ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆಯೇ ಹೆಚ್ಚು: ಡಿ.ಕೆ. ಶಿವಕುಮಾರ್
Photo: X/@DKShivakumar
ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರಗಳ ಕೊಡುಗೆಯೇ ಹೆಚ್ಚು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ 1 ಲಕ್ಷ ಕೋಟಿ ರೂ.ಮೊತ್ತದ ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ರವಿವಾರ ದಾಸರಹಳ್ಳಿ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್, 20 ವರ್ಷಗಳಲ್ಲಿ ಬೆಂಗಳೂರು ಜನತೆ 70ಲಕ್ಷದಿಂದ 1.50 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿಗೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 1ಲಕ್ಷ ಕೋಟಿ ರೂ.ಮೊತ್ತದ ಯೋಜನೆ ರೂಪಿಸಿದ್ದೇವೆ. ನಿಮ್ಮ ಕ್ಷೇತ್ರದಲ್ಲಿ ಹಾದು ಹೋಗುವ ನೆಲಮಂಗಲ ಮೇಲ್ಸೇತುವೆ ಬಿಜೆಪಿಯವರು ಮಾಡಿದ್ದಲ್ಲ, ಕೃಷ್ಣ ಭೈರೇಗೌಡ ಕ್ಷೇತ್ರದಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆ, ಹೊಸೂರು ರಸ್ತೆಯಲ್ಲಿರುವ ಮೇಲ್ಸೇತುವೆ, ಕೋಲಾರಕ್ಕೆ ಡಬಲ್ ರೋಡ್ ಮಾಡಿದ್ದು ಮನಮೋಹನ್ ಸಿಂಗ್ ಸರಕಾರದಲ್ಲಿ ಆಗಿದ್ದು. ಇಂತಹ ಯಾವುದೇ ಕಾರ್ಯಕ್ರಮವಿದ್ದರೂ ಅದು ಕಾಂಗ್ರೆಸ್ ಸರಕಾರದ ಕೊಡುಗೆಯೇ ವಿನಃ ಬಿಜೆಪಿ ಸರಕಾರವಲ್ಲ ಎಂದರು.
ಚುನಾವಣೆ ಮಾಡ್ತೀವಿ: ಬೆಂಗಳೂರು ಬೆಳೆಯುತ್ತಿದೆ. ಹೀಗಾಗಿ ನಾವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿದ್ದೇವೆ. ಇದರಲ್ಲಿ ಎಷ್ಟು ಪಾಲಿಕೆ ಮಾಡಬೇಕು ಎಂದು ಚರ್ಚೆ ಮಾಡಲು ಸಚಿವರು ಹಾಗೂ ಶಾಸಕರ ಸಭೆ ಮಾಡಿದ್ದೇನೆ. ವಾರದಲ್ಲಿ ಮತ್ತೊಂದು ಸಭೆ ಮಾಡಿ ತೀರ್ಮಾನ ಮಾಡಲಾಗುವುದು. ಪಾಲಿಕೆ ರಚಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಮಾಡುತ್ತೇವೆ. ಹೊಸ ಪಾಲಿಕೆ ಸದಸ್ಯರು ಆಯ್ಕೆಯಾಗಬೇಕು. ಮುಂದೆ ದಾಸರಹಳ್ಳಿಯಲ್ಲಿ ಶಾಸಕ ಹಾಗೂ ಕಾರ್ಪೋರೇಟರ್ ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಲು ಇತ್ತೀಚೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದೆವು. ಅದರಲ್ಲಿ 10 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆ ಒಪ್ಪಂದವಾಗಿವೆ ಎಂದರು. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಒಂದು ಮಾತು ಹೇಳಿದ್ದೆ. ಮಹಿಳೆಯರು ಹಾಗೂ ಯುವಕರು ಮನಸ್ಸು ಮಾಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದ್ದೆ. ಮಹಿಳೆಯರಿಗೆ ಉಪಕಾರ ಸ್ಮರಣೆ ಇರುತ್ತದೆ. ಹೀಗಾಗಿ ನಮ್ಮ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಮಹಿಳೆಯರಿಗಾಗಿ ಮಾಡಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಐದೂ ಗ್ಯಾರಂಟಿ ಯೋಜನೆಗಳ ಅನುμÁ್ಠನಕ್ಕೆ ಅನುಮೋದನೆ ನೀಡಲಾಯಿತು. ಆಮೂಲಕ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಪಾಲಿಗೆ ಮಂಜುನಾಥ್ ಶಾಸಕ: ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಶಾಸಕ ಮಂಜುನಾಥ್ಗೆ ಎಲ್ಲ ರೀತಿ ಹೇಳಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ, ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದ್ದೆ. ಮಂಜಣ್ಣ ನನ್ನ ಮಾತು ಕೇಳಿದ್ದರೆ, ನನ್ನ ಹಾಗೂ ಕೃಷ್ಣ ಭೈರೇಗೌಡರ ಮಧ್ಯೆ ವಿಧಾನಸೌಧದಲ್ಲಿ ಕೂರುತ್ತಿದ್ದರು. ಮಂಜಣ್ಣ ಇಲ್ಲಿ ಶಾಸಕರಾಗಿ ಗೆದ್ದಿದ್ದು, ತನ್ನ ಸಾಮಥ್ರ್ಯದ ಮೇಲೆ ಹೊರತು ಜೆಡಿಎಸ್ ಪಕ್ಷದಿಂದ ಅಲ್ಲ ಎಂದರು.
