ಗೊಂದಲದ ಗೂಡಾದ ಎಸ್ಐಆರ್ ಪ್ರಕ್ರಿಯೆ : ನೂರ್ ಶ್ರೀಧರ್
ಬೆಂಗಳೂರು : ದಲಿತರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ದುರ್ಬಲ ಸಮುದಾಯಗಳ ಮತದಾನದ ಹಕ್ಕನ್ನು ರಕ್ಷಿಸಲು ವಿಶಾಲ ಮತ್ತು ವಿಶಿಷ್ಟವಾದ ಅಭಿಯಾನವನ್ನು ರಾಜ್ಯಮಟ್ಟದಿಂದ ಬೂತ್ ಮಟ್ಟದ ವರೆಗೂ ಕಟ್ಟಲು ತೀರ್ಮಾನಿಸಿರುವ ‘ನಾಗರಿಕ ಮತ ಕಾವಲು ಸಮಿತಿ’ಯ ಲೋಗೊ ಬಿಡುಗಡೆ ಮಾಡುವ ಮೂಲಕ, ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ‘ಮತ ರಕ್ಷಣಾ ಅಭಿಯಾನ’ಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ಎಸ್ಐಆರ್ ವಿರೋಧಿ ವೇದಿಕೆ ಒಳಗೊಂಡಂತೆ ಪ್ರಗತಿಪರ, ಜಾತ್ಯತೀತ ಪಕ್ಷಗಳ ವತಿಯಿಂದ ಚುನಾವಣಾ ಆಯೋಗಕ್ಕೆ 100ಕ್ಕೂ ಹೆಚ್ಚು ಮನವಿ, ಹಕ್ಕೊತ್ತಾಯ ಪತ್ರಗಳನ್ನು ಕಳುಹಿಸಿದ್ದೇವೆ. ಆದರೆ, ಆಯೋಗವು ಇದುವರೆಗೂ ಒಂದು ಪ್ರತಿಕ್ರಿಯೆಯನ್ನೂ ನೀಡಿಲ್ಲ, ಒಂದಿಂಚಿನ ಬದಲಾವಣೆಗಳನ್ನೂ ಮಾಡಿಲ್ಲ. ಎಸ್ಐಆರ್ ಅನ್ನು ಸರ್ವಾಧಿಕಾರಿ ರೀತಿಯಲ್ಲಿ ಜಾರಿಗೊಳಿಸುತ್ತಿದೆ. ಇಡೀ ಪ್ರಕ್ರಿಯೆ ಗೊಂದಲದ ಗೂಡಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೆಲ್ಲದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲಾದ ‘ತಾರ್ಕಿಕ ವ್ಯತ್ಯಾಸ(ಲಾಜಿಕಲ್ ಡಿಸ್ಕ್ರಿಪೆನ್ಸಿ)’ ಸಾಫ್ಟ್ವೇರ್ ಅನ್ನು ಕರ್ನಾಟಕದಲ್ಲೂ ಬಳಸಲು ತೀರ್ಮಾನಿಸಿರುವುದರಿಂದ ಮತ್ತು ಬಂಗಾಳಕ್ಕಿಂತ ಹೆಚ್ಚು ಮಾನದಂಡಗಳನ್ನು ಪಟ್ಟಿ ಮಾಡಿರುವುದರಿಂದ ಒಂದು ಕೋಟಿಗಿಂತ ಹೆಚ್ಚು ಜನರಿಗೆ ಮುಂದಿನ ತಿಂಗಳು ನೋಟಿಸ್ ಜಾರಿಯಾಗುವ ಸಂಭವವಿದೆ. ಎಲ್ಲರೂ ದಾಖಲೆ ಜೋಡಿಸಲು ಪರದಾಡಬೇಕಾದ ಅರಾಜಕ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ವೀರಸಂಗಯ್ಯ ಮಾತನಾಡಿ, ‘ಮತ ಕಾವಲು ಸಮಿತಿ ವತಿಯಿಂದ ಎಸ್ಐಆರ್ ಪ್ರಕ್ರಿಯೆಯಲ್ಲಿ ಜನರಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ನಿತ್ಯದ ವಾಸ್ತವ ವರದಿ ಸಂಗ್ರಹಿಸಿ, ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು.
