ರಾಜ್ಯದಲ್ಲಿ 141 ಹಾಪ್ಕಾಮ್ಸ್ಗಳು ಬಂದ್ ಮಾಡಲಾಗಿದೆ : ಎಸ್.ಎಸ್.ಮಲ್ಲಿಕಾರ್ಜುನ್
ಬೆಂಗಳೂರು, ಆ.12: ಪ್ರತಿಷ್ಠಿತ ಮಾಲ್ಗಳು ಹಾಗೂ ಖಾಸಗಿ ವ್ಯಾಪಾರಸ್ಥರ ಪೈಪೋಟಿ ಹಾಗೂ ರಸ್ತೆ ಅಗಲೀಕರಣ ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ರಾಜ್ಯದಲ್ಲಿದ್ದ 557 ಹಾಪ್ಕಾಮ್ಸ್ ಗಳ ಪೈಕಿ 141 ಮಳಿಗೆಗಳನ್ನು ಬಂದ್ ಮಾಡಲಾಗಿದೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.
ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತರ ವೇಳೆದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹಾಪ್ಕಾಮ್ಸ್ ಮಳಿಗೆಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ರಸ್ತೆ ಅಗಲೀಕರಣ, ಮೆಟ್ರೋ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಂದಾಗಿ ಮಳಿಗೆಗಳನ್ನು ಕೆಡವಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳ ತೀವ್ರ ಪೈಪೋಟಿಗಳಿಂದ ಹಾಪ್ ಕಾಮ್ಸ್ ಗಳಲ್ಲಿ ವ್ಯಾಪಾರ ಕುಸಿತವಾಗಿದೆ. ಹೀಗಾಗಿ 557 ಮಳಿಗೆಗಳ ಪೈಕಿ 416 ಮಳಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದರು.
ಹಾಪ್ಕಾಮ್ಸ್ ಗಳಲ್ಲಿ ಮಂಜೂರಾದ 782 ಹುದ್ದೆಗಳ ಪೈಕಿ 438 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 384 ಹುದ್ದೆಗಳು ಖಾಲಿಯಿವೆ. ಇದರ ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಾಪ್ ಕಾಮ್ಸ್ ಸಂಸ್ಥೆಗೆ ವಾರ್ಷಿಕ ಶೇ.10.25ರ ಬಡ್ಡಿ ದರದಲ್ಲಿ 15 ಕೋಟಿ ರೂ. ಸಾಲ ನೀಡಲಾಗಿದೆ. ಹಾಪ್ ಕಾಮ್ಸ್ ಗಳಲ್ಲಿ ಮಾರಾಟ ಹೆಚ್ಚಿಸಲು ಹಣ್ಣು-ತರಕಾರಿ ಜೊತೆಗೆ ಇನ್ನಿತರ ಅಗತ್ಯ ವಸ್ತುಗಳ ಮಾರಾಟಕ್ಕೆ ಬೈಲಾದಲ್ಲಿ ತಿದ್ದುಪಡಿ ತರಲಾಗಿದೆ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ದೈನಂದಿನ ವಹಿವಾಟು ಹೆಚ್ಚಿಸಲು ಹೋಟೆಲ್, ಕಾರ್ಖಾನೆಗಳು, ಸಂಘ-ಸಂಸ್ಥೆಗಳಿಗೆ ಸಗಟು ದರದಲ್ಲಿ ಹಣ್ಣು-ತರಕಾರಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್ ವಾಹನಗಳ ಮೂಲಕ ಅಪಾರ್ಟ್ಮೆಂಟ್ಗಳಿಗೆ ತೆರಳಿ ವ್ಯಾಪಾರ ಹೆಚ್ಚಿಸಲು ಮುಂದಾಗಿದ್ದೇವೆ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.