×
Ad

ಬೆಂಗಳೂರು| ಗುದನಾಳಕ್ಕೆ ಏರ್ ಪ್ರೆಶರ್ ಪೈಪ್‍ನಿಂದ ಗಾಳಿ ಬಿಟ್ಟ ಸ್ನೇಹಿತ:‌ ಕರುಳು ಛಿದ್ರವಾಗಿ ಯುವಕ ಸಾವು

Update: 2024-03-28 23:46 IST

ಸಾಂದರ್ಭಿಕ ಚಿತ್ರ (thehindu.com)

ಬೆಂಗಳೂರು: ತಮಾಷೆಗಾಗಿ ಸ್ನೇಹಿತನ ಗುದದ್ವಾರಕ್ಕೆ ಏರ್ ಪ್ರೆಶರ್ ಪೈಪ್‍ನಿಂದ ಗಾಳಿ ಬಿಟ್ಟ ಪರಿಣಾಮ ಒತ್ತಡ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಛಿದ್ರವಾಗಿ ಯುವಕ ಮೃತಪಟ್ಟಿರುವ ಘಟನೆ ಇಲ್ಲಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಮಾ.25ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯೋಗೇಶ್ (24) ಎಂಬಾತ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದ್ದು, ಆರೋಪಿ ಮುರುಳಿ ಎಂಬವನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೂಲತಃ ದೇವನಹಳ್ಳಿ ತಾಲೂಕಿನ ಯೋಗೇಶ್ ಥಣಿಸಂದ್ರದಲ್ಲಿ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ಫಾರ್ಮಾ ಕಂಪೆನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ತಂದೆ ಹಾಗೂ ಅಕ್ಕನೊಂದಿಗೆ ವಾಸವಾಗಿದ್ದ. ಎಪ್ರಿಲ್‍ನಲ್ಲಿ ಯೋಗೇಶ್ ಸಹೋದರಿಯ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಮದುವೆ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಿದ್ದರು.

ಮಾ.25ರ ಸಂಜೆ ಥಣಿಸಂದ್ರದ ಸಿಎನ್‍ಎಸ್ ಕಾರ್ ಸ್ಪಾ ಸರ್ವೀಸ್ ಸೆಂಟರ್‍ಗೆ ಬೈಕ್ ಅನ್ನು ಸರ್ವೀಸ್ ಮಾಡಿಸಲು ಹೋಗಿದ್ದ. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಮುರುಳಿ ಎಂಬಾತ ಯೋಗೇಶ್‍ಗೆ ಸ್ನೇಹಿತನಾಗಿದ್ದ. ಚಡ್ಡಿ ಧರಿಸಿ ನಿಂತಿದ್ದ ಯೋಗೇಶ್‍ನನ್ನು ನೋಡಿದ ಮುರುಳಿ, ತಮಾಷೆಗಾಗಿ ಹಿಂದೆಯಿಂದ ತೆರಳಿ ಏಕಾಏಕಿ ಆತನ ಗುದದ್ವಾರಕ್ಕೆ ಏರ್ ಪ್ರೆಶರ್ ನಿಂದ ಗಾಳಿ ಬಿಟ್ಟಿದ್ದಾನೆ ಎನ್ನಲಾಗಿದೆ.

ಗಾಳಿಯ ಒತ್ತಡ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಸ್ಫೋಟಗೊಂಡು ಯೋಗೇಶ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಮುರುಳಿ ಹಾಗೂ ಇನ್ನಿತರರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಮೃತಪಟ್ಟಿದ್ದಾನೆ.

ಈ ಘಟನೆ ಸಂಬಂಧ ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮುರುಳಿಯನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News