ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸರೂಪ ನೀಡುವುದು ನನ್ನ ಸಂಕಲ್ಪ : ಮುಖ್ಯಮಂತ್ರಿ
ಬೆಂಗಳೂರು : ರಾಮನಗರದ ನಗರ ಪ್ರದೇಶ ಮಾತ್ರವಲ್ಲ, ಇಡೀ ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸ ರೂಪ ನೀಡಬೇಕು ಎಂಬುದು ನನ್ನ ಸಂಕಲ್ಪ. ಈಗ ಮಾಡದಿದ್ದರೆ, ಮತ್ತೆ ಯಾವ ಸಮಯದಲ್ಲೂ ಮಾಡಲು ಸಾಧ್ಯವಿಲ್ಲ ಎಂಬ ಅರಿವಿದೆ. ಇದನ್ನು ಹಂತ ಹಂತವಾಗಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಮನಗರದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ನೇತೃತ್ವದಲ್ಲಿ ರಾಮನಗರದ ರೈತ ಮುಖಂಡರು ಹಾಗೂ ನಾಗರಿಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಮನವಿಗಳನ್ನು ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಮಾತನಾಡಿದರು.
ಈಗಾಗಲೇ ವೈದ್ಯಕೀಯ ವಿವಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗ ನಮ್ಮ ಮೇಲೆ ಜವಾಬ್ದಾರಿ ಇದೆ. ಈ ಭಾಗದ ಅನುಕೂಲಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಬಡವರಿಗೆ ಯಾವ ರೀತಿ ನಿವೇಶನ ಹಂಚಿಕೆ ಮಾಡಬೇಕು ಎಂದು ಈಗಾಗಲೇ ಶಾಸಕ ಇಕ್ಬಾಲ್ ಹುಸೇನ್ಗೆ ಮಾರ್ಗದರ್ಶನ ನೀಡಿದ್ದೇನೆ. ಮೊದಲ ಹಂತದಲ್ಲೇ ನಿವೇಶನ ಹಂಚಿಕೆಗೆ ಶೀಘ್ರದಲ್ಲೆ ಹಣ ಬಿಡುಗಡೆ ಮಾಡಲಾಗುವುದು. ಚನ್ನಪಟ್ಟಣ, ಮಾಗಡಿ, ರಾಮನಗರ, ಕನಕಪುರ ಎಲ್ಲವೂ ನನ್ನ ಕ್ಷೇತ್ರವೇ. ರಾಮನಗರ ಜಿಲ್ಲೆಯ ಕೇಂದ್ರ ಕಚೇರಿಯಾಗಿದ್ದು, ಅದಕ್ಕೆ ಎಷ್ಟು ಗೌರವ ನೀಡಬೇಕೋ ನೀಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ವಿರೋಧ ಪಕ್ಷದವರಿಂದ ಸಹಿಸಲು ಆಗುತ್ತಿಲ್ಲ: ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ನಂತರ ಹೇಗೆ ಗೌರವ ಬಂದಿದೆ?, ಜನ ನಿಮ್ಮನ್ನು ಹೇಗೆ ನೋಡುತ್ತಿದ್ದಾರೆ?, ನಿಮ್ಮ ಆಸ್ತಿ ಮೌಲ್ಯ ಎಷ್ಟಾಗಿದೆ?. ನೀವು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿ. ಬೇರೆ ಪಕ್ಷದವರು ಸಂಪರ್ಕ ಮಾಡಲು ಇಚ್ಛಿಸುತ್ತಿದ್ದಾರೆ. ಅವರನ್ನು ಸೇರಿಸಿಕೊಂಡು ಮುಂದಿನ ಚುನಾವಣೆ ಸುಗಮವಾಗಿ ನಡೆಯುವಂತೆ ಮಾಡಿ ಎಂದು ಅವರು ಹೇಳಿದರು.
ನಾವು ಅಧಿಕಾರಕ್ಕೆ ಬಂದಿರುವುದನ್ನು ವಿರೋಧ ಪಕ್ಷದವರಿಂದ ಸಹಿಸಲು ಆಗುತ್ತಿಲ್ಲ. ನಿಮಗೆ ಒಳ್ಳೆಯದಾಗುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ನನ್ನ ಹೆಸರು ಹೇಳಿಕೊಂಡು ಬರುವವರ ಬಗ್ಗೆ ಹುಷಾರಾಗಿರಿ: ನನ್ನ ಹೆಸರು ಹೇಳಿಕೊಂಡು ಕೆಲವರು ಏಜೆಂಟರಂತೆ ಬರುತ್ತಾರೆ. ಅಂತಹವರಿಂದ ಹುಷಾರಾಗಿರಿ. ನಿಮ್ಮ ಊರಿನ ಅಭಿವೃದ್ಧಿ ವಿಚಾರ ಹೊರತುಪಡಿಸಿ, ಅಧಿಕಾರಿಗಳು, ಗುತ್ತಿಗೆದಾರರ ವಿಚಾರಕ್ಕೆ ತಲೆಕೆಡಿಸಿಕೊಳ್ಳಬೇಡಿ. ಮುಖ್ಯಮಂತ್ರಿ ಜಿಲ್ಲೆ ಎಂದರೆ ಯಾವತ್ತೂ ಇಲ್ಲದ ನೆಂಟರು ಕೂಡಲೇ ಹುಟ್ಟಿಕೊಳ್ಳುತ್ತಾರೆ. ಅಂತಹವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬೇಡಿ ಅವರು ಎಂದು ಸಲಹೆ ನೀಡಿದರು.
