾಶ ಮಾಡಿಕೊಟ್ಟಿತು. ಕೆಲವು ಬಿಜೆಪಿ ನಾಯಕರು ದೇವರ ಆಶೀರ್ವಾದ ಭಾರತದ ಮೇಲೆ ಇರುವುದರಿಂದ ಕೋವಿಡ್ ಹಬ್ಬುವುದಿಲ್ಲ ಎಂಬ ಮೂರ್ಖ ಹೇಳಿಕೆ ಕೊಟ್ಟು ಗೋ ಕರೋನ ಗೋ ಎಂದು ಜಾಗಟೆ ಬಾರಿಸುವುದನ್ನು ಮುಂದುವರೆಸಿದರು. ಈ ಮಧ್ಯೆ ಆಕ್ಸಿಜನ್ ಸಿಲಿಂಡರ್ ಗಳೂ ಕೂಡ ದಕ್ಕದೆ ದೇಶದೆಲ್ಲೆಡೆ ಜನರು ಹುಳಗಳಂತೆ ಸಾಯಲಾರಂಭಿಸಿದ್ದರು.

ಆ ವೇಳೆಗೆ ವ್ಯಾಕ್ಸಿನ್ ಮಾರುಕಟ್ಟೆಗೆ ಬಂದಿತ್ತು. 2021 ರ ಬಜೆಟ್ಟಿನಲ್ಲಿ ಉಚಿತ ವ್ಯಾಕ್ಸಿನ್ ಗೆಂದು 35000 ಕೋಟಿ ರೂ ಎತ್ತಿಟ್ಟಿದ್ದರೂ, PMCARES ಮೂಲಕ ಹತ್ತಾರು ಸಾವಿರ ಕೋಟಿ ಸುಲಿಗೆ ಸಂಗ್ರಹಿಸಿದ್ದರೂ ಮೋದಿ ಸರ್ಕಾರ ಭಾರತದ ಜನರೆಲ್ಲರಿಗೂ ವ್ಯಾಕ್ಸಿನ್ ಕೊಡಲಾಗುವುದಿಲ್ಲವೆಂದೂ, ಕೇವಲ ವೃದ್ಧರಿಗೆ ಮತ್ತು ಕೋವಿಡ್ ಯೋಧರಿಗೆ ಮಾತ್ರ ಕೊಡಲಾಗುವುದೆಂದು ಘೋಷಿಸಿತು. 18-44 ವಯಸ್ಸಿನ ಜನತೆ ಖಾಸಗಿ ಆಸ್ಪತ್ರೆಗಳಿಂದ ಕೊಂಡುಕೊಳ್ಳಬೇಕೆಂದು ಆದೇಶಿಸಿತು. ಕೋವಿ ಶೀಲ್ಡ್ ಗೆ 300 ರೂ, ಕೊವ್ಯಾಕ್ಸಿನ್ ಗೆ 1200 ರೂ, ಮತ್ತು ಸ್ಪುಟ್ನಿಕ್ ಗೆ 1000 ರೂ. ನಿಗದಿ ಮಾಡಿತ್ತು.

ಆದರೆ 2021ರ ಜೂನ್ 2ರಂದು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಸರ್ಕಾರದ ಈ ನೀತಿ ತಾರತಮ್ಯ ಮತ್ತು ಅತಾರ್ಕಿಕ ಎಂದು ಘೋಷಿಸಿತು. ಸರ್ಕಾರ ಬಜೆಟ್ಟಿನಲ್ಲಿ 35 ಸಾವಿರ ಕೋಟಿ ಎತ್ತಿಟ್ಟಿದ್ದರೂ ಉಚಿತ ವ್ಯಾಕ್ಸಿನ್ ಏಕೆ ಕೊಡಲಾಗುತ್ತಿಲ್ಲವೆಂದು ಪ್ರಶ್ನಿಸಿತು ಮತ್ತು ಎರಡು ವಾರದೊಳಗೆ 35 ಸಾವಿರ ಕೋಟು ಖರ್ಚು ಮಾಡಿರುವ ವಿವರಗಳನ್ನು ಕೋರ್ಟಿಗೆ ಸಲ್ಲಿಸಬೇಕೆಂದು ಆದೇಶಿಸಿತು.

ಸುಪ್ರೀಂ ತೀರ್ಪು ಪಾಲಿಸಿದರೆ ತನ್ನ ಜನದ್ರೋಹ ಜನರಿಗೆ ಬಯಲಾಗುವ ಭಯದಿಂದ ಜೂನ್ 7 ಕ್ಕೆ ಮೋದಿ ಸರ್ಕಾರ ಅನಿವಾರ್ಯವಾಗಿ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಕೊಡವ ನೀತಿಯನ್ನು ಘೋಷಿಸಿತು.

ಹೀಗೆ ಕೋವಿಡ್ ನಲ್ಲಿ ಭಾರತವು ಅನುಭವಿಸಿದ ಬವಣೆಗಳಿಗೆ- ಸಾವು-ನೋವುಗಳಿಗೆ ಮೋದಿ ಸರ್ಕಾರವೇ ನೇರ ಕಾರಣ. ಮೋದಿ ಸರ್ಕಾರ ಭಾರತವನ್ನು ರಕ್ಷಿಸಲಿಲ್ಲ. ಸಂಕಟಕ್ಕೆ-ಸಾವು ನೋವುಗಳಿಗೆ ದೂಡಿತು.

ಆದರೂ ಕಿಂಚಿತ್ತೂ ಪಶ್ಚಾತಾಪವಿಲ್ಲದೇ ಕೋವಿಡ್ ನಿಂದ ಭಾರತವನ್ನು ರಕ್ಷಿಸಿದ್ದು ಮೋದಿ ಸರ್ಕಾರ ಎಂದು ಬಹಿರಂಗವಾಗಿ ಸುಳ್ಳು ಹೇಳುವ ಆತ್ಮ ಸಾಕ್ಷಿ ಇಲ್ಲದ ಪಕ್ಷ ಬಿಜೆಪಿ ಪಕ್ಷ.

ಮನಸ್ಸಾಕ್ಷಿಯಿಲ್ಲದ ಇಂಥ ಕ್ರೂರ ಪ್ರಧಾನಿ, ಜನದ್ರೋಹಿ ಕಾರ್ಪೊರೇಟ್ ವಾದಿ- ಕೋಮುವಾದಿ ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆ ಎಂಬುದನ್ನು ಭಾರತದ ಜನರು ಈಗ ತೀರ್ಮಾನಿಸಬೇಕಿದೆ.

-ಶಿವಸುಂದರ್

Writer - ವಾರ್ತಾಭಾರತಿ

contributor

Editor - Riyaz

contributor

Byline - ಶಿವಸುಂದರ್,

contributor

Similar News