ಬಾನು ಮುಷ್ತಾಕ್ ಆಹ್ವಾನ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ | ಇನ್ನಾದರೂ ಬಿಜೆಪಿಗರಿಗೆ ಜ್ಞಾನೋದಯವಾಗಲಿ, ಸಂವಿಧಾನದ ಆಶಯ ಅರಿವಾಗಲಿ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ದಸರಾ ಉದ್ಘಾಟನೆಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಹೈಕೋರ್ಟಷ್ಟೇ ಅಲ್ಲ ಸುಪ್ರೀಂ ಕೋರ್ಟ್ ಕೂಡ ಕೋಮುವಾದದ ಪ್ರತಿಪಾದಕರಿಗೆ ಮುಖಭಂಗ ಮಾಡಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ಧರ್ಮ ನಿರಪೇಕ್ಷತೆ“ ನಮ್ಮ ಸಂವಿಧಾನದಲ್ಲಿ ಮೂಲಭೂತವಾಗಿರುವ ತತ್ವ. ಸಂವಿಧಾನದತ್ತವಾಗಿ ಆಯ್ಕೆಯಾದ ಸರಕಾರದ ನಿರ್ಧಾರಗಳು ಹಾಗೂ ಆಚರಣೆಗಳು ಧರ್ಮ ನಿರಪೇಕ್ಷತೆಯಿಂದ ಕೂಡಿರಬೇಕಾಗುತ್ತದೆ. ಬಾನು ಮುಷ್ತಾಕ್ ಅವರು ನಾಡಹಬ್ಬ ದಸರಾ ಉದ್ಘಾಟಿಸುವುದನ್ನು ವಿರೋಧಿಸಿ ಹಾಕಿದ್ದ ಅರ್ಜಿಯು ವಿಚಾರಣೆಗೂ ಅರ್ಹವಲ್ಲದ್ದು ಎಂದು ವಜಾಗೊಳಿಸಿ ದೇಶದ ಸಮಗ್ರತೆಯ ಆಶಯವನ್ನು ಎತ್ತಿ ಹಿಡಿದಿದೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿರಾಕರಣೆ ಮಾಡಿದ್ದು ಅರ್ಜಿ ವಿಚಾರಣೆಯನ್ನಷ್ಟೇ ಅಲ್ಲ, ಕೋಮುವಾದದ ನಿರಾಕರಣೆ, ದ್ವೇಷದ ನಿರಾಕರಣೆ, ಸಂವಿಧಾನ ವಿರೋಧಿ ನೀತಿಯ ನಿರಾಕರಣೆ, ಮಹಿಳಾ ವಿರೋಧಿತನದ ನಿರಾಕರಣೆ, ಮನುವಾದದ ನಿರಾಕರಣೆ, ಸುಪ್ರೀಂ ಕೋರ್ಟ್ ಅರ್ಜಿದಾರರ ವಾದವನ್ನೇ ಕೇಳಲು ತಯಾರಿಲ್ಲದೆ, ವಿಚಾರಣೆಗೂ ಮನ್ನಣೆ ನೀಡದೆ ಸ್ಪಷ್ಟವಾಗಿ ಕೋಮು ಪ್ರತಿಪಾದನೆಯನ್ನು ಎತ್ತಿ ಬಿಸಾಡಿದೆ. ಇನ್ನಾದರೂ ಬಿಜೆಪಿಗರಿಗೆ ಜ್ಞಾನೋದಯವಾಗಲಿ, ಸಂವಿಧಾನದ ಆಶಯ ಅರಿವಾಗಲಿ ಎಂದು ಹೇಳಿದ್ದಾರೆ.