ಕಾರ್ಪೋರೇಟ್ ಹಿಡಿತಕ್ಕೆ ಸಿಲುಕಿ ಪತ್ರಿಕೋದ್ಯಮದ ಪಾರದರ್ಶಕತೆ ಕಣ್ಮರೆ : ದಿನೇಶ್ ಗುಂಡೂರಾವ್
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಸಂಸ್ಥೆಗಳು ದೊಡ್ಡ ಉದ್ಯಮಿಗಳು ಹಾಗೂ ಕಾರ್ಪೋರೇಟ್ ವಲಯದ ಹಿಡಿತಕ್ಕೆ ಸಿಲುಕುತ್ತಿರುವುದರಿಂದ ಪತ್ರಿಕೋದ್ಯಮದಲ್ಲಿ ಪಾರದರ್ಶಕತೆ ಕಣ್ಮರೆಯಾಗುತ್ತಿದೆ ಎಂದು ಮಾಜಿ ಸಚಿವ, ಶಾಸಕ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದ್ದಾರೆ
ಬುಧವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಯಾವುದೇ ಭಯ-ಭೀತಿ ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.
ಮಾಧ್ಯಮ ರಂಗದಲ್ಲಿ ಡಿಜಿಟಲೀಕರಣದ ಪ್ರಭಾವದಿಂದ ಮಾಹಿತಿ ವಿನಿಮಯಕ್ಕೆ ಹೆಚ್ಚಿನ ವೇಗ ದೊರೆತಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಯಾವುದು ನೈಜ ಸುದ್ದಿ ಮತ್ತು ಯಾವುದು ಸುಳ್ಳು ಸುದ್ದಿ (ಫೇಕ್ ನ್ಯೂಸ್) ಎಂದು ವಿಶ್ಲೇಷಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.
ಸಾರ್ವಜನಿಕರಲ್ಲಿ ಸುದ್ದಿಯ ಇಡೀ ವರದಿಯನ್ನು ಓದುವ ತಾಳ್ಮೆ ಕಡಿಮೆಯಾಗುತ್ತಿದ್ದು, ಕೇವಲ ಮುಖ್ಯಾಂಶಗಳನ್ನು (ಹೆಡ್ಲೈನ್ಸ್) ನೋಡಿಯೇ ಅರ್ಥೈಸಿಕೊಂಡು, ತಕ್ಷಣವೇ ಪ್ರತಿಕ್ರಿಯಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಪತ್ರಿಕೋದ್ಯಮದ ವಸ್ತುನಿಷ್ಠತೆ ಮತ್ತು ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ಲೋಕಮಾನ್ಯ ತಿಲಕ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹನೀಯರು ಪತ್ರಿಕೋದ್ಯಮದ ಮೂಲಕವೇ ಜನಜಾಗೃತಿ ಮೂಡಿಸಿದ್ದರು. ಅದೇ ಹಾದಿಯಲ್ಲಿ ಇಂದಿನ ಮಾಧ್ಯಮಗಳೂ ಸಾಗಬೇಕಿದೆ. ಕರ್ನಾಟಕ ಪತ್ರಿಕಾ ಅಕಾಡಮಿಯು ಪತ್ರಕರ್ತರ ಹಿತರಕ್ಷಣೆ, ವೃತ್ತಿಪರ ಕೌಶಲ್ಯ ಅಭಿವೃದ್ಧಿ ಹಾಗೂ ಮಾಧ್ಯಮ ಕ್ಷೇತ್ರದ ಸುಧಾರಣೆಗೆ ಅಗತ್ಯವಿರುವ ಎಲ್ಲ್ಲ ರೀತಿಯ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಶ್ಲಾಘಿಸಿದರು.
ತೆಲಂಗಾಣ ಮಾಧ್ಯಮ ಅಕಾಡಮಿ ಅಧ್ಯಕ್ಷ ಕೆ.ಶ್ರೀನಿವಾಸ ರೆಡ್ಡಿ ಮಾತನಾಡಿ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಗಡಿಗಳಿಂದ ಬೇರ್ಪಟ್ಟಿದ್ದರೂ ಮಾಧ್ಯಮ ಸಂಸ್ಥೆಗಳಿಗಿರುವ ಸಮಸ್ಯೆ, ಸವಾಲುಗಳಿಂದ ಒಂದಾಗಿವೆ. ಪ್ರಾದೇಶಿಕ ಅಕಾಡಮಿಗಳು ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು. ಕರ್ನಾಟಕ ಪತ್ರಿಕಾ ದಿನಾಚರಣೆ ಆಚರಿಸಿದಂತೆ ನಮ್ಮಲ್ಲೂ ತೆಲುಗು ಪತ್ರಿಕಾ ದಿನಾಚರಣೆಯನ್ನೂ ಆಚರಿಸುವ ಅಗತ್ಯವಿದೆ ಎಂದು ಆಶಿಸಿದರು.
ಇದೇ ವೇಳೆಯಲ್ಲಿ ಮಾಧ್ಯಮ ಅಕಾಡಮಿಯ ವಾರ್ಷಿಕ ವರದಿ ಹಾಗೂ, ‘ಭಾರತೀಯ ಪತ್ರಿಕೋದ್ಯಮ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಪತ್ರಿಕಾ ಕ್ಷೇತ್ರದ ವಿವಿಧ ವಿಷಯಗಳಲ್ಲಿ ಸಂಶೋಧನೆ ನಡೆಸಿ ಮಾಧ್ಯಮ ಅಕಾಡಮಿಗೆ ವರದಿ ಸಲ್ಲಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಹಾಗೆಯೇ ಹಿಂದುಳಿದ ವರ್ಗದ ಮಾಧ್ಯಮ ಪ್ರತಿನಿಧಿಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಲ್ಯಾಪ್ ಟಾಪ್ ಮತ್ತು ಕ್ಯಾಮರಾ ಒಳಗೊಂಡ ಮೀಡಿಯಾ ಕಿಟ್ ಅನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡಮಿಯ ಅಧ್ಯಕ್ಷೆ ಆಯೇಶಾ ಖಾನಂ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ್ ಬಿಳಿಮಲೆ, ವಾರ್ತಾ ಇಲಾಖೆಯ ಆಯುಕ್ತ ಎಂ.ಎನ್.ಅನುಚೇತ್, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷರಾದ ಡಾ.ಆರ್.ಪೂರ್ಣಿಮಾ, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ., ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ಉಪನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.