ಮೂಢನಂಬಿಕೆ ಬಿಟ್ಟು ಶಿಕ್ಷಿತರಾಗಬೇಕು : ಬಿ.ಟಿ.ಲಲಿತಾ ನಾಯಕ್
ಬೆಂಗಳೂರು : ಇಪ್ಪತ್ತೊಂದನೆ ಶತಮಾನದಲ್ಲಿಯೂ ಮಹಿಳೆಯರು ಹಿಂಸೆ, ದೌರ್ಜನ್ಯ ಮೊದಲಾದ ಅಪಮಾನ ಎದುರಿಸುತ್ತಿದ್ದಾರೆ. ಧರ್ಮ, ದೇವರ ಹೆಸರಲ್ಲಿ ನಡೆಯುವ ಮೂಢನಂಬಿಕೆ ಬಿಟ್ಟು ಶಿಕ್ಷಣವಂತರಾಗಬೇಕು ಎಂದು ಮಾಜಿ ಸಚಿವೆ ಹಾಗೂ ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಪುರುಷ ಮತ್ತು ಮಹಿಳೆ ಸಮಾಜದ ಎರಡು ಕಣ್ಣುಗಳು. ಸಂವಿಧಾನ ಮಹಿಳೆಯರಿಗೆ ಮತದಾನ, ಸಮಾನ ಹಕ್ಕು, ಕರ್ತವ್ಯಗಳನ್ನು ನೀಡಿದೆ. ಅಂಬೇಡ್ಕರ್ ಹಾಗೂ ಸಂವಿಧಾನ ಸ್ಮರಿಸಬೇಕು ಎಂದರು.
ಆರ್ಪಿಐ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ರಾಜ್ಯದ ಎಲ್ಲಾ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶ ಸಿಗಬೇಕು. ಅಭಿವೃದ್ಧಿ ಮತ್ತು ಸಮಾಜ ಸೇವೆ ಮೂಲಕ ಗುರುತಿಸಿಕೊಳ್ಳುವಂತೆ ಆಗಬೇಕು ಎಂದು ಹೇಳಿದರು.
ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಎ.ಸರೋಜದೇವಿ ಅವರಿಗೆ ಸಮಾಜ ಸೇವೆ ಮತ್ತು ಅವರ ಸಾಧನೆ ಗುರುತಿಸಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆರ್ಪಿಐ ಜಿಲ್ಲಾಧ್ಯಕ್ಷೆ ಮಂಜುಳ ಗೋಪಿ, ನಾಗರತ್ನ, ಕುಮಾರಿ, ಶೋಭಾ.ಎಂ, ಅಂಬಿಕಾ, ಶಮಾ, ರುಕ್ಮಿಣಿ, ನಾ.ಭರತ್ ತಗ್ಗಿನಮನೆ ಮತ್ತಿತರರು ಹಾಜರಿದ್ದರು.