ಕನ್ನಡ ರಾಜ್ಯೋತ್ಸವ ಆಚರಣೆಗೆ ಮುಂದಾದ ಬಿಎಚ್ಇಎಲ್ ಸಂಸ್ಥೆಗೆ ಅಭಿನಂದನೆ : ಡಾ.ಪುರುಷೋತ್ತಮ ಬಿಳಿಮಲೆ
ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ನ.1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಆಚರಣೆಗೆ ಬಿ.ಎಚ್.ಇ.ಎಲ್. ಮುಂದಾಗಿರುವ ಕ್ರಮ ಸ್ವಾಗತಾರ್ಹವೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಠಿಣ ಆಗ್ರಹಕ್ಕೆ ಸ್ಪಂದಿಸಿ ಸಂಸ್ಥೆಯ ಹಿರಿಯ ಅಧಿಕಾರಿಗಳು ತಮ್ಮೆಲ್ಲಾ ಸಹೋದ್ಯೋಗಿಗಳು, ಸಂಘ-ಸಂಸ್ಥೆಗಳನ್ನು ರಾಜ್ಯೋತ್ಸವ ಆಚರಣೆಗೆ ಆಹ್ವಾನಿಸಿರುವುದು ಅಭಿನಂದನಾರ್ಹವೆಂದಿರುವ ಅವರು, ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸಂಸ್ಥೆ ಕನ್ನಡಕ್ಕೆ ಸಲ್ಲಬೇಕಾದ ಸ್ಥಾನಮಾನವನ್ನು ಒದಗಿಸುವುದು ಅದರ ಕರ್ತವ್ಯ. ಬಿ.ಎಚ್.ಇ.ಎಲ್ ವತಿಯಿಂದ ಪ್ರಾಧಿಕಾರದ ನಿರ್ದೇಶನಕ್ಕೆ ಸಕಾಲದಲ್ಲಿ ಗೌರವ ದೊರಕಿರುವುದು ಅರ್ಥಪೂರ್ಣವಾಗಿದ್ದು, ಇದು ಇತರ ಕೇಂದ್ರೀಯ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಅವರು ಆಶಿಸಿದ್ದಾರೆ.
ಐಬಿಪಿಎಸ್ ವತಿಯಿಂದ ನವೆಂಬರ್ 2025ರಲ್ಲಿ ನಡೆಸಲು ಉದ್ದೇಶಿಸಲಾಗಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಸಿಬ್ಬಂದಿ ನೇಮಕಾತಿ ಪರೀಕ್ಷೆಯಲ್ಲಿ ಸ್ಥಳೀಯ ಭಾಷೆಯನ್ನು ಬಲ್ಲ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಐಬಿಪಿಎಸ್ ಸಂಸ್ಥೆಯ ಅಧ್ಯಕ್ಷ ರಜನೀಶ್ ಕರ್ನಾಟಕ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ ಅವರು, ಇತ್ತೀಚೆಗೆ ಗ್ರಾಮೀಣ ಬ್ಯಾಂಕುಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಬಲ್ಲದ ಅಭ್ಯರ್ಥಿಗಳ ನೇಮಕಾತಿ ಹೆಚ್ಚಾಗುತ್ತಿದ್ದು, ಇದು ಇಡೀ ಗ್ರಾಮೀಣ ಬ್ಯಾಂಕುಗಳ ಅಸ್ತಿತ್ವದ ಪರಿಕಲ್ಪನೆಯನ್ನೇ ಬುಡಮೇಲು ಮಾಡಿದೆ. ಇಂತಹ ಬ್ಯಾಂಕುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸ್ಥಳೀಯ ಸಂಸ್ಕೃತಿ ಹಾಗೂ ಅಲ್ಲಿನ ಪರಿಸ್ಥಿತಿಗಳನ್ನು ಅರಿತಿರುವುದು ಅತ್ಯವಶ್ಯಕವಾಗಿದ್ದು, ಅದು ಗ್ರಾಮೀಣ ಬ್ಯಾಂಕುಗಳ ದಕ್ಷತೆಯನ್ನು ಹೆಚ್ಚಿಸಿ ಅವುಗಳ ಅಸ್ತಿತ್ವವನ್ನು ಅರ್ಥಪೂರ್ಣವಾಗಿಸುತ್ತವೆ ಎಂದಿದ್ದಾರೆ.