ಬೂಕರ್ ಪ್ರಶಸ್ತಿಗೆ ಬಾನು ಮುಷ್ತಾಕ್ ಎಲ್ಲ ದೃಷ್ಟಿಯಿಂದಲೂ ಅರ್ಹರು : ಎಚ್.ಲ್.ಪುಷ್ಪಾ
ಬೆಂಗಳೂರು : ಕನ್ನಡದ ಲೇಖಕಿ, ಅದರಲ್ಲಿಯೂ ಅಲ್ಪಸಂಖ್ಯಾತ ಸಮುದಾಯದ ಹೋರಾಟಗಾರ್ತಿ, ಬಾನು ಮುಷ್ತಾಕ್ ಎಲ್ಲ ದೃಷ್ಟಿಯಿಂದಲೂ ಬೂಕರ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ತಿಳಿಸಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ ಜಯನಗರದ ಜೈನ್ ಯೂನಿವರ್ಸಿಟಿ ಆಫ್ ಕಾಮರ್ಸ್ನ ಸಹಯೋಗದೊಂದಿಗೆ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ‘ಬಾನು ಮುಷ್ತಾಕ್ರ ಹಸೀನಾ ಮತ್ತು ಇತರ ಕಥೆಗಳು ಕೃತಿಯನ್ನು ಕುರಿತು ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದ ಹಿನ್ನೆಲೆಯಿಂದ ಬಂದ ಒಬ್ಬ ಮಹಿಳೆ ತನ್ನದೇ ಧರ್ಮದ ಹೆಸರಿನಲ್ಲಿ ನಡೆಯುವ ಆಚರಣೆಗಳಲ್ಲಿ ಹೆಣ್ಣು ಪಡುವ ನೋವು ಬಿಚ್ಚಿಡುವ ದಿಟ್ಟತನ ಮೆರೆದಿದ್ದಾರೆ. ಅದನ್ನು ಎಲ್ಲರೂ ಮೆಚ್ಚಲೇಬೇಕು. ಅದನ್ನು ಹೇಳುವ ಸಾಹಿತ್ಯಕ ಶಕ್ತಿ ಅವರಲ್ಲಿದೆ. ಅವರು ಕನ್ನಡದ ಹೆಮ್ಮೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಲೋಕಕ್ಕೆ ಇಂತಹ ಅತ್ಯುತ್ತಮ ಅವಕಾಶ ಮೊದಲ ಬಾರಿಗೆ ಬಂದಿದೆ. ಧರ್ಮದ ಹೆಸರಿನಲ್ಲಿ ಕೆಸರು ಎರಚಿ ವಿಕೃತ ಆನಂದ ಪಡುವ ಪ್ರವೃತ್ತಿಯ ಮಧ್ಯೆ ಬಾನು ಮುಷ್ತಾಕ್ ಅವರು ತಮ್ಮ ಸೃಜನಶೀಲ ಅಭಿವ್ಯಕ್ತಿಯ ಜೊತೆ ತಮ್ಮ ಕಥೆಗಳ ಮೂಲಕ ಇಂತಹ ವಿಕೃತಿಗಳ ವಿರುದ್ಧ ದ್ವನಿ ಎತ್ತುತ್ತಿರುವುದು ಅವರ ಸಾಹಿತ್ಯಕ್ಕೆ ವಿಶೇಷ ಶಕ್ತಿಯನ್ನು ಕೊಟ್ಟಿದೆ ಎಂದರು.
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಅದು ಸಾಹಿತ್ಯ, ಬಾನು ಮುಷ್ತಾಕ್ ಅವರು ತಮ್ಮ ಕೃತಿಗಳಲ್ಲಿ ಧರ್ಮದೊಳಗಿನ ದ್ವಂದ್ವಗಳು ಮತ್ತು ಅದರಿಂದ ಹೆಣ್ಣಿನ ಮೇಲೆ ಆಗುವ ದೌರ್ಜನ್ಯ, ಸುನ್ನತಿ ಆಚರಣೆಯ ಹಿಂದಿನ ನಿಲುವುಗಳು, ಧರ್ಮದ ಒಳಗೆ ಗಂಡಿಗಿರುವ ಸ್ವಾತಂತ್ರ್ಯ ಮತ್ತು ಹೆಣ್ಣಿನ ಬಲಹೀನತೆ, ಹೀಗೆ ಧರ್ಮದ ಒಳಗೆ, ಹೊರಗೆ ನಡೆಯುವ ಹೋರಾಟ ,ಅದನ್ನು ನಿಭಾಯಿಸುವ ಭಾನು ಮುಷ್ತಾಕ್ ಅವರ ದಿಟ್ಟತನ ಆದರ್ಶಪ್ರಾಯವಾದದ್ದು ಎಂದು ಹೇಳಿದರು.
ಸಮಾಜದಲ್ಲಿರುವ ಕೆಡುಕುಗಳನ್ನು ಮಹಿಳೆ ಸಂಯಮದಿಂದ ಗೆದ್ದು ಬರುತ್ತಾಳೆ. ಈ ಸಂಯಮ ಎಲ್ಲಿಯವರೆಗೆ ಎಂದು ಪ್ರಶ್ನಿಸುವ ಬಾನು ಮುಷ್ತಾಕ್ ಅವರ ಬದುಕೇ ಉರಿಯುವ ಬೆಂಕಿ ಇದ್ದ ಹಾಗೆ. ತೃತೀಯ ಜಗತ್ತಿಗೆ ಮಹಿಳೆಯರ ಭಾವಾಭಿವ್ಯಕ್ತಿಯನ್ನು ತೆರೆದಿಡುವ ಬಾನು ಮುಷ್ತಾಕ್ ಅವರ ಸಾಹಿತ್ಯ ಕನ್ನಡದ ಓದುಗರ ಪಾಲಿಗೆ ಮಾನವತೆಯ ಕಡೆ ಹೋಗುವುದನ್ನು ಕಲಿಸುವ ಸಾಹಿತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಜೈನ್ ಯೂನಿವರ್ಸಿಟಿಯ ಭಾಷಾ ವಿಭಾಗದ ಮುಖ್ಯಸ್ಥ ಡಾ.ಎಂ.ಕೆ.ಶ್ರೀಧರ್, ಕನ್ನಡ ವಿಭಾಗದ ಸಂಯೋಜಕಿ ರಾಜೇಶ್ವರಿ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಮತ್ತಿತರರು ಹಾಜರಿದ್ದರು.