ಈಗ ಆಗಿಹೋಗಿರುವುದನ್ನು ಬಿಟ್ಟು, ಮುಂಬರುವ 2028ರ ಚುನಾವಣೆಯಲ್ಲಿ ನೀವು ಮಂಜಣ್ಣ ಅವರನ್ನು ವಿಧಾನಸೌಧದಲ್ಲಿ ಕೂರಿಸಬೇಕು. ನಮ್ಮ ಸರಕಾರ ಈ ದೇಶಕ್ಕೆ ಮಾದರಿ. ಬಿಜೆಪಿ ಭಾವನೆ ಮೇಲೆ ರಾಜಕೀಯ ಮಾಡಿದರೆ, ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ. ನಮಗೆ ನಿಮ್ಮ ಬದುಕು ಮುಖ್ಯ. ನಿಮಗೆ ಪ್ರತಿ ತಿಂಗಳು ಕನಿಷ್ಠ 5ಸಾವಿರ ರೂ.ಉಳಿತಾಯ ಆದರೆ ನಿಮಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. ಬೆಲೆ ಏರಿಕೆ ಸಮಸ್ಯೆಯಿಂದ ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ನಾಲ್ಕು ವರ್ಷ ಅಧಿಕಾರದಲ್ಲಿತ್ತು. ಬಿಜೆಪಿ ಇಂತಹ ಒಂದೇ ಒಂದು ಯೋಜನೆಯನ್ನು ನೀಡಲಿಲ್ಲ. ನಿಮ್ಮ ಶಾಸಕರು ಕೇವಲ ಬರಿ ಮಾತಲ್ಲೇ ನಿಮಗೆ ಮರಳು ಮಾಡುತ್ತಿದ್ದಾರೆ. ಖಾಲಿ ಡಬ್ಬಾದಂತೆ ಕೇವಲ ಸದ್ದು ಮಾತ್ರ ಮಾಡುತ್ತಾರೆ. ಮಂಜಣ್ಣ ಇಲ್ಲಿ ಸೋತಿದ್ದರು. 8 ಸಾವಿರ ಕುಟುಂಬಗಳ ಆಸ್ತಿಯನ್ನು ಇ ಖಾತಾ ಮಾಡುಸಿದ್ದಾರೆ. ನಮ್ಮ ಪಾಲಿಗೆ ಇಲ್ಲಿ ಮಂಜುನಾಥ್ ಅವರೇ ಶಾಸಕರು. ಅವರು ಹೇಳಿದಂತೆ ನಾವು ಕೇಳುತ್ತೇವೆ. ನಿಮ್ಮ ಆಸ್ತಿ ದಾಖಲೆ ಸರಿಪಡಿಸಿ, ಅದನ್ನು ನಿಮ್ಮ ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ ಎಂದರು.
ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡೆನು.
— DK Shivakumar (@DKShivakumar) June 1, 2025
ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘವಾದ ಇತಿಹಾಸವಿದೆ. ಪ್ರತಿಯೊಬ್ಬ ಕಾರ್ಯಕರ್ತರೂ ಕಾಂಗ್ರೆಸ್ನ ಆಸ್ತಿ. 2028ರ ಚುನಾವಣೆಯಲ್ಲೂ ನಮ್ಮ
ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ. ಪಕ್ಷದ ಆಶಯಗಳನ್ನು,… pic.twitter.com/eLDVW7D1sQ