ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ನೀಗಿಸಲು ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವೆ ಅಗತ್ಯ: ಡಾ.ಶರಣಪ್ರಕಾಶ್ ಪಾಟೀಲ್
ಬೆಂಗಳೂರು : ರಾಜ್ಯದಲ್ಲಿ ಪ್ರತಿವರ್ಷ ಸುಮಾರು 14,900 ವೈದ್ಯರು ಪದವಿ ಪಡೆದರೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಯಿದ್ದು, ಇದು ನಮ್ಮ ಮುಂದಿನ ಗಂಭೀರ ಸವಾಲು. ಕೃತಕ ಬುದ್ಧಿಮತ್ತೆ, ಟೆಲಿಮೆಡಿಸಿನ್ ಹಾಗೂ ಡಿಜಿಟಲ್ ಆರೋಗ್ಯ ಸೇವೆಗಳಂತಹ ತಂತ್ರಜ್ಞಾನ ಆಧಾರಿತ ಪರಿಹಾರಗಳು ಇಂದಿನ ಅಗತ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಶನಿವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಿಂದ ಆಯೋಜಿಸಿದ್ದ ‘ವೈದ್ಯಕೀಯ ಶಿಕ್ಷಣದ ಭವಿಷ್ಯಕ್ಕಾಗಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ’ ವಿಷಯದ ವಿಶೇಷ ಶೈಕ್ಷಣಿಕ ಸಂವಾದ-ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಅಗತ್ಯಗಳಿಗೆ ಹೊಂದುವಂತೆ ರಾಜ್ಯಕ್ಕೆ ವಿಶೇಷವಾದ ಕೃತಕ ಬುದ್ಧಿಮತ್ತೆ ಮಾದರಿಯನ್ನು ಅಭಿವೃದ್ಧಿಪಡಿಸಬೇಕಿದೆ. ವೈದ್ಯಕೀಯ ಶಿಕ್ಷಣದಲ್ಲಿ ಎಐ ಅಳವಡಿಕೆಗೆ ಸ್ಪಷ್ಟ ಹಾಗೂ ಸಮಗ್ರ ಕಾರ್ಯತಂತ್ರ ರೂಪಿಸುವುದು ಕಾಲದ ಅಗತ್ಯವಾಗಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಯನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ ವೈದ್ಯಕೀಯ ಶಿಕ್ಷಣದಲ್ಲಿ ಉತ್ಪಾದಕತೆ ಹೆಚ್ಚುವುದರ ಜೊತೆಗೆ ಬೋಧನೆ, ಕಲಿಕೆ, ಸಂಶೋಧನೆ ಹಾಗೂ ಆರೋಗ್ಯ ಸೇವೆಗಳ ಗುಣಮಟ್ಟ ಸುಧಾರಿಸಬಹುದು. ಭವಿಷ್ಯದ ವೈದ್ಯಕೀಯ ವೃತ್ತಿಪರರು ತಂತ್ರಜ್ಞಾನ ಆಧಾರಿತ ಆರೋಗ್ಯ ವ್ಯವಸ್ಥೆಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಪರಿಕರಗಳ ಬಳಕೆಯಲ್ಲಿ ಪರಿಣತಿ ಹೊಂದುವುದು ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸೂಕ್ತ ಮಾರ್ಗಸೂಚಿಗಳನ್ನು ಸಿದ್ಧಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ಆರೋಗ್ಯ ವಿವಿ ಕುಲಪತಿ ಡಾ.ಬಿ.ಸಿ.ಭಗವಾನ್ ಮಾತನಾಡಿ, ವೈದ್ಯಕೀಯ ಶಿಕ್ಷಣದಲ್ಲಿ ಸಮರ್ಥ ಮತ್ತು ಪರಿಣಾಮಕಾರಿಯಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ಮೂಲಕ ಎಐ ಕ್ರಾಂತಿಗೆ ವಿವಿ ಬದ್ಧ. ವಿವಿಯ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ಈಗಾಗಲೇ ಎಐ ಅಳವಡಿಸಿಕೊಳ್ಳಲಾಗಿದ್ದು, ಅದರ ಆರಂಭಿಕ ಫಲಿತಾಂಶಗಳು ಆಶಾದಾಯಕವಾಗಿವೆ ಎಂದರು.
ಮುಂದಿನ ದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನೆ, ಕ್ಲಿನಿಕಲ್ ತರಬೇತಿ, ಮೌಲ್ಯಮಾಪನ ಮತ್ತು ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯ ಎಲ್ಲ ಹಂತಗಳಲ್ಲಿಯೂ ಎಐ ಅನ್ನು ಸಮಗ್ರವಾಗಿ ಅಳವಡಿಸಲಾಗುವುದು. ನವೋದ್ಯಮ ಹಾಗೂ ಜಾಗತಿಕ ಸಹಭಾಗಿತ್ವದ ಮೂಲಕ ಆರೋಗ್ಯ ವಿಜ್ಞಾನ ಶಿಕ್ಷಣದಲ್ಲಿ ಗುಣಾತ್ಮಕ ಪರಿವರ್ತನೆ ತಂದು, ಕಾರ್ಯಕ್ಷಮತೆ ಹಾಗೂ ರೋಗಿಕೇಂದ್ರಿತ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲಾಗುವುದು ಎಂದು ಹೇಳಿದರು.