×
Ad

ವಿದೇಶದಲ್ಲಿ ಅಧ್ಯಯನ ಯೋಜನೆ | 5 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳ ನೊಂದಣಿ

Update: 2025-08-16 23:22 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು, ಆ. 16: ಕೌಶಲ್ಯಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ(ಕೆವಿಟಿಎಸ್‍ಡಿಸಿ) ಮೂಲಕ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ವಿದೇಶ ಅಧ್ಯಯನ ಉಪಕ್ರಮಕ್ಕೆ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಇನ್ನಷ್ಟು ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಲಾಖೆಯು, ನಾಳೆ(ಆ.17) ನಗರದ ಹೋಟೆಲ್ ಲಲಿತ್ ಅಶೋಕ್‍ನಲ್ಲಿ ವಿದೇಶ ಅಧ್ಯಯನ ಎಕ್ಸ್‌ಪೋ ಆಯೋಜಿಸಿದೆ. ಇನ್ನಷ್ಟು ಮಂದಿ ನೊಂದಣಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ ಎಂದು ತಿಳಿಸಲಾಗಿದೆ.

ಕರ್ನಾಟಕದ ವಿದ್ಯಾರ್ಥಿಗಳಿಗೆ ಆಕರ್ಷಕ ಶೈಕ್ಷಣಿಕ ಅವಕಾಶಗಳನ್ನು ನೀಡುವ 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಶ್ವ ವಿದ್ಯಾಲಯಗಳು ಈಗಾಗಲೇ ಎಕ್ಸ್‌ಪೋ ನಡೆಯುವ ಲಲಿತ್ ಅಶೋಕ್ ಹೊಟೇಲ್‍ಗೆ ಬಂದಿವೆ. ರವಿವಾರ ಇಡೀ ದಿನ ಈ ಪ್ರದರ್ಶನ ನಡೆಯಲಿದೆ.

ಹಣಕಾಸಿನ ಸಮಸ್ಯೆಯನ್ನು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಈ ವೇದಿಕೆ ಒದಗಿಸಿಕೊಡಲಿದೆ. ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ಶಿಕ್ಷಣ ಸಾಲಗಳನ್ನು ನೀಡುವ ಮಳಿಗೆಗಳನ್ನು ಹಾಕಲಾಗಿವೆ. ಸಾರ್ವಜನಿಕ ಸಂಸ್ಥೆಯಾದ ಕರ್ನಾಟಕ ಬ್ಯಾಂಕ್ ಸರಕಾರಕ್ಕೆ ಅತ್ಯಂತ ವಿದ್ಯಾರ್ಥಿ ಸ್ನೇಹಿ ಹಣಕಾಸು ಪ್ಯಾಕೇಜ್‍ಗಳ ಭರವಸೆ ನೀಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

‘ವಿದೇಶದಲ್ಲಿ ಅಧ್ಯಯನ ಮಾಡುವುದು ಇನ್ನು ಮುಂದೆ ಶ್ರೀಮಂತರಿಗೆ ಮಾತ್ರ ಮೀಸಲಾಗಿರುವ ಸವಲತ್ತು ಅಲ್ಲ. ನಮ್ಮ ಸರಕಾರದ ಈ ಕ್ರಮದಿಂದಾಗಿ, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ವಿದ್ಯಾರ್ಥಿಗಳು ಈಗ ಆರ್ಥಿಕ ಹೊರೆಯಿಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬಹುದು. ಇದು ಭಾರತದಲ್ಲಿ ಇದೇ ರೀತಿಯ ಮೊದಲ ಯೋಜನೆಯಾಗಿದ್ದು,ಜಾಗತಿಕ ಶಿಕ್ಷಣವನ್ನು ಸಮಾಜದ ಎಲ್ಲ ವರ್ಗಗಳಿಗೂ ಲಭ್ಯವಾಗುವಂತೆ ಮಾಡಿದೆ’ ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ವಿದೇಶಕ್ಕೆ ಹೊರ ಹೋದ ನಂತರವೂ ಬೆಂಬಲ ನೀಡಲಾಗುವುದು. ಖಾಸಗಿ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ಸರಕಾರಿ ಬೆಂಬಲಿತ ಯೋಜನೆಯು ವಿದೇಶದಲ್ಲಿ ನಿರಂತರ ಸಹಾಯವನ್ನು ಒದಗಿಸುತ್ತದೆ. ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಕೆಳಕಂಡ ವೆಬ್‍ಸೈಟ್‍ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು. . http://studyabroad.ksdckarnataka.com  ಎಂದು ಪ್ರಕಟಣೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News