ಕಾಮ್ರೆಡ್ ಎಚ್.ವಿ.ಅನಂತ ಸುಬ್ಬರಾವ್ ನಿಧನಕ್ಕೆ ಸಿಎಂ ಸಂತಾಪ
ಬೆಂಗಳೂರು, ಜ.29: ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬಾರಾವ್ ಅವರೊಬ್ಬ ಬದ್ಧತೆಯ ಸಿಪಿಐ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ದಿವಂಗತ ಕಾಮ್ರೇಡ್ ಎಚ್.ವಿ.ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕಾಮ್ರೆಡ್ ಅನಂತ ಸುಬ್ಬರಾವ್ ಕಾರ್ಮಿಕರ ಧ್ವನಿಯಾಗಿ ಹಲವು ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ತಿಂಗಳ ಹಿಂದೆ ನಡೆದ ಕೆಎಸ್ಸಾರ್ಟಿಸಿ ನೌಕರರ ಪ್ರತಿನಿಧಿಯಾಗಿ ಅವರನ್ನು ಭೇಟಿ ಮಾಡಿದ್ದರು. ಅವರು ಕೆಎಸ್ಸಾರ್ಟಿಸಿಯ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ, ಸಿಬ್ಬಂದಿ ಯೂನಿಯನ್ ನ ಅಧ್ಯಕ್ಷರಾಗಿದ್ದರು. ಬದ್ಧತೆಯ ಜಾತ್ಯತೀತ ಹಾಗೂ ಸಿಪಿಐ ನಾಯಕರಾಗಿದ್ದರು. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವುಂಟಾಗಿದ್ದು, ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭರಿಸಲು ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಕಾರ್ಮಿಕರ ಹೋರಾಟದಲ್ಲಿ ತಮ್ಮ ಜೀವಿತದ ಕೊನೆಕ್ಷಣದವರೆಗೂ ಸಕ್ರಿಯರಾಗಿದ್ದ ಅನಂತ ಸುಬ್ಬಾರಾವ್ ಅವರು ನನಗೆ ಚಿರಪರಿಚಿತರು. ನಾನು ಸಾರಿಗೆ ಸಚಿವನಾಗಿದ್ದ ಸಂದರ್ಭದಿಂದಲೂ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ತಿಳಿಸಿದರು.