Bengaluru | ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದತಿ, ಸಾರ್ವಜನಿಕ ಶಿಕ್ಷಣ ಉಳಿವಿಗೆ ಆಗ್ರಹಿಸಿ ಧರಣಿ
ಬೆಂಗಳೂರು: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಎನ್.ಟಿ.ಎ. ರದ್ದಾಗಬೇಕು ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಲು ಆಗ್ರಹಿಸಿ AIDSO, AISF, AISA ಸಂಘಟನೆಗಳಿಂದ ಇಂದು ಫ್ರೀಡಂ ಪಾರ್ಕಿನಲ್ಲಿ ರಾಜ್ಯದ ವಿದ್ಯಾರ್ಥಿಗಳು ಧರಣಿ ನಡೆಯಿತು.
ಪ್ರತಿಭಟನೆಯನ್ನು ಬೆಂಬಲಿಸಿ ಭಾಗವಹಿಸಿ ಮಾತನಾಡಿದ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ, ಯಾವುದೇ ಸರಕಾರವಾದರೂ ಆ ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಳಿ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಆ ಮಕ್ಕಳನ್ನು ಮನುಷ್ಯರ ರೀತಿಯೂ ಭಾವಿಸದೆ ಲಾಟಿಗೆ ಮೊಳೆ ಹಾಕಿ ಹೊಡೆದಿರುವುದು ಅಮಾನವೀಯ ಎಂದರು.
ನಮ್ಮ ಸರ್ಕಾರ ಮತ್ತು ವ್ಯವಸ್ಥೆ ಎಲ್ಲಾ ಇರುವುದು ಜನರಿಗಾಗಿ. ಜನರ ಸಮಸ್ಯೆಗಳನ್ನು ಆಲಿಸಿ, ಅವರ ಬೇಡಿಕೆಗಳನ್ನು ಈಡೇರಿಸಬೇಕಿರುವುದು ಸರ್ಕಾರದ ಜವಾಬ್ದಾರಿ. ನಿಮ್ಮ ಹೋರಾಟದೊಂದಿಗೆ ಸದಾ ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ, ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ಈ ದೇಶದ ವಿದ್ಯಾರ್ಥಿಗಳು ಯುವಜನರು ಹೋರಾಟದ ಅಲೆಯನ್ನು ಎಬ್ಬಿಸಿದ್ದಾರೆ. ಯಾರು, ಈ ದೇಶದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಮುಳುಗಿ ಹೋಗಿದ್ದಾರೆ ಎಂದು ಹೇಳುವ ಈ ಸಮಾಜದಲ್ಲಿ, ಆ ವಿದ್ಯಾರ್ಥಿಗಳೇ ದೇಶ ವ್ಯಾಪ್ತಿ ಹೋರಾಟವನ್ನು ಕಟ್ಟುತ್ತಿದ್ದಾರೆ. ಈ ಸಮಯದಲ್ಲಿ ನಮ್ಮ ಪ್ರಧಾನ ಮಂತ್ರಿ ಒಂದು ವಿಡಿಯೋ ಮಾಡುವ ಮುಖಾಂತರ ಅಯ್ಯೋ ಹೀಗೆ ಆಗಬಾರದಿತ್ತು ಎಂದು ಹೇಳಿದ್ದಾರೆ ಹೊರತು, ಈ ಸಮಸ್ಯೆಯಿಂದ ಪ್ರಾಣ ಕಳೆದುಕೊಂಡ 21 ಜನ ವಿದ್ಯಾರ್ಥಿಗಳ ಬಗ್ಗೆ, ಸಮಸ್ಯೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬಗ್ಗೆ, ಎನ್. ಟಿ. ಎ ರದ್ದುಗೊಳಿಸುವ ನಿಟ್ಟಿನಲ್ಲೂ ಒಂದು ಮಾತನ್ನು ಆಡಿಲ್ಲ. ಈ ಅನ್ಯಾಯವನ್ನು ಕುರಿತು ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂದು ಪಟ್ಟಕಟ್ಟಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ಅಥವಾ ಪ್ರಧಾನ ಮಂತ್ರಿಯವರು ರಾಜೀನಾಮೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅಂತಿಮವಾಗಿ ಶಿಕ್ಷಣದ ವ್ಯಾಪಾರಿಕರಣವನ್ನು ಬಗ್ಗು ಬಡಿಯುವವರೆಗೂ ಈ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರರಾದ ಉಗ್ರ ನರಸಿಂಹೇಗೌಡ ಮಾತನಾಡಿ, ಜೆ.ಪಿ. ಚಳವಳಿಯ ನಂತರ ಇದೇ ಮೊದಲ ಬಾರಿಗೆ ಇಡೀ ದೇಶದಲ್ಲಿ ಇಂತಹ ಬೃಹತ್ ಹೋರಾಟ ಬುಗಿಲೆದ್ದಿದೆ. ಇದಕ್ಕೆ ಕಾರಣವಾಗಿರುವ ವಿದ್ಯಾರ್ಥಿ ಹೋರಾಟಗಾರರಿಗೆ ಇಡೀ ದೇಶದ ಜನರ ಪರವಾಗಿ ಅಭಿನಂದನೆ ತಿಳಿಸುತ್ತೇನೆ. ಜ್ಯೋತಿಭಾ ದಂಪತಿ ಆರಂಭಿಸಿದ ಸಾರ್ವಜನಿಕ ಶಿಕ್ಷಣ ಇಂದು ಕೇವಲ ಉಳ್ಳವರ ಪರವಾಗಿ ಬಿಟ್ಟಿದೆ. ಇದನ್ನು ಬದಲಾಯಿಸುವುದೇ ನಮ್ಮೆಲ್ಲರ ಮುಖ್ಯ ಗುರಿಯಾಗಬೇಕಿದೆ ಎಂದರು.
ರಾಜ್ಯದ ವಿವಿಧ ಯುವ ಮತ್ತು ಮಹಿಳಾ ಸಂಘಟನೆಗಳ ನಾಯಕರು ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದರು.
AIDSO ರಾಜ್ಯಾಧ್ಯಕ್ಷ ಅಶ್ವಿನಿ ಕೆ. ಎಸ್., AISF ನ ವೀಣಾ, AISA ರಾಜ್ಯ ನಾಯಕರಾದ ಆರಾತ್ರಿಕ ಹಾಗೂ ನೂರಾರು ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿ ಜನತೆ ಭಾಗವಹಿಸಿದ್ದರು.