ನಾನೇ ನಿಮ್ಮ ಕ್ಷೇತ್ರಕ್ಕೆ ಬಂದು ನಿಮಗೆ ಧನ್ಯವಾದ ತಿಳಿಸುವೆ: ನನಗೆ ಅಭಿನಂದನೆ ಸಲ್ಲಿಸಲು ನೀವು ಬಂದಿದ್ದೀರಿ. ನೀವು ಬರುವುದಕ್ಕಿಂತ ನಿಮ್ಮ ಶಾಸಕರು ಆಸ್ಪತ್ರೆಯಿಂದ ಬಂದ ನಂತರ ನಾನೇ ನಿಮ್ಮ ಕ್ಷೇತ್ರಕ್ಕೆ ಬರುತ್ತೇನೆ. ನಿಮ್ಮ ಕ್ಷೇತ್ರದ 3 ಕಡೆ ಸಭೆಗಳನ್ನು ಮಾಡಿ ಕೃತಜ್ಞತೆ ಸಲ್ಲಿಸುತ್ತೇನೆ. ನೀವು ನನಗೆ ಸನ್ಮಾನ ಮಾಡುವುದಕ್ಕಿಂತ, ನಾನು ನಿಮಗೆ ಸನ್ಮಾನ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ನಾನು ಇಲಾಖೆಗಳ ಪರಿಶೀಲನಾ ಸಭೆ ಮಾಡುತ್ತಿದ್ದೇನೆ. ಮುಂದಿನ ತಿಂಗಳು ಅಧಿವೇಶನ ಕರೆಯಬೇಕಾಗಿದೆ. ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ಅದಕ್ಕಾಗಿ ದಿಲ್ಲಿಗೆ ಹೋಗಬೇಕಾಗಿದೆ. ನೀವು ಪಕ್ಷ ಸಂಘಟನೆ ಮಾಡುವ ಬಗ್ಗೆ ಆಸಕ್ತಿ ವಹಿಸಿ. ನಿಮ್ಮ ಗುರಿ 2028 ಆಗಿರಬೇಕು ಎಂದು ಅವರು ಕರೆ ನೀಡಿದರು.
ಬಿಡದಿಯಲ್ಲಿ ಟೌನ್ ಶಿಪ್ ಯೋಜನೆ ನಾನು ಮಾಡಿದ್ದಾ? ಅವರೇ ಮಾಡಿ, ಈಗ ವಿರೋಧ ಮಾಡುತ್ತಿದ್ದಾರೆ. ಬಿಡದಿ ಟೌನ್ ಶಿಪ್ ಆದರೆ ರಾಮನಗರ, ಮಾಗಡಿ, ಕನಕಪುರದವರಿಗೂ ಲಾಭವೇ ಅಲ್ಲವೇ? ದೇವನಹಳ್ಳಿಗೆ ವಿಮಾನ ನಿಲ್ದಾಣ ಬಂದ ಕಾರಣಕ್ಕೆ ದೊಡ್ಡಬಳ್ಳಾಪುರದವರೆಗೂ ಅನುಕೂಲವಾಗಿಲ್ಲವೇ? ಟೌನ್ ಶಿಪ್ ಅನ್ನು ಅವರೇ ಡಿನೋಟಿಫಿಕೇಶನ್ ಮಾಡಬಹುದಾಗಿತ್ತು, ಮಾಡಲಿಲ್ಲ. ಚರ್ಚೆ ಮಾಡಿ ಬನ್ನಿ ಎಂದು ನಾನು ಕರೆದರೆ, ನಾನು ಬಿಡದಿಗೆ ಹೋಗಬೇಕಂತೆ. ನಾನು ಹೋಗುವುದು ಸರಿಯೇ? ಎಂದು ಕುಮಾರಸ್ವಾಮಿ ವಿರುದ್ಧ ಅವರು ಪರೋಕ್ಷ ವಾಗ್ದಾಳಿ ನಡೆಸಿದರು.
ಯಾವ ಊರನ್ನು ಒಕ್ಕಲೆಬ್ಬಿಸುವುದಿಲ್ಲ: ನಾನು ಯಾವ ಊರನ್ನು ಒಕ್ಕಲೆಬ್ಬಿಸುವುದಿಲ್ಲ. ಎಲ್ಲ ಊರುಗಳು ಅಲ್ಲೆ ಇರುತ್ತವೆ. ಆ ಊರುಗಳು ಅಭಿವೃದ್ಧಿಯಾಗುತ್ತವೆ. ಆ ಭಾಗದ ಜನರಿಗೆ ಪರಿಹಾರ ನೀಡಲಾಗುವುದು. ಎರಡು ಮೂರು ಹಳ್ಳಿಗಳನ್ನು ಸೇರಿ ಅಧಿಸೂಚನೆ ಹೊರಡಿಸುತ್ತಿದ್ದೇವೆ. ಕೆಲವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ದೂರಿದರು.