×
Ad

‘ಗೃಹಜ್ಯೋತಿ’ಗೆ ಕತ್ತರಿ ಹಾಕಲು ಮನೆ-ಮನೆ ಪರಿಶೀಲನೆ ಹುನ್ನಾರ : ಆರ್.ಅಶೋಕ್

Update: 2026-07-01 19:18 IST

ಬೆಂಗಳೂರು : ‘ವಿಧಾನಸಭೆ ಚುನಾವಣೆಗೆ ಮುನ್ನ ‘ಕಾಕಾ ಪಾಟೀಲ್‍ಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ಎಲ್ಲರಿಗೂ ಫ್ರೀ ಎಂದು ಗಂಟಲು ಹರಿದುಕೊಳ್ಳುವಂತೆ ಬೊಬ್ಬೆ ಹೊಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ, ಇಂದು ಕರ್ನಾಟಕದ ಜನತೆಗೆ ದ್ರೋಹ ಬಗೆಯಲು ಹೊರಟಿದೆ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ.

ಬುಧವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಗೃಹಜ್ಯೋತಿಗೆ ವೋಟರ್ ಕಾರ್ಡ್ ಓಕೆ, ಪ್ಯಾನ್ ಕಾರ್ಡ್ ಯಾಕೆ?, ಜಾತಿ ಪ್ರಮಾಣ ಪತ್ರ ಯಾಕೆ?. ಖಜಾನೆ ಸಂಪೂರ್ಣ ದಿವಾಳಿಯಾಗಿರುವುದನ್ನು ಮುಚ್ಚಿಡಲು, ಇದೀಗ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಸಂಖ್ಯೆಗೆ ಕತ್ತರಿ ಹಾಕಲು ಈ ಸರಕಾರ ಮನೆ-ಮನೆ ಪರಿಶೀಲನೆಯ ಹೊಸ ಹುನ್ನಾರ ನಡೆಸಿದೆ ಎಂದು ದೂರಿದ್ದಾರೆ.

‘ಗೃಹಜ್ಯೋತಿ ಫಲಾನುಭವಿಗಳ ಮರುಪರಿಶೀಲನೆ ಹೆಸರಿನಲ್ಲಿ ಮನೆಗೆ ಬರುವ ಎಸ್ಕಾಂ ಸಿಬ್ಬಂದಿಗೆ ಪ್ಯಾನ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರವನ್ನು ತೋರಿಸಬೇಕಂತೆ. ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಚುನಾವಣೆಗೆ ಮುನ್ನ ಅಧಿಕಾರಕ್ಕೆ ಬರುವ ಹಪಾಹಪಿಯಲ್ಲಿ ಯಾವುದೇ ಷರತ್ತಿಲ್ಲದೆ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿ, ಈಗ ಆದಾಯ ಮತ್ತು ಜಾತಿಯ ಆಧಾರದ ಮೇಲೆ ಅರ್ಹತೆ ನಿರ್ಧಾರ ಮಾಡಲು ಹೊರಟಿರುವುದು ಯಾವ ಸೀಮೆ ಗ್ಯಾರೆಂಟಿ ಸ್ವಾಮಿ?’ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

‘ಇಷ್ಟಕ್ಕೂ ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣ ಪತ್ರ ಯಾಕೆ?, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ನಮ್ಮ ರಾಜ್ಯದ ನಿವಾಸಿಗಳೋ, ಮತದಾರರೋ ಅಲ್ಲವೋ ಅಂತ ನಿರ್ಧಾರ ಮಾಡೋಕೆ ವೋಟರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಸಾಕು. ಆದರೆ ಅವರ ಜಾತಿ ಯಾವುದು, ಆದಾಯ ಎಷ್ಟು ಎನ್ನುವ ಮಾಹಿತಿ ಯಾಕೆ ಬೇಕು?’ ಎಂದು ಆರ್.ಅಶೋಕ್ ಕೇಳಿದ್ದಾರೆ.

‘ಪ್ಯಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಕೇಳುವ ಮೂಲಕ ನೀವು ಯಾರನ್ನು ಯೋಜನೆಯಿಂದ ಹೊರದಬ್ಬಲು ಸ್ಕೆಚ್ ಹಾಕುತ್ತಿದ್ದೀರಿ?. ಗ್ಯಾರಂಟಿಗಳನ್ನು ನಿಭಾಯಿಸಲು ಹಣವಿಲ್ಲದೆ ಒದ್ದಾಡುತ್ತಿರುವ ಈ ಲೂಟಿ ಸರಕಾರ, ಹೇಗಾದರೂ ಮಾಡಿ ಲಕ್ಷಾಂತರ ಬಡ-ಮಧ್ಯಮ ವರ್ಗದವರನ್ನು ಗೃಹಜ್ಯೋತಿಯಿಂದ ವಂಚಿಸಲು ಈ U-Turn ನೀತಿಯನ್ನು ತಂದಿದೆ. ಸುಳ್ಳು ಭರವಸೆಗಳ ಮೂಲಕ ಅಧಿಕಾರ ಹಿಡಿದು ಈಗ ಜನರನ್ನು ದಾಖಲೆಗಳ ಹೆಸರಿನಲ್ಲಿ ಸತಾಯಿಸುತ್ತಿರುವ ಈ ಜನವಿರೋಧಿ ಸರಕಾರ ಜನರ ಹಕ್ಕನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ’ ಎಂದು ಆರ್.ಅಶೋಕ್ ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News