Bengaluru | ಕೌಟುಂಬಿಕ ಕಲಹ: ಪತ್ನಿಯ ಕೊಲೆಗೈದ ಪತಿ ಬಂಧನ
ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನೆಲೆ ದಂಪತಿ ನಡುವೆ ಜಗಳ ನಡೆದು ಕತ್ತರಿಯಿಂದ ಪತ್ನಿಯ ಕುತ್ತಿಗೆಗೆ ಚುಚ್ಚಿ ಕೊಲೆಗೈದ ಆರೋಪದಡಿ ಪತಿಯನ್ನು ಇಲ್ಲಿನ ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಅಗ್ರಹಾರ ಲೇಔಟ್ ನಿವಾಸಿ ಆಯಿಷಾ ಸಿದ್ದಿಕಿ(34) ಕೊಲೆಯಾದ ಮಹಿಳೆ. ಈ ಪ್ರಕರಣದಲ್ಲಿ ಸೈಯದ್ ಜಬಿ(42) ಎಂಬುವವ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಮೆಕ್ಯಾನಿಕ್ ವೃತ್ತಿ ಮಾಡುವ ಸೈಯದ್ ಜಬಿ ಮೂರು ತಿಂಗಳ ಹಿಂದೆಯಷ್ಟೇ ಆಯಿಷಾ ಅವರನ್ನು ಮದುವೆಯಾಗಿದ್ದು, ಆತನಿಗೆ ಇವರು ಎರಡನೇ ಪತ್ನಿಯಾಗಿದ್ದಾರೆ. ನಗರದ ಬ್ಯೂಟಿಪಾರ್ಲರ್ವೊಂದರಲ್ಲಿ ಆಯಿಷಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಾರೆ. ಡಿ.26ರ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿನಲ್ಲಿ ದಂಪತಿ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಜಗಳವಾಗಿದೆ ಎನ್ನಲಾಗಿದೆ.
ಈ ಜಗಳ ಬಹಳ ಸಮಯದವರೆಗೂ ನಡೆದಿದ್ದು, ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಸೈಯದ್ ಜಬಿ ಮನೆಯಲ್ಲಿದ್ದ ಬಟ್ಟೆ ಕತ್ತರಿಸುವ ಕತ್ತರಿಯಿಂದ ಆಯಿಷಾ ಕುತ್ತಿಗೆಗೆ ಮೂರ್ನಾಲ್ಕು ಬಾರಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದು ಸಂಪಿಗೆಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ನಗರದ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಆರೋಪಿ ಸೈಯದ್ ಜಬಿಯನ್ನು ಪೊಲೀಸರು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.