ಕೋವಿಡ್ ಸಂದರ್ಭ ಸರಕಾರವನ್ನು ಟೀಕಿಸಿ ಆಡಿಯೊ ಕ್ಲಿಪ್ ಹಂಚಿಕೆ: ಉಳ್ಳಾಲದ ವ್ಯಕ್ತಿಯ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಣೆ
ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ರಾಜ್ಯ ಸರಕಾರ ಹಾಗೂ ಸ್ಥಳೀಯ ಶಾಸಕರನ್ನು ಟೀಕಿಸಿ ವಾಟ್ಸ್ಆ್ಯಪ್ನಲ್ಲಿ ಆಡಿಯೋ ಕ್ಲಿಪ್ ಹಂಚಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ಉಳ್ಳಾಲ ಗ್ರಾಮದ ಅಲ್ತಾಫ್ ಹುಸೇನ್ ಯಾನೆ ಅಲ್ತಾಫ್ ಮೂಸಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ವಜಾಗೊಳಿಸಿದೆ.
ಹೈಕೋರ್ಟ್ ಆದೇಶವೇನು?
ಅರ್ಜಿದಾರರ ವಿರುದ್ಧ ವಿಚಾರಣೆ ಮುಂದುವರಿಸಲು ಸೂಕ್ತ ಆಧಾರಗಳು ಇವೆ ಎಂದು ಈ ಹಂತದಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಲು ಯಾವುದೇ ವ್ಯಕ್ತಿಯು ಸಾಮರಸ್ಯವನ್ನು ಕದಡುವಂತಹ, ಶತ್ರುತ್ವವನ್ನು ಉದ್ದೀಪಿಸುವಂತಹ ಪದ ಬಳಕೆ ಮಾಡಿದರೆ ಅಥವಾ ಬರಹ ಅಥವಾ ಸಂಜ್ಞೆ ಮಾಡಿದರೆ ಐಪಿಸಿ ಸೆಕ್ಷನ್ 153A ಅನ್ವಯಿಸುತ್ತದೆ. ಕೋವಿಡ್ ಮೊದಲನೇ ಅಲೆಯ ಅವಧಿಯ ಬಗ್ಗೆ ನ್ಯಾಯಾಲಯ ಕುರುಡುತನ ವ್ಯಕ್ತಪಡಿಸಲಾಗದು. ಅರ್ಜಿದಾರರು ಬಿಡುಗಡೆ ಮಾಡಿರುವ ಆಡಿಯೊ ಕ್ಲಿಪ್ ಬೇಜವಾಬ್ದಾರಿ ಅಥವಾ ದುರುದ್ದೇಶದಿಂದ ಮಾಡಿರುವುದೋ ಎಂಬುದು ಸಂಪೂರ್ಣ ವಿಚಾರಣೆಯಿಂದ ತಿಳಿದುಬರಬೇಕಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಆಡಿಯೊ ಕ್ಲಿಪ್ ನಲ್ಲಿನ ಹೇಳಿಕೆಗಳನ್ನು ಸಂಪೂರ್ಣವಾಗಿ ಓದಲಾಗಿದ್ದು, ಅರ್ಜಿದಾರರ ಹೇಳಿಕೆಗಳು ಜನರಲ್ಲಿ ಭಯ ಸೃಷ್ಟಿಸಿ, ಕೋಮು ಶಾಂತಿ ಕದಡುವ ಸಾಧ್ಯತೆ ಇದೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ಪುಷ್ಟೀಕರಿಸುವಂತಿದೆ. ಆರೋಪ ಪಟ್ಟಿಯಲ್ಲಿ ಅಪರಾಧವನ್ನು ಬಹಿರಂಗಗೊಳಿಸಿಲ್ಲ ಎಂಬ ಅರ್ಜಿದಾರರ ವಾದವನ್ನು ಈ ಹಂತದಲ್ಲಿ ಒಪ್ಪಲಾಗದು. ಆಡಿಯೊ ಕ್ಲಿಪ್ ನಲ್ಲಿನ ವಿಚಾರಗಳು ಆರೋಪ ಪಟ್ಟಿಯ ಭಾಗವಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಯಲ್ಲಿ ಆಡಿಯೊ ಕ್ಲಿಪ್ ನಲ್ಲಿನ ಧ್ವನಿ ಅರ್ಜಿದಾರರದ್ದೇ ಎನ್ನುವುದು ಖಾತ್ರಿಯಾಗಿದೆ. ಇದು ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾದ ಪ್ರಕರಣವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ಅರ್ಜಿಗೆ ಪ್ರಾಸಿಕ್ಯೂಷನ್ ಆಕ್ಷೇಪ:
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸರಕಾರಿ ಅಭಿಯೋಜಕಿ ರಶ್ಮಿ ಜಾಧವ್, ಅರ್ಜಿದಾರರು ಸರಕಾರದ ವಿರುದ್ಧ ಮಾತ್ರವಲ್ಲದೇ, ಸ್ಥಳೀಯ ಶಾಸಕರ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನು ಶಾಸಕರು ಹಣ ಸಂಪಾದನೆಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಡಿಯೊ ಕ್ಲಿಪ್ನಲ್ಲಿ ಹೇಳುವ ಮೂಲಕ ಜನರಲ್ಲಿ ಭಯಕ್ಕೆ ಕಾರಣರಾಗಿದ್ದಾರೆ. ಪರಿಶೀಲನೆ ನಡೆಸದೇ ಜನರಿಗೆ ಬಲವಂತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, 40 ಸಾವಿರ ರೂ. ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಅರ್ಜಿದಾರರು ಉದ್ದೇಶಪೂರ್ವಕವಾಗಿ ಅದಕ್ಕೆ ಕೋಮು ಬಣ್ಣ ಹಚ್ಚಿ, ಪ್ರಚೋದನಕಾರಿ ಹೇಳಿಕಗಳನ್ನು ನೀಡಿದ್ದಾರೆ. ರಾಜ್ಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಇಂಥ ಹೇಳಿಕೆಗಳು ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತವಾಗಿವೆ. ಅರ್ಜಿದಾರರ ವಿರುದ್ಧ ಬೇರೆ ಕ್ರಿಮಿನಲ್ ಪ್ರಕರಣಗಳೂ ಬಾಕಿ ಇವೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ತಲ್ಹಾ ಇಸ್ಮಾಯೀಲ್ ಬೆಂಗ್ರೆ, ಆಡಿಯೊ ಕ್ಲಿಪ್ ಅನ್ನು ಪರಿಗಣಿಸಿದರೂ ಅದು ಆರೋಪಿತ ಅಪರಾಧವಾಗುವುದಿಲ್ಲ. ಇದನ್ನು ಬಳಕೆ ಮಾಡಿ ಪ್ರಾಸಿಕ್ಯೂಷನ್ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗಲಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಎಫ್ಐಆರ್ ರದ್ದುಪಡಿಸಬೇಕೆಂದು ಮನವಿ ಮಾಡಿದ್ದರು.