ಎದ್ದೇಳು ಕರ್ನಾಟಕದ ಪದಾಧಿಕಾರಿ ತಾರಾ ರಾವ್ ಮಾತನಾಡಿ, ಪ್ರತಿ ಬೂತ್ನಲ್ಲಿರುವ ಅರ್ಹ ಮತದಾರರ ಪಟ್ಟಿ ತಯಾರಾಗುವ ತುರ್ತು ಅಗತ್ಯವಿದೆ. ಆಗ ಮಾತ್ರವೇ ಡಿಲೀಟ್ ಆಗಿರುವ ಅರ್ಹ ಮತದಾರರು ಯಾರು ಎಂದು ಪತ್ತೆ ಹಚ್ಚಿ, ಅಗತ್ಯ ನೆರವು ನೀಡಲು ಅಥವಾ ಅವರ ಸೇರ್ಪಡೆಗಾಗಿ ಪಟ್ಟುಬಿಡದೆ ಹೋರಾಡಲು ಸಾಧ್ಯವಾಗುತ್ತದೆ. ಈ ಉದ್ದೇಶದೊಂದಿಗೆ ರಾಜ್ಯ ಸರಕಾರ ‘ವಿಶೇಷ ಗ್ರಾಮ/ವಾರ್ಡ್ ಸಭೆ’ಗಳನ್ನು ನಡೆಸುವ ಆದೇಶ ಹೊರಡಿಸಬೇಕು ಎಂದು ತಿಳಿಸಿದರು.
ಆಮ್ ಆದ್ಮಿ ಪಕ್ಷದ ಸೀತಾರಾಂ ಗುಂಡಪ್ಪ ಮಾತನಾಡಿ, ಕಾವಲು ಅಭಿಯಾನದ ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳಲು ಮೊ.ಸಂಖ್ಯೆ-9606087560ಗೆ ಮಿಸ್ಡ್ಕಾಲ್ ನೀಡಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿಯ ತಾಹೇರ್ ಹುಸೇನ್, ಎಸ್ಯುಸಿಐನ ಶ್ರೀರಾಮ್, ಸಿಪಿಎಂನ ಬಾಲಕೃಷ್ಣ, ದಸಂಸ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಪಿಯುಸಿಎಲ್ನ ಡಾ.ಪೂರ್ಣಾನಂದ, ಎಸ್ಡಿಪಿಐಯ ಸಲೀಂ ಅಹ್ಮದ್, ಕ್ರೈಸ್ತ ಒಕ್ಕೂಟದ ಅಲ್ಪನ್ಸ್ ಕೆನಡಿ, ವಿಚಾರವಾದಿ ಟ್ರಸ್ಟ್ನ ನಾಗೇಶ್ ಅರಳಕುಪ್ಪೆ ಭಾಗವಹಿಸಿದ್ದರು.
ಆಯೋಗಕ್ಕೆ ಮನವಿ
ಲಾಜಿಕಲ್ ಡಿಸ್ಕ್ರಿಪೆನ್ಸಿ ಸಾಫ್ಟ್ವೇರ್ನ್ನು ಕರ್ನಾಟಕದಲ್ಲಿ ಬಳಸಬಾರದು. ತರಾತುರಿ ಮಾಡದೆ ಕನಿಷ್ಠ 6 ತಿಂಗಳ ಈ ಪ್ರಕ್ರಿಯೆಯನ್ನು ಮುಂದೂಡಬೇಕು. ಕರಡು ಮತದಾರರ ಪಟ್ಟಿಯನ್ನು ಗ್ರಾಮ, ವಾರ್ಡ್ ಸಭೆಗಳಲ್ಲಿ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಬೇಕು ಎಂಬ ಹಕ್ಕೊತ್ತಾಯಗಳನ್ನು ಮತ್ತು ‘ಎಸ್ಐಆರ್ ಪ್ರಕ್ರಿಯೆಯಲ್ಲಿ ಜನರಲ್ಲಿ ಮೂಡಿರುವ ಗೊಂದಲಗಳನ್ನು ನಿವಾರಿಸಲು ಮತ್ತು ಬಿಎಲ್ಒಗಳ ಮೇಲೆ ಹೇರುತ್ತಿರುವ ಒತ್ತಡವನ್ನು ನಿವಾರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ‘ಮತ ಕಾವಲು ಸಮಿತಿ’ಯಿಂದ ಚು.ಆಯೋಗಕ್ಕೆ ಮನವಿ ಸಲ್ಲಿಸಲಾಯಿತು.
ಲಕ್ಷಾಂತರ ಅರ್ಹ ಮತದಾರರು, ವಿಶೇಷವಾಗಿ ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿ, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಎಲ್ಲ ಜಾತಿಗಳ ಬಡವರು, ಅನಕ್ಷರಸ್ಥರು ದೊಡ್ಡಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಚುನಾವಣೆಗಳು ಇಲ್ಲದಿರುವುದರಿಂದ ಪ್ರಕ್ರಿಯೆಯನ್ನು 6 ತಿಂಗಳು ಮುಂದೂಡಬೇಕು.
-ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