Bengaluru | ಮಾರಕಾಸ್ತ್ರ ತೋರಿಸಿ ಬೆದರಿಸಿ ದರೋಡೆ; ಇಬ್ಬರು ರೌಡಿಶೀಟರ್ ಸೇರಿ ಏಳು ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು : ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ದರೋಡೆ ನಡೆಸಿದ್ದ ಆರೋಪದ ಮೇಲೆ ಇಬ್ಬರು ರೌಡಿಶೀಟರ್ ಸೇರಿದಂತೆ ಒಟ್ಟು 7 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 2 ಕಾರು, 1 ಲ್ಯಾಪ್ಟಾಪ್, 1 ಮೊಬೈಲ್ ಮತ್ತು 1 ಮಾರಕಾಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಜಯ ಪ್ರಭಾಕರನ್ (28), ರೂಬನ್ (29), ಸೈಯದ್ ಮೋಸಿನ್ (22), ಮುಹಮ್ಮದ್ ಇಬ್ರಾಹಿಂ (24), ಸೈಯದ್ ಹರ್ಷದ್ (22), ಶಕೀಲ್ ಅಹಮ್ಮದ್ (32), ಸೈಯದ್ ಮೆಹಬೂಬ್ (39) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಮೇ 5ರ ಬೆಳಗ್ಗೆ ರೌಡಿಶೀಟರ್ ಒಬ್ಬ ತನ್ನ ನಾಲ್ವರು ಸಹಚರರೊಂದಿಗೆ ಡಿ.ಜೆ. ಹಳ್ಳಿಯ ಮುನಿವೀರಪ್ಪ ಲೇಔಟ್ ನಿವಾಸಿಯೊಬ್ಬರ ಮನೆಗೆ ನುಗ್ಗಿ, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಹಲ್ಲೆ ನಡೆಸಿದ್ದರು. ಮನೆಯಲ್ಲಿದ್ದ ಬೆಲೆಬಾಳುವ ಮೊಬೈಲ್ಗಳು, ಲ್ಯಾಪ್ಟಾಪ್, ವಾಚ್, ಇಯರ್ಪಾಡ್ಸ್ ಹಾಗೂ 80 ಸಾವಿರು ರೂ. ನಗದನ್ನು ದರೋಡೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಜೊತೆಗೆ ಮನೆಯ ಹೊರಗೆ ನಿಲ್ಲಿಸಿದ್ದ 1 ಕಾರು ಹಾಗೂ 1 ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನೂ ಕೊಂಡೊಯ್ದಿದ್ದಾರೆ. ಎಂದು ಮುನಿವೀರಪ್ಪ ಲೇಔಟ್ ನಿವಾಸಿಯು ